ಅಂಕಣಗಳು

Subscribe


 

ಅಧೀರಸ್ವೀಯೆ

Posted On: Tuesday, May 5th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 14ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಿಂದ ನಾಯಿಕಾ-ನಾಯಕ ಸಂಬಂಧಿತವಾದ ಕನ್ನಡ ಪದ/ಜಾವಳಿಯ ರಚನೆಗಳನ್ನು ಪ್ರಕಟಿಸಲಾಗುತ್ತಿದೆ. ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ.  ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ.

ಇಂದಿನ ನಾಯಿಕೆ- ಆಗ ತಾನೇ ತುಂಬುಕುಟುಂಬಕ್ಕೆ ಮದುವೆಯಾಗಿ ಬಂದ ತರುಣಿಯು, ತನ್ನ ಪತಿಯ ಸಾಮೀಪ್ಯವನ್ನು ಬಯಸುವಲ್ಲಿ ಆಕೆಗೆ ಎದುರಾಗುತ್ತಿರುವ ಕಾರ್ಯಭಾರ; ತನ್ನ ಪ್ರಿಯ ಪತಿ ಜೊತೆಗಿದ್ದೂ, ಆತನನ್ನು ಬಳಿಸಾರದ ಹತಾಶೆ. ಹೀಗೆ ಅಧೀರೆಯೂ, ಸ್ವೀಯೆಯೂ ಆದ ಸದ್ಗೃಹಸ್ಥೆಯ ತೊಳಲಾಟವಿಲ್ಲಿದೆ. ಇದನ್ನು ಪ್ರಪ್ರಥಮವಾಗಿ ನೃತ್ಯಭೂಮಿಕೆಗೆ ರಸಿಕಾಸ್ವಾದಕ್ಕೆ ಒದಗುವಂತೆ ಅಳವಡಿಸಿದವರು ನೃತ್ಯಕಲಾವಿದೆ ಡಾ.ಶೋಭಾ ಶಶಿಕುಮಾರ್.

ಅಧೀರಸ್ವೀಯೆ

ರಾಗ: ಆನಂದಭೈರವಿ ; ತಾಳ: ಮಿಶ್ರಛಾಪು

ತುಂಬು ಸಂಸಾರದ ಸಂಭ್ರಮವಿದು ಸಖೀ !

ಇಂಬಾಗದವನಂ ಕಾಣಲಿಕ್ಕೂ || ||

ತಾಳಿ ಕೊರಳ್ಗೆ ಬಿದ್ದ ಬಾಲೆ ಕನ್ನಿಕೆ ನಾನು

ವೀಳೆಯಕ್ಕೂ ಕಾಂತಂ ಕಾಣದಿರ್ಪಂ || ಅ.ಪ ||

 

ಬೆಳಗಾಗೆ ನೀರಿಗೆ ಹೊರಟಾಗಲವನತ್ತ

ತಿಳಿನೋಟ ಬೀರಲೆಂಬನಿತರೊಳೇ |

ಒಳಗಿದ್ದ ನಾದಿನಿ ಬಳಿಬಂದು ಸೆಳೆವಳು

ಇಳಿದು ಮತ್ತಿಂಗುವುದೆನ್ನೊಲವು ||೧ ||

 

ಮಜ್ಜಿಗೆ ಕಡೆವಾಗ, ಮಲ್ಲಿಗೆ ಮುಡಿವಾಗ

ಸಜ್ಜಿಗೆ-ತುಪ್ಪ ಬಡಿಸುವಾಗ |

ಹೆಜ್ಜೇನುಗೂಡತ್ತ ಕಾಂಬ ಕುಂಟನ ರೀತಿ

ಲಜ್ಜೆಯ ನೋಂಪಿ ಎನಗಾಯ್ತು ||೨ ||

 

ಸಂಜೆಯ ದೀಪವ ಮುಟ್ಟಿಪ ಕಾಲದಿ

ಮುಂಜಾನೆ ಹಾಲು ಕರೆವಾಗ |

ಕಂಜಾಕ್ಷಿ ! ಕಣ್ಮುಂದೆ ಕುಣಿವ ನಲ್ಲನ ರೂಪು

ಮಂಜುಗಣ್ಣಿಂದೆ ಕಂಡೇನು || ೩||

 

Leave a Reply

*

code