ಅಂಕಣಗಳು

Subscribe


 

ಆಕ್ಷೇಪವಿಕ್ಷೇಪಿಣಿ

Posted On: Thursday, August 6th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 78ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನು ತನ್ನೆಡೆಗೆ ಮಾಡಿದ ವಂಚನೆಯ ಆರೋಪಪಟ್ಟಿಗಳನ್ನು ಪ್ರಶ್ನಿಸುತ್ತ ಅದಕ್ಕೆ ಸಾಕ್ಷಿಯಾದ ಸಖಿಯ ಬಳಿ ಈ ಸಾಧಾರಣ ನಾಯಿಕೆಯು ತನ್ನ ಆಕ್ಷೇಪಗಳನ್ನು ಮುಂದಿಟ್ಟಿದ್ದಾಳೆ.  ಅಂತೆಯೇ ತಾನು ಅವನಿಗಿತ್ತ ನಲುಮೆಯೇ ತಪ್ಪಾಯಿತು; ಅವನ ಕೀರ್ತಿಗೆ ತಾನು ಕುಂದೆಣಿಸಿದೆ ಎನ್ನುತ್ತಾ ನಮ್ಮಿಬ್ಬರ ಪ್ರಣಯಕ್ಕೆ ಸಾಕ್ಷ್ಯ ಕೇಳುವಷ್ಟರ ಮಟ್ಟಿಗೆ ದಾರ್ಷ್ಟ್ಯ ತೋರಿಸಿದ್ದಾನೆ;  ತಾನು ವೇಶ್ಯೆಯಾಗಿದ್ದರೂ ಗರತಿಯಂತೆ ಅವನೊಂದಿಗೆ ನಡೆದುಕೊಂಡದ್ದೇ ತನ್ನ ಮೂರ್ಖತನ ಎಂದೂ ತನ್ನನ್ನು ಸಮರ್ಥಿಸಿಕೊಂಡು ಬೇಸರಿಸಿಕೊಂಡಿದ್ದಾಳೆ. ಇಷ್ಟಾಗಿಯೂ ತಾವಿಬ್ಬರೂ ಕೂಡಿ ಕಳೆದ ದಿನಗಳಿಗೆ ಸಾಕ್ಷಿಯು ಪ್ರಕೃತಿಯಲ್ಲಿದೆಯೆಂದೂ; ಮನ್ಮಥನನ್ನೇ ಪಂಚಾಯಿತಿಯಲ್ಲಿ ನಿಲ್ಲಿಸಿ ರಸಘಳಿಗೆಯ ಗುರುತನ್ನು ತೋರುವೆನೆಂದೂ, ರತಿಸಮಯದ ನ್ಯಾಯಸ್ಥಾನದಲ್ಲಿ ಜಯ ತನ್ನದೇ ಎಂದು ದಿಟ್ಟತನದ ಮಾತನ್ನಾಡಿದ್ದಾಳೆ. ಇದೊಂದು ವಿಪ್ರಲಬ್ಧೆ-ಖಂಡಿತಾ ನಾಯಿಕಾವಸ್ಥೆಯ ನಾಯಿಕಾಸಂಧಿ ಯ ರಚನೆ.

ಆಕ್ಷೇಪವಿಕ್ಷೇಪಿಣಿ

ರಾಗ: ಅಠಾಣ ; ತಾಳ: ಆದಿ/ಮಿಶ್ರಛಾಪು

ಅವನೆಂಬುದಂ ಕೇಳ್ದೆಯಾ – ಪ್ರಿಯಸಖೀ !

ನವೆಯಿಪ್ಪುದಂ ಕಂಡೆಯಾ ?    || ಪ||

 

ಅವನಿಗೆ ವಂಚನೆಯಂ ಗೈದೆನಂತೆ

ಕವಿಯಿಸಿ ಕಣ್ಣನು ಮುದ್ದಿಟ್ಟೆನಂತೆ |

ಯುವಕರನನ್ಯರನಾ ನೊಲ್ದೆನಂತೆ

ಅವನಿನ್ನುಮೇಲ್ ಎನ್ನ ಮರೆವನಂತೆ || ೧||

 

ನಮ್ಮಯ ಗುಟ್ಟಿನ ಬೇಟಕೆ ಕೂಟಕೆ

ಸಮ್ಮತಸಾಕ್ಷಿಗಳೆಲ್ಲ ಬೇಕಂತೆ |

ಸುಮ್ಮನೆ ಲೋಕದೊಳಾತನ ಕೀರ್ತಿಗೆ

ನೆಮ್ಮದಿ-ನಲಿವಿಗೆ ಕುತ್ತಾದೆನಂತೆ ||೨ ||

 

ತುಂಬು ನಲ್ಮೆಯ ತುಂಬಿಕೊಡುತಾಂ

ನಂಬಿದುದೆ ತಪ್ಪಾಯಿತು |

ಬೆಲೆಯವೆಣ್ಣಾಮ್ ಗರತಿಯಂದದೆ

ಕಲೆತುದೇ ಮುಪ್ಪಾಯಿತು ||೩ ||

 

(ಮಿಶ್ರಛಾಪು) ನಾವು ಕೂಡಿದ ಚೈತ್ರವನಗಳ ಹೂವು-ಹಣ್ಗಳೆ ಸಾಕ್ಷಿಗಳ್ |

ತೀವಿದಿಂದುವೆ ಶುಕ-ಪಿಕಂಗಳೆ ಜೀವಪವನನೆ ರಕ್ಷೆಗಳ್ ||  ೪ ||

 

ಮಾರನ ಪಂಚಾಯಿತಿಯೊಳು ನಿಲ್ಲಿಸಿ

ತೋರುವೆನೊಲವಿನ ರಸಗಳಿಗೆ |

ಆ ರತಿಯೇ ಕೇಳ್ ಸೂಚಕಳಾಗಿರೆ

ಸಾರದೆ ಜಯವೆನ್ನಯ ಬಳಿಗೆ? ||೫ ||

Leave a Reply

*

code