ಅಂಕಣಗಳು

Subscribe


 

ಅಸಾಧಾರಣ ಸಾಧಾರಣೆ

Posted On: Thursday, October 22nd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 94ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ಈ ನಾಯಿಕೆ ತಾನಿಷ್ಟಪಟ್ಟ ನಾಯಕನಿಗೋಸ್ಕರ ತನಗಾಗಿ ಕಾದಿದ್ದ ಅನೇಕ ವಿಟರನ್ನು ದೂರ ಮಾಡಿಕೊಂಡ ಸಾಧಾರಣೆ (ವೇಶ್ಯೆ). ವಿರಹಾಗ್ನಿಯಿಂದ ಬೆಂದಿರುವ ಆತನನ್ನು ಕರೆತರಲು ಸಖಿಯನ್ನು ಕೇಳಿಕೊಳ್ಳುತ್ತಿರುವ ಈಕೆ, ತಾನು ಆತನಿಗಾಗಿ ಪಟ್ಟಿರುವ ಸಂಕಟವನ್ನು ಹೊರಹಾಕಿದ್ದಾಳೆ. ತನ್ನ ವೃತ್ತಿ/ಕುಲಕ್ಕೆ ತನ್ನ ನಡವಳಿಕೆಯು ಒಲ್ಲದೆಂದು ಆಕೆಯ ತಾಯಿಯು ಹೇಳಿ ಛೇಡಿಸಿದರೂ, ತನ್ನ ಪ್ರಿಯಗಾಗಿ ಅವೆಲ್ಲದನ್ನ ಧಿಕ್ಕರಿಸಿ ಆತನಿಗಾಗಿ ಹಾತೊರೆದಿದ್ದಾಳೆ. ತನ್ನ ಕುಲಸಂಬಂಧಿಯಾದ ಯಾವುದೇ ಚರ್ಯೆಗಳನ್ನು ಕೈಬಿಡುವಲ್ಲಿಯೂ ಆಕೆಗೆ ಆಸಕ್ತಿಯಿಲ್ಲ. ಎಷ್ಟರಮಟ್ಟಿಗೆಂದರೆ ಆತನೊಂದಿಗೆ ತನ್ನ ಬಾಳನ್ನು ಮೇಳವಿಸಿಕೊಂಡು, ತನ್ನ ಈ ವೃತ್ತಿವಿಮುಖಳಾಗಿ ಗೃಹಿಣಿಯಂತೆಯೇ ಇದ್ದು ಬರುವ ಕ್ಲೇಶಗಳನ್ನು ತಾಳಬಲ್ಲೆನು ಎಂದೆಲ್ಲಾ ವಿರಹಾಗ್ನಿಯಿಂದ  ಬಡಬಡಿಸುತ್ತಿದ್ದಾಳೆ.

ಅಸಾಧಾರಣ ಸಾಧಾರಣೆ

ರಾಗ : ನಾಗವಲ್ಲಿ ; ತಾಳ : ಆದಿ

ನೂರೆಂಟು ವಿಟರನು ನೂಕಿದೆನಿನ್ನೀಗ |

ಬಾರೆಂದು ಕರೆಯೇ ಸರದಾರನ || ಪ ||

 

ಆ ನಿಷ್ಕರುಣಿಗಾಗಿ ನಾನೆಷ್ಟು ನೊಂದೆನೇ !

ನೀನೇ ಕರೆತಾರೇ ! ಪರದಾರನ || ಅ.ಪ ||

 

ನಮ್ಮಯ ಕುಲಕೆ ಕಳಂಕವೆಂದಮ್ಮನು

ಚಮ್ಮಟೆ ಹಿಡಿದಳು ಛೇಡಿಸುತ |

ಹಮ್ಮುಬಿಮ್ಮುಗಳನ್ನು ಕೆಮ್ಮನೆ ತೊರೆದೇನು

ಸಮ್ಮುಖಕಾತನ ಬಯಸಿದೆನು ||೧ ||

 

ಮುಜುರೆಯ ಮಾಡಲು ಮನೆಮನೆ ತಿರುಗೆನು

ಸ್ವಜನರ ಸಂಗತಿ ತೊರೆಯುವೆನು |

ನಿಜವೃತ್ತಿವೈಭವ ಮರೆವನು ನಾನಿನ್ನು

ದ್ವಿಜರಾಜಮುಖನನ್ನು ದೊರಕಿಸೆಯಾ? || ೨||

 

ತಾಳಿಯ ಕಟ್ಟಿದ ತರುಣಿಯಂತಪ್ಪೆನು

ತಾಳುವೆನೆಲ್ಲ ಕ್ಲೇಶಗಳನ್ನು |

ಮೇಳವಿಸುವೆನಿನ್ನು ಬಾಳನ್ನವನೊಳು

ತಾಳೆನು ವಿರಹವೆಂದುಸುರುವೆಯಾ ? ||೩ ||

 

 

Leave a Reply

*

code