ಅಂಕಣಗಳು

Subscribe


 

ಕಾಮಸ್ವಾಮಿನಿ

Posted On: Thursday, July 23rd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 67ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಅರಸನಾದ ನಾಯಕನನ್ನು ಸಂಬೋಧಿಸುವ ಆತನ ಸತಿಯು ಬೇಗುದಿ, ಬಿನ್ನಹ, ನೋವು, ಪ್ರಶ್ನೆಗಳನ್ನು ಮುಂದಿಡುವುದರೊಂದಿಗೆ ತಾನು ಆತನಿಗೆ ಸಂದೇಶವನ್ನು ಒಯ್ಯಲು ದೂತಿಯನ್ನು ಕಳಿಸುವ ಹಿನ್ನೆಲೆಯಲ್ಲಿ ಈ ಪದ್ಯ ಮೂಡಿದೆ. ಇಲ್ಲಿ ನಾಯಿಕೆಯ ಸಂಬೋಧನೆ ತಾನು ರಾಣಿವಾಸದವಳು ಎನ್ನುವ ನೆಲೆಯಲ್ಲಿ ‘ನಾವು’ ಎಂಬುದಾಗಿ ಮೂಡಿಬಂದಿದ್ದು;  ಈವರೆಗೆ ನಡೆಸಿದ ಸಂಧಾನವಿಧಿಗಳು ಸಾಕೆಂದು, ಈ ವಿರಹದ ಸಮಯವನ್ನು ನೂಕಿ ದಯಮಾಡಬೇಕೆಂದು ಕೇಳಿಕೊಳ್ಳುತ್ತಿದ್ದಾಳೆ. ತಾನು ಅಂತಹ ವಿರಸಗೈಯುವವಳೇ? ಅಂಥದ್ದೇನು ಬಿರುಸಾಗಿ ನುಡಿದೆನೆಂದು ಅರಸರು ಬರುತ್ತಿಲ್ಲ? ಅಥವಾ ಬೇರಾವುದಾದರೂ ಕಾರಣಗಳಿವೆಯೇ ಎಂದು ಹಂಗಿಸುತ್ತಲೇ ಪ್ರಶ್ನೆಗಳನ್ನು ಮುಂದಿಟ್ಟು  ಅಂದಾಜಿಸುತ್ತಿದ್ದಾಳೆ ಈ ವಿಪ್ರಲಬ್ಧೆ.

ಕಾಮಸ್ವಾಮಿನಿ

ರಾಗ: ತಿಲಂಗ್ ; ತಾಳ : ಆದಿ/ತ್ರ್ಯಶ್ರತ್ರಿಪುಟ

ನಾವೇನು ಅರಸಿಯರೇ ಇಲ್ಲ ನಾವೇನು ವಿರಸೆಯರೇ? ||ಪ||

 

ಸಾಕು ಸಾಕು ! ಈ ಸಂಧಾನವಿಧಿಗಳು

ನೂಕು ನೂಕು ! ಈ ಸಮಯಗಳ ||ಅ.ಪ||

 

ಬರಹೇಳೆ ಆ ದೊರೆಯ ಮಗನನ್ನು ನೀಂ,

ತರಲೇಕೆ ಕಪ್ಪ-ಕಾಣಿಕೆಯನ್ನು ತಾಂ |

ಬಿರುಸಾಗಿ ನಾವೇನು ನುಡಿದೇವು ನೋವಿಂ ;

ಅರಸರಿಗೀ ಪಾಡು ಎಂತಾದುದೋ ? ||೧ ||

 

ಮುನ್ನಿದ್ದ ದೊರೆಸಾನಿಯರು ಮರೆತರೇ?

ಬಿನ್ನಾಣಗಳು ಬೀತು ಬರಿದಾದುವೇ?

ಚೆನ್ನಿಗತನದ ರಾಜ್ಯವು ಮುರಿದುದೇ ?

ಮನ್ನೆಯ ಮಕುಟವು ಮಣ್ಣಾಯಿತೇ ? ||೨ ||

 

(ತ್ರ್ಯಶ್ರತ್ರಿಪುಟ) ಮದನಕದನದೆ ಸೋಲು ಸಂದಿತೆ?

ಮುದವು ಮರೆಯಾಯ್ತೇ?

ಚದುರುತನಗಳಿಗಿಂದು ಸಮಯವೆ?

ಸದರ ಸಡಿಲಾಯ್ತೇ? ||೩ ||

 

Leave a Reply

*

code