ಅಂಕಣಗಳು

Subscribe


 

ಮದನದಾಂಡಿಕೆ

Posted On: Wednesday, May 13th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 20ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ.  ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ.

ಇಂದಿನ ನಾಯಿಕೆ- ನಾಯಕನ ಧೀರಲಲಿತ ಸ್ವಭಾವ ನಾಯಿಕೆಯನ್ನು ಕೆರಳಿಸಿದೆ. ಮೇಲ್ನೋಟಕ್ಕೆ ಆತನಿಗೆ ಬಯ್ಯುತ್ತಿದ್ದಾಳೆ ಎಂದು ಕಂಡರೂ ಆತನ ಚೆಲ್ಲಾಟಕ್ಕೆ ತಕ್ಕ ಪ್ರೇಮಪಾಠ ಕಲಿಸುವ ಧ್ವನಿಯಿದೆ. ಆತನ ನಿರೀಕ್ಷೆಯಲ್ಲಿರುತ್ತಾ, ಬಯ್ಯುತ್ತಲೇ  ತಾನು ಗೈಯಬಹುದಾದ ಎಲ್ಲಾ ಶೃಂಗಾರ ಪ್ರತಾಪಗಳನ್ನೂ ಹವಣಿಸಿಕೊಂಡಿದ್ದಾಳೆ ಈ ವೀರವತಿ, ಮದನನ ಬಿಲ್ಲುಬಾಣಗಳನ್ನ ಹಿಡಿದು ನಿಂತ ಶೌರ್ಯವತಿ ! ಆಂತರ್ಯದಲ್ಲಿ ಸಂಭೋಗ ಶೃಂಗಾರಕ್ಕೆ ಉದ್ಯುಕ್ತಳಾದ, ನಾಯಿಕೆಯ ಬಾಹ್ಯ ಪ್ರತಿಕ್ರಿಯೆಸ್ವಾರಸ್ಯ ವಿಪ್ರಲಂಭಶೃಂಗಾರ ವೇನೋ ಎಂಬಂಥ ಭಾವವನ್ನಿತ್ತಿದೆ.

ಮದನದಾಂಡಿಕೆ

ರಾಗ: ಮೋಹನ ; ತಾಳ : ಆದಿ

ಬರಲಿ, ಬರಲಿ ಮನೆಗವನು -ಮೂಳನು !

ಇರುಳು ಸುಳಿಯದವನು- ಖೂಳನು ||ಪ||

 

ನೆಪಗಳಲ್ಲಿ ಮುಳುಗಿಸಿ ಮನ್ಮಾನಸಕುಪಟಳಿಸುವ ಖಲನು ||ಅ.ಪ||

 

ಹೊರಗೆ ವಿಹರಿಸುತಲಿರಲು ಪರರ ಸಂಕೇತಿಸುವವನು

ಮರೆಯ ಹುಡುಕಿ ಚದುರಿನಲಿ ಕರೆದು ಸಂಮೋಹಿಸುವವನು ||೧ ||

 

ವಿನಯ-ವಿಧೇಯತಾನಟನು ಅನುನಯಪಟುತಾಶಠನು

ವನಿತೇತರಸಂಗಮವನು ಅನಿತನಿತರೊಳ್ಮರೆಮಾಳ್ಪವನು || ೨||

 

ಜಡಿದಟ್ಟುವೆ; ಮುಡಿಗಟ್ಟುವೆ ಬಿಡದಿಟ್ಟಗಡಿಸುವೆ

ಸಿಡಿದೊಕ್ಕುವೆ; ನುಡಿಗಿಕ್ಕುವೆ *ಪಡಿದಕ್ಕದೊಲೆಸೆವೆ ||೩ ||

 

(ಪಡಿ- ರೇಷನ್- ಪ್ರಣಯದ ತುಟ್ಟಿಭತ್ಯೆ)

Leave a Reply

*

code