ಅಂಕಣಗಳು

Subscribe


 

ಪಾಕಪ್ರೇಮಿಕೆ

Posted On: Thursday, June 11th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 39ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಿಕೆಯು ಬಗೆಬಗೆಯಾದ ಭಕ್ಷ್ಯ, ಪಾಕ, ಪಾನೀಯಗಳನ್ನು ರೂಪಕವಾಗಿಸಿ ಅಡುಗೆಯ ಹದವನ್ನು ಪ್ರೇಮಕ್ಕೆ ಅನ್ವಯಿಸಿ ನಾಯಕನ ಇಷ್ಟಾನಿಷ್ಟಗಳನ್ನು ತಿಳಿಯುವ ಪ್ರಯತ್ನ ಮಾಡಿದ್ದಾಳೆ. ಅವನಿಗೆ ಹೊಸ ಪಾನೀಯ ಇಷ್ವವಾದೀತೇನು? ಪ್ರೇಮವೆಂಬ ವೀಳ್ಯದ ರುಚಿಯು ಹೆಚ್ಚಾದೀತೆ? – ಹೀಗೆ ಆಕೆಯ ಪ್ರಶ್ನೆಗಳೆದ್ದಿವೆ. ಆಕೆಗೆ ಅಡುಗೆ ಮಾಡುವುದಷ್ಟೇ ಅಲ್ಲ, ಬಡಿಸುವ ರೀತಿಯೂ ಗೊತ್ತು. ಚಿಂತೆಯೆಂಬ ಅಗ್ನಿಯೊಳಗೆ ಚಿತ್ತವೆಂಬ ಕಡಾಯಿಯನ್ನಿಟ್ಟು ಅಂತರಂಗದ ಒಲವಿನ ವೃತ್ತಿಗಳನ್ನು ವಿವಿಧ ರೀತಿಯಲ್ಲಿ ಹೊಂದಿಸಿ ಹೊಸ ಬಗೆಯಾದ ಷಡ್ರಸದೂಟ ಬಡಿಸಿದರೆ ಅವನಿಗೆ ಹಿಡಿಸೀತೇ ಎಂಬಲ್ಲಿಯೇ ಆಕೆಯು ನಾಯಕನ ಚಿತ್ತವನ್ನು ತನ್ನತ್ತ ಸೆಳೆಯಲು ಮಾಡಿರುವ ಪರಿಶ್ರಮವೂ, ಈಕೆಯ ಬಗೆಬಗೆಯಾದ ರತಿಪಾಕದ ವೈವಿಧ್ಯವೂ ತಿಳಿಯುತ್ತದೆ. ಅಡುಗೆಯೆಂದ ಮೇಲೆ ಹದ ಮೀರಬಾರದು, ಕುದಿಯುವಾಗ ಸೀಯಬಾರದು. ಹೊಗೆ (ಕಲಹ) ಬರಬಾರದು.  ಅದನ್ನು ತನ್ನ ಮದನಮೂರ್ತಿಗೆ ಖುಷಿಯಿಂದ ನಿವೇದನೆ ಮಾಡುವ ಹಂಬಲ. ಊಟದ ಬಳಿಕ ಫಲಸ್ವೀಕಾರದ ಬಾಬ್ತು. ತನುವೇ ಬಾಳೆಹಣ್ಣಿನ ಸಿಪ್ಪೆಯಾದರೆ, ಅದರೊಳಗಿರುವ ಫಲ ಮನದೊಲುಮೆ. ಒಟ್ಟಿನಲ್ಲಿ ಈಕೆಗೆ ಪಾಕ ಬೇರೆಯಲ್ಲ, ಪ್ರೇಮ ಬೇರೆಯಲ್ಲ.  ಇಂತಿಪ್ಪ ಅಡುಗೆಯನ್ನು  ರೆಪ್ಪೆ, ಕಣ್ಣು, ಅಧರ ಮೊದಲಾದ ಶರೀರಾಂಗಗಳ ಚಮಚಗಳಿಂದ ಬಡಿಸುವ ಅಪೇಕ್ಷೆ ; ಜೊತೆಗೆ ಆ ಪ್ರೇಮಪಾಕದ ರುಚಿಯನ್ನು ಆತ ಪರಿಗ್ರಹಿಸಿದಾಗ ಆತನಿಗೊಪ್ಪುವ  ಅನನ್ಯ ನಾಮಧೇಯಗಳ ಉಲ್ಲೇಖದಲ್ಲಿಯೇ ತಾನೂ ಪಾಕವನ್ನು ಸವಿಯಲಾದೀತು ಎನ್ನುವ ಆಶೆ ಅವಳದು. ಹೀಗೆ ನಾಯಕನ ಇಚ್ಛೆಯನ್ನಿರಿತು ನಡೆದು ಸಂಭೋಗ ಶೃಂಗಾರವನ್ನಪೇಕ್ಷಿಸುವ ಈಕೆ ಪ್ರಗಲ್ಭೆ, ಅನುಕೂಲೆ, ವಾಸಕಸಜ್ಜೆ.

ಪಾಕಪ್ರೇಮಿಕೆ

ರಾಗ : ವಲಚಿ ; ತಾಳ : ಆದಿ

ಅವನಿಗೆ ಸವಿಯಾಗದೇ ನವೋದನ

ಕವಲಿಸಲೀ ರಸಕವಲದ ಕೂರ್ಮೆಯು ||ಪ||

 

ಚಿಂತಾಗ್ನಿಯೊಳಿಟ್ಟು ಚಿತ್ತಕಟಾಹವ ಆಂತರ್ಯದೊಲವಿನ ವೃತ್ತಿಗಳ |

ಪಂತವಿಡಿದು ಪೊಸ ಷಡ್ರುಚಿಗಳೊಡಂ ಸಂತವಿಸುತೆ ನಾಂ ಪಾಚಿಸಲು || ೧||

 

ಹದವದು ಮೀರದೆ, ಕುದಿತದಿ ಸೀಯದೆ ತದಿತರಕಲಹದ ಹೊಗೆಯಿರದೆ |

ಮದನನ ಮೂರ್ತಿಗೆ ಮುದದಿ ನಿವೇದಿಸಿ ಚದುರಿಂದೀಯಲು ನಯವರಿತು ||೨ ||

 

ತನುಕದಳೀದಳದೊಳು ನಳನಳಿಸುವ ಮನದೊಲುಮೆಯು ಪರಿಮಳಿಸಿರುವ |

ಅನಿಮಿಷನಯನಾಧರ-ಪಯೋಧರ ಘನಜಘನಾದಿಚಮಸದಿಂ ಬಡಿಸೆ || ೩||

 

Leave a Reply

*

code