ಅಂಕಣಗಳು

Subscribe


 

ರಕ್ತಿವಿಭಕ್ತೆ

Posted On: Tuesday, July 21st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 66ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ನಾಯಕನು ಬಂದಿಲ್ಲವೆಂಬ ಕಾರಣಕ್ಕೆ ಎಷ್ಟೋ ದಿನಗಳಿಂದ ಕಾದು ಹೈರಾಣಾದ ಪ್ರೋಷಿತಪತಿಕಾ ನಾಯಿಕೆಯು ಹೇಗೆ ಅವನೆಡೆಗಿನ ತನ್ನ ಒಂದೊಂದೇ ರಕ್ತಿಯನ್ನು ಕೈಬಿಡುತ್ತಾ ಬಂದಿದ್ದೇನೆಂಬುದನ್ನು ಹೇಳುವಲ್ಲಿ  ತನ್ನ ಅವಸ್ಥೆಯನ್ನೂ, ಅದರೊಂದಿಗೆ ತನ್ನನ್ನು ಕಾಣುತ್ತಾ ಖಿನ್ನರಾಗಿರುವ ಗೆಳತಿಯರು, ಹಿರಿಯರು, ಬಾಂಧವರು, ನೆರೆಹೊರೆಯವರು, ಮೊದಲಾದವರ ನಡವಳಿಕೆಯನ್ನು ವಿವರಿಸಿದ್ದಾಳೆ. ಹೀಗೆ  ನಾಯಕನ ಬರುವಿಕೆಗಾಗಿ ಎದಿರು ನೋಡುತ್ತಾ ಕಂಬನಿ, ಚಿಂತೆ, ದೈನ್ಯ, ಕಾತರತೆ, ಹಾತೊರೆತ, ಮಾತುಕತೆ, ಆಶೆನಿರಶೆ, ವ್ಯಥೆ, ಬೇಸರ ಮೊದಲಾದ ಭಾವಗಳೆಲ್ಲಾ ಕಳೆದ ಮೇಲೆ ನಾಯಿಕೆಯಲ್ಲಿ ಇನ್ನುಳಿದಿರುವುದು ಶ್ವಾಸ ! ಹೀಗೆ ಬಿಸಿಯುಸಿರು ಕೂಡಾ ನಿಂತ ಮೇಲೆ ನಿಶ್ಚಲತೆಯೊಂದೇ ತನ್ನ ಪಾಲಿಗೆ ಎಂದು ಧ್ವನಿಸಿದ್ದಾಳೆ. ಜೊತೆಗೆ ನಲ್ಲನು ದೂರವಾದುದ್ದೇಕೆಂಬುದೇ ತಿಳಿಯದಂತಾಗಿದೆ.  ಅದರ ಭಾರವನ್ನು ಬೇರೊಂದು ಜೀವವು ವಹಿಸುವಂತೆ ಮಾಡುವುದು ಸರಿಯೇ ಎಂದು ಸಂಕಟವನ್ನು ಹೊರಹಾಕಿದ್ದಾಳೆ.  ಇದೇ ಪದ್ಯವನ್ನು ವಿರಹೋತ್ಕಂಠಿತೆಯನ್ನಾಗಿಯೂ ರೂಪಿಸಿಕೊಳ್ಳಬಹುದಾಗಿದೆ.

ರಕ್ತಿವಿಭಕ್ತೆ

ರಾಗ : ನಾದನಾಮಕ್ರಿಯಾ; ವಿತಾಲಬಂಧ

ಕಂಬನಿಯು ಕೆಳದಿಯರ ಗುತ್ತಿಗೆಗೆ ಸೇರಿತ್ತು

ಚಿಂತೆಗುರುಜನರಲ್ಲಿ ನಂಟಾಯಿತು

 

ದೈನ್ಯವಾತ್ಮೀಯರೊಳು ದೃಢಮೈತ್ರಿ ಗಳಿಸಿತ್ತು

ಕಾತರತೆ ಚೇಟಿಯರಿಗೊಪ್ಪಾಯಿತು

 

ಹಾತೊರೆತ ನೆರೆಕರೆಯ ನೀರೆಯರ ನಂಬಿತ್ತು

ಮಾತು-ಕತೆಯೊಡವುಟ್ಟಿದರ ಕಾಡಿತು

 

ಆಶಾನಿರಾಶೆಯದು ಬಾಂಧವರ ಬೆರೆತಿತ್ತು

ಮಾನಸವ್ಯಥೆ ಮಾನಿತರ ಮೆಟ್ಟಿತು

 

ಶ್ವಾಸವೊಂದುಳಿದಿಹುದು ದಿನಗಳನ್ನೆಣಿಸಿ, ಗಣಿಸಿ;

ಬೇಸರಿಸಿ ಬಿಸಿಯುಸಿರು ನಿಂತು ನಿಶ್ಚಲತೆಯಾಂತು

 

ದೂರಸರಿದೇಕೆ ಬಯಲಲ್ಲಿ ಬಯಲಾಗದಿನ್ನು?

ಭಾರವಿದನನ್ಯರಿನ್ನೇಕೆ ವಹಿಸದಿಹರಹಹ !!

 

Leave a Reply

*

code