ಅಂಕಣಗಳು

Subscribe


 

ಸಾಂತ್ವನಸ್ವೀಯೆ

Posted On: Monday, June 8th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 36ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಿರೀಕ್ಷಕನಾಗಿ ನಾಯಿಕೆಯ ಬರವನ್ನೇ ಕಾಯುತ್ತಿದ್ದ ನಾಯಕನಿಗೆ ಆಕೆಯ ವಿಳಂಬ ಅಸಹನೆ ತರಿಸಿದೆ. ಕುಪಿತನಾದ ನಾಯಕನನ್ನು ಸಮಾಧಾನಿಸುವ, ಸಾಂತ್ವನದ ನುಡಿಗಳನ್ನಾಡುತ್ತಾ ಪ್ರಣಯಕ್ಕೆ ಆಹ್ವಾನಿಸುವ ನಾಯಿಕೆಯ ಪರಿ ಇಲ್ಲಿದೆ. ಆಕೆ ಸಮಾಧಾನಿಸಿದಂತೆಲ್ಲಾ ಬಿಗಿಯಾಗುವ ನಾಯಕನನ್ನು ಕೊಂಡಾಡುತ್ತಾ, ತನ್ನ ಅಸಹಾಯಕತೆಯನ್ನು, ಆತನೆಡೆಗೆ ಬರುವ ಹೊತ್ತಿಗೆ ಉಂಟಾದ ವಿಘ್ನಗಳನ್ನು ವಿವರಿಸಿದ್ದಾಳೆ. ಆತನಷ್ಟು ಅನುಕೂಲ ತನಗಿಲ್ಲ, ಮನೆಯ ಕೆಲಸಗಳೆಲ್ಲವನ್ನೂ ಮುಗಿಸಿ, ತನ್ನ ಸುತ್ತಮುತ್ತಲಿನವರನ್ನು ಅನುನಯಿಸಿ ಮಲಗುವ ಮನೆಗೆ ಬರುವ ಹಿಂದಿನ ಸವಾಲುಗಳನ್ನು ಹೇಳಿದ್ದಾಳೆ. ಅಂತೆಯೇ ಮಿಡುಕುವ ಇನಿಯನ ಬೇಗೆಯನ್ನು ತಣಿಸುವ ಉಪಾಯಗಳನ್ನು ಮಾಡುತ್ತಾ;  ತಡವಾದ ಭೋಜನ ಹಸಿದವನಿಗೆ ರುಚಿಯೆಂದು, ಕಡಲನ್ನು ಕೂಡುವ ನದಿಯು ತೊಡರಿ, ಬಳುಕಿ ಬರಲೇ ಸೊಗಸು ಎಂದೂ  ಪ್ರಣಯಪಾಠವನ್ನು ಸೂಚ್ಯವಾಗಿ ಬೋಧಿಸಿದ್ದಾಳೆ. ಇದೇ ಪದ್ಯವನ್ನು ಸ್ವೀಯಾ ನಾಯಿಕೆಗೆ ಬಳಸಿಕೊಂಡಂತೆ ಪರಕೀಯ ನಾಯಿಕೆಯಾಗಿಯೂ ಚಿತ್ರಿಸಿಕೊಳ್ಳಬಹುದಾಗಿದ್ದು; ಪದ್ಯವೊಂದು ಏಕಕಾಲಕ್ಕೆ ಎರಡು ವಿಭಿನ್ನವಾದ ಅಭಿನಯಸ್ವಾರಸ್ಯವಾಗಿ ತೋರಿಕೊಳ್ಳುವ ಸಾಧ್ಯತೆಗಳನ್ನೂ ಕಲಾವಿದರು ಕಂಡುಕೊಳ್ಳಬಹುದಾಗಿದೆ.

ಸಾಂತ್ವನಸ್ವೀಯೆ

ರಾಗ : ಪಟದೀಪ್ ; ತಾಳ : ಆದಿ 

ಹೊತ್ತು ಮಾಡಿದೆನೆಂದು ಮುನಿಯುವುದೇ – ನಲ್ಲ !

ಮತ್ತಷ್ಟು ಬಿಗಿಯಾಗಿ ಬೀಗುವುದೇ ? ||  ||

 

ಕೂಟದ ಬೇಟಕೆ ನೂರೆಂಟು ವಿಘ್ನವೆಂ-

ಬಾಟದ ಮಾತನು ಮರೆಯುವುದೇ?  || ಅ.ಪ ||

 

ನೀನೇನೋ ಸರದಾರ; ತೊಂಡುಗೆಡೆವ ಗಂಡು

ನಾನೆಲ್ಲಿ ? ಮುಗ್ಧೆ, ಮನೆಯ ದಿಗ್ಧೆ |

ನೀನು ಬಂದಂತಾನುಂ ಸರಸರ ಬರಲಿಕ್ಕೆಂ-

ತಾನುಮಪ್ಪುದು ಪೇಳೊ ಸಮಯಮಯ ! ||೧ ||

 

ಕೆಲವರ ಮರೆಯಿಸಿ; ಕೆಲವರ ಮೆರೆಯಿಸಿ

ಕೆಲವರ ಕಣ್ಣಿಗೆ ಮಣ್ಣೆರಚಿ | 

ಕೆಲರಿಗೆ ಹುಸಿದು, ಕೆಲರಿಗೆ ಹೊಸೆದು

ಕಲೆಯಲು ಬರುವೆನಾಂ ನಿನ್ನಲ್ಲಿ ||೨ ||

 

ತಡವಾದ ಭೋಜನ ಬಲುರುಚಿಯಲ್ಲವೇ !

ಮಿಡುಕೂ ಮೋಹದೆ ಮಧುರವಲಾ !

ಕಡಲನು ಕೂಡುವ ನದಿಯಂದದಿ ನಾಂ

ತೊಡರಿ ಬಳುಕಿ ಬರಲದೆ ಸೊಗಸು ||೩ ||

 

Leave a Reply

*

code