ಅಂಕಣಗಳು

Subscribe


 

ಸ್ಮೇರಸಖಿ

Posted On: Thursday, October 15th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 92ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ನಾಯಿಕಾ -ನಾಯಕರ ಕ್ಷೇಮ ಸಂತೋಷಕ್ಕಾಗಿ ಪ್ರಯತ್ನಿಸುವ ಈ ಸಖಿ ಅವರಿಬ್ಬರ ನಡುವಿನ ಮುನಿಸು ಬಗೆಹರಿದು ಒಂದಾಗುವಲ್ಲಿ ಸಮಾಧಾನದ ಮಾತುಗಳಿಂದ ಅವರನ್ನು ಎದುರುಗೊಳ್ಳುತ್ತಾ, ಮೊದಲಿನ ಪರಿತಾಪಗಳನ್ನು ನೆನೆದು ನಿಟ್ಟುಸಿರಿಟ್ಟಿದ್ದಾಳೆ. ಖಂಡಿತಾವಸ್ಥೆ ಯಲ್ಲಿದ್ದವರು ಕಲಹಾಂತರಿತರಾಗಿ ಪರಸ್ಪರ ಒಪ್ಪಿ ಆದರಿಸಿಕೊಂಡ ಸುಖಾಂತ್ಯ ಪ್ರಕರಣವನ್ನು ಗಮನಿಸಿ ಸಂತೋಷಿಸಿದ್ದಾಳೆ. ಪ್ರೇಮ-ಕಾಮಗಳಲ್ಲಿ ಪರಸ್ಪರ ಎರಡು ಧ್ರುವಗಳಂತೆ ಇದ್ದವರು ಅಂತೂ ಕವಲು – ವೈಮನಸ್ಯ- ಕಳವಳಗಳನ್ನು ಕಳೆದುಕೊಂಡು ಸೌಖ್ಯ ಪಡೆದುದನ್ನು ಮತ್ತೆ ಮತ್ತೆ ಹೇಳುತ್ತಾ ತನ್ನ ಅನುಭವವನ್ನು ಖಚಿತಗೊಳಿಸಿಕೊಳ್ಳುತ್ತಿದ್ದಾಳೆ.

ಸ್ಮೇರಸಖಿ

ರಾಗ: ಆಂದೋಳಿಕಾ ; ತಾಳ : ತ್ರ್ಯಶ್ರಗತಿ ಆದಿ

ಮುನಿಸು ತೀರಿತೇ – ನಿಮ್ಮಿಬ್ಬರ | ಮನವು ಸೇರಿತೇ ? || ಪ ||

ಅಂತೂ ಈ ದಿನ ಕೂಡಿಬಂತೇ | ಕಂತುಕಲಹದೆ ಸಂಧಿಯಾಯ್ತೆ ? || ಅ.ಪ ||

 

ಶಯ್ಯೆಯಲ್ಲಿ ಬೆನ್ನು ಬೆನ್ನನ್ನೊಯ್ಯನೆ ಕಂಡಾ ದಿನಗಳು |

ಮುಯ್ಯಿ ತೀರಿ ಮಾಸಿ ಹೋಗಿ ಮೆಯ್ಯ ಮಿಲನ ಫಲಿಸಿತೇ ? || ೧||

 

ಧ್ರುವಗಳೆರಡು ವಿಮುಖವಿದ್ದ ತವಕ-ತಪನೆ ಕೂಡಿಕೊಂಡ |

ಕವಲು ಕಳವಳಗಳ ರಾತ್ರಿ ಸವೆದು ಸೌಖ್ಯ ಸಂದಿತೇ ? || ೨||

 

ಹಳೆಯ ವೈಮನಸ್ಯ ಹೇತುಗಳಿಗೆ ಮುಪ್ಪು ಬಂದಿತೇ?

ಹೊಳೆವ ಹೊಸತು ಹಾರ್ದಭಾವಗಳಿಗೆ ಘಳಿಗೆ ತುಂಬಿತೇ ? || ೩||

Leave a Reply

*

code