ಅಂಕಣಗಳು

Subscribe


 

ಅಭಿನಯ ಭಾರತೀ- ಉದ್ಧತಾನ್ಯೆ

Posted On: Thursday, July 9th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 58ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಮುನಿಸನ್ನು ಪ್ರಕಟಪಡಿಸುತ್ತಾ  ತನ್ನ ಪತಿಗೆ ಹೋಲಿಸಿ ನಲ್ಲನನ್ನು ಬಯ್ಯುತ್ತಿರುವ ಈ ನಾಯಿಕೆ ಪರಕೀಯೆಯೆಂದು ಬೇರೆ ಹೇಳಬೇಕಿಲ್ಲ. ನಲ್ಲನನ್ನು ಬಯಸಿದ್ದೇ ತನ್ನ ತಪ್ಪೆಂದು ತನ್ನ ಮೇಲೆಯೇ ಅಪರಾಧವನ್ನು ಎಳೆದುಹಾಕಿಕೊಂಡು ಬಳಿಸಾರಿದ ಆತನನ್ನು ದೂರ ಹೋಗೆಂದು ಖಂಡಿಸುತ್ತಿರುವ ಈಕೆಯದು ಪ್ರಣಯ ಕೋಪವೇ ಸರಿ. ತನ್ನ ಸರಿಸಮಕ್ಕೆ ಹೊಂದುವ ನೂರಾರು ತರುಣರಿದ್ದರೂ  ಎದುರು ಮನೆಯಲ್ಲೇ ಇದ್ದ ಬಾಲ್ಯಸ್ನೇಹಿತನೂ ಆಗಿರುವ ಆತನೆಡೆಗೆ ಸಾರುವುದು ಸುಲಭವೆಂದು ಗಣಿಸಿ ಬಂದವಳವಳು. ಹೀಗೆ ಕಳೆದ ಬಾಲ್ಯದ ಬಯಕೆಯೆಲ್ಲವೂ ಮತ್ತೊಮ್ಮೆ ಈಡೇರಿತೇನೋ ಎಂದು ತನ್ನ ಕಳವಳವನ್ನು, ಗುಟ್ಟನ್ನು, ಪ್ರೇಮವನ್ನು ಸಮಾಲೋಚಿಸಿಕೊಂಡರೆ, ತನ್ನನ್ನು ಬಳಲಿಸುವುದು ಸರಿಯೇ ಎಂದು ಆತನ ಬಗೆಗೆ ಆರೋಪದ ಪಟ್ಟಿಯನ್ನೇ ಇಟ್ಟಿದ್ದಾಳೆ. ಹೀಗೆ ತಾನೇ ಮಿಗಿಲಾಗಿ ಮುಂದಾಗಿ ಜೇನನ್ನು ಉಣಬಡಿಸುವುದು ತನ್ನ ನಡತೆಗೇ ಅಗ್ಗವಾದದ್ದು, ಗೇಲಿಗೊಳಪಡುವಂಥದು, ಹೀಗೆ ಜಗ್ಗಿ ಪ್ರೇಮ ಪಡೆಯುವ ಬದಲು ತನಗಿರುವ ನೂರು ದಾರಿಯಲ್ಲಿ ನಡೆಯುವುದೇ ಒಳ್ಳೆಯದು ಎಂದು ತನ್ನನ್ನು ಕನಿಕರಿಸಿಕೊಂಡು ನಾಯಕನನ್ನು ಉದ್ಧತವಾಗಿ ಕುಟುಕಿದ್ದಾಳೆ.

 

ಉದ್ಧತಾನ್ಯೆ

ರಾಗ : ಕೇದಾರಗೌಳ ; ತಾಳ : ಮಿಶ್ರಛಾಪು

ನಿನಗಿಂತಲೂ ನನ್ನ ಪತಿಯೇ ಮೇಲು ಇನಿಸಾದರೂ ಮನವಿಹುದವಗೆ ||ಪ||

 

ನಿನಗಾಗಿ ಹಾತೊರೆದುದೇ ಎನ್ನ ಅಪರಾಧ

ಘನಕಠಿನ? ! ನೀಂ ದೂರ ಸಾಗೋ ||ಅ.ಪ||

 

ಎಳವೆಯಿಂದಲೂ ಬಲ್ಲೆಯೆನ್ನನ್ನು ನೀನೆಂದು

ಕಳವಳವೆನ್ನದನರಿತೆಯೆಂದು |

ಕಳೆದಾ ಬಾಲ್ಯದ ಬಯಕೆ ಫಲಿಪುದೆಂದು

ಬಳಲಿ ಬಂದವಳನ್ನಿಂತಳಲಿಸುತಿರುವ || ೧||

 

ಎದುರು ಮನೆಯ ಮುಗ್ಧಮದನನೆಂದು

ಸದರದಿಂದಲಿ ಸಾರೆ ಸುಲಭನೆಂದು |

ಚದುರಿಂ ಗುಟ್ಟನು ಸಂರಕ್ಷಿಪನೆಂದು

ಮುದವನ್ನೆರೆಯಲಿರೆ ಕನಲುತಿರ್ಪ || ೨||

 

(ತ್ರ್ಯಶ್ರತ್ರಿಪುಟ) ತಪ್ಪು ನನ್ನದೆ ! ತಕ್ಕವರು ನೂರಾರು ತರುಣರಿರೆ

ಒಪ್ಪೆನುತ್ತಲಿ ನಿನ್ನ ನಾಂ ಮೊರೆಹೊಕ್ಕುದೇ ದೋಷಂ |

ಅಗ್ಗವಾಗದೆ? ಗೇಲಿಗಾಗದೆ? ಬೇಡಿ ಜೇನೆರೆಯೆ?

ಜಗ್ಗಲೇತಕೆ ನಿನ್ನನಾಂ ? ಎನಗಿಹುದು ಬಲುದಾರಿ || ೩||

 

Leave a Reply

*

code