ಅಂಕಣಗಳು

Subscribe


 

ವಿಸ್ಮೃತಿವಿಕ್ಲವೆ

Posted On: Tuesday, July 28th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 72ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕ ತನ್ನನ್ನು ಮರೆತಿದ್ದಾನೆ ಎಂಬುದನ್ನೇ ಗಣಿಸಿ ತಿರುಗಾಡಿಯಾದ ಆತನನ್ನು ಬೇಡುವುದರಿಂದ ಪ್ರಯೋಜನವೇನು? ಆತನಿಗಾಗಿ ಎಲ್ಲವನ್ನು ತೊರೆಯುವುದು ಏಕೆ  ಎಂದು ಪ್ರಶ್ನಿಸುತ್ತಾ ಅವನಿಗಾಗಿ ಹಲವೆಡೆ ದಿನಗಟ್ಟಲೆ ಕಣ್ರೆಪ್ಪೆ ಕದಲದಂತೆ ನಿರೀಕ್ಷಿಸಿದ್ದಾಗ್ಯೂ ಆತನು ಬರದಿರುವುದರಿಂದ ವಿಷಣ್ಣಳಾಗಿದ್ದಾಳೆ ನಾಯಿಕೆ.  ಈ ಪದ್ಯವನ್ನು ಸಖಿಯಲ್ಲಿ ಹೇಳಿಕೊಳ್ಳುವಂತೆಯೂ ಅಭಿನಯಿಸಬಹುದು. ತಾನು ಆತನಿಗಾಗಿ ಕಾಯದ ಜಾಗವಿಲ್ಲ; ಅದನ್ನು ಕಂಡು ಸುತ್ತಮುತ್ತಲಿನವರು ನಕ್ಕುದುದೇ ನಲವೇನು  ಎಂದು ಈ ಪ್ರೋಷಿತ ಭರ್ತೃಕೆಯೂ ವಿಪ್ರಲಬ್ಧೆಯೂ ಆದ ಈಕೆ ಪ್ರಶ್ನಿಸಿಕೊಂಡಿದ್ದಾಳೆ. ಅಂತೆಯೇ ತನ್ನ ಮನಸ್ಸಿನ ಸ್ಥಿತಿಯನ್ನು ಬಣ್ಣಿಸುತ್ತ, ಅವನಿಗಾಗಿ ತಪಿಸುವ ಮನವಿಂದಿಗೂ ಇದೆ, ಗೋಳು ಇದ್ದಾಗ್ಯೂ ಆತನನ್ನು ಮನವು ದೂರದು, ಇಂಥ ಮನಸ್ಸು ಆತನನ್ನು ಆಳಲು ಸಾಧ್ಯವೇ? ಎನ್ನುತ್ತಾ ತನ್ನ ಬಾಳಿನ ಮೇಳವು ತಪ್ಪಿದ ಕುರಿತು ವ್ಯಾಕುಲಳಾಗಿ ನಿರಾಶಾತಪ್ತಳಾಗಿ ಬಡಬಡಿಸುತ್ತಿದ್ದಾಳೆ. 

ವಿಸ್ಮೃತಿವಿಕ್ಲವೆ

ರಾಗ: ರಂಜನಿ ;ತಾಳ: ರೂಪಕ/ ಮಿಶ್ರಛಾಪು

ಮರೆಗುಳಿಗಳ ತಿರುಗುಳಿಗಳ ಬೇಡುವುದೇಕೌ |

ನೆರೆ-ಹೊರೆಗಳ ಮನ-ಮನೆಗಳ ತೊರೆಯುವುದೇಕೌ || ಪ||

 

ಬಂದಪನವೆನೆನ್ನುತ ಬಾಗಿಲಿಗೆ ಧಾವಿಸಿ

ಸಂದಪನವನೆನ್ನುತ ಹೂಬನಕೆ ಯಾತ್ರಿಸಿ |

ನೊಂದೀ ಪದಯುಗ ಸವೆದುದದೊಂದೇ ಫಲವೇಂ?

ಬೆಂದೀ ಜಗಮಾಡಿಕೊಂಡು ನಕ್ಕುದೆ ನಲವೇಂ?    || ೧||

 

ದಿನಗಳೆಣಿಸಿ ದಿಶೆಯ ಗಣಿಸಿ ಬೆರಳುಂ ಕೊರಳುಂ

ಕನಲಿ ಕುಸಿದು ಕಾಳಾದುದನೇಂ ಬಣ್ಣಿಪುದೌ ?

ಅನುದಿನವನುನಿಮೇಷಮುಂ ನಿರ್ನಿಮೇಷದಿಂ

ಕೊನೆಯಿಲ್ಲದೆ ಕಣ್ಗಾದುದನೇಂ ಕವನಿಪುದೌ ?    ||೨ ||

 

(ಮಿಶ್ರಛಾಪು ) ಹಾಳು ಮನವಿದು ಮರಳಿಬಾರದು                       

ಗೋಳುತನವಿದು ಕೆರಳಿ ದೂರದು |

ಮೇಳ ತಪ್ಪಿದ ಬಾಳುವೆಯನಿನ್ನಾಳುವುದಕಳವೇ?

ತಾಳ ತಪ್ಪಿದ ಪಾಳಿಗಿಂತ ಊಳಿಗವು ತರವೇ ||೩ ||

 

Leave a Reply

*

code