ಅಂಕಣಗಳು

Subscribe


 

ಮದನಲೇಖನಮುಗ್ಧೆ

Posted On: Tuesday, June 2nd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 31ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನ ನಿವೇದನೆಗೆ ಉತ್ತರವಾಗಿ ತನಗೂ ಪ್ರೇಮ ಪಲ್ಲವಿಸಿದ್ದನ್ನು ಹೇಳಿಕೊಳ್ಳುವ ಹಾದಿಯಲ್ಲಿ ಪತ್ರವನ್ನು ಹೇಗೆ ಬರೆಯುವುದೆಂದು ತಿಳಿಯದೆ ಗೊಂದಲಕ್ಕೀಡಾದ ಮುಗುದೆಯೀಕೆ. ಹಾಗಾಗಿ ಪ್ರೇಮಪಲ್ಲವದ ಸಂಭ್ರಮದಲ್ಲಿಯೇ ಪ್ರಶ್ನೆಗಳು ಕೂಡ ಆಕೆಯನ್ನು ಬಹಳ ಕಾಡುತ್ತಿವೆ. ಸಂಬೋಧಿಸುವುದರಿಂದ ಮೊದಲ್ಗೊಂಡು ತನ್ನ ಮನದ ಭಾವವನ್ನು ಹೇಳಿಕೊಳ್ಳುವುದಾಗಲೀ, ಹಳೆಯ ಕಹಿಗಳನ್ನು ಹೇಳದೆ ಸಿಹಿಯನ್ನಷ್ಟೇ  ಕಥಿಸುವ ರೀತಿಯಾಗಲೀ, ಜೊತೆಗಿರುವ ಸಖಿಯರಲ್ಲಿ ಈ ಪ್ರೇಮಪಲ್ಲವದ ವಿಷಯ ತಿಳಿಯದಂತೆ ಜತನ ಮಾಡುವ ಬಗೆಗಳು ಆಕೆಯನ್ನು ಗೊಂದಲಗೊಳಿಸಿವೆ. ಇನ್ನು ಸಂಕೇತರೂಪದಲ್ಲಿಯೋ, ಧ್ವನಿಮಾರ್ಗದಲ್ಲಿಯೋ ಪತ್ರ ಬರೆಯುವುದು ಆಗುತ್ತಿಲ್ಲವೆಂಬ ಮಟ್ಟಿಗೆ ತೃಪ್ತಿ ದಕ್ಕುತ್ತಿಲ್ಲ. ಹೀಗೆ ಅಭಿನಯದಲ್ಲಿ ಪತ್ರಲೇಖನಾರಂಭ, ವಸ್ತು, ವಿನ್ಯಾಸ, ಕಡೆಯ ಮುಗಿತಾಯ, ಸಹಿ ಇತ್ಯಾದಿಗಳ ನಿರೂಪಣೆಯ ವಿವಿಧಾವಸ್ಥೆಗಳನ್ನು ಸಂಚಾರಿಯಾಗಿ ತೋರುವ ಮಟ್ಟಿಗೆ ಪತ್ರಲೇಖನವನ್ನೇ ಪ್ರಧಾನ ಅಭಿನಯವಸ್ತುವಾಗಿಸಿದ ಪದ್ಯವಿದು.

ಮದನಲೇಖನಮುಗ್ಧೆ

ರಾಗ : ಗಮನಶ್ರಮ ; ತಾಳ : ಮಿಶ್ರಛಾಪು

ಏನೆಂದು ನಾನೊರೆಯಲಿ? ಎನ್ನುತ್ತರವ-

ನೇನೆಂದು ನಾ ನುಡಿಯಲಿ? ||ಪ||

 

ಮನ್ಮಾನಸೋತ್ಪಲಮಧುಮಾಧುರೀಮೃದು

ಸನ್ಮಾನಹಂಸವತಂಸನಲಿ? ||ಅ.ಪ||

 

ಸಂಬೋಧಿಸುವುದೆಂತು? ಸಂಪ್ರತಿಸುವುದೆಂತು? ನಂಬಿಕೆಗೊಳಿಪುದೆಂತು?

ತುಂಬಿತುಳ್ಕಾಡುವ ತಾರುಣ್ಯಭಾವವ ಬಿಂಬಿಸಿ ಬರೆವುದೆಂತು? ||೧ ||

 

ಸ್ಮೃತಿಯ ಸಿಹಿಯನೆಲ್ಲ ಕಥಿಸಿ ಕೋದುವುದೆಂತು? ಗತದ ಕಹಿಯ ಬೆರೆಸದೆ !

ಜೊತೆಯ ಕಾಂತೆಯರಲ್ಲಿ ಗುಲ್ಲಾಗದಿರುವಂತೆ ಜತನ ಮಾಡುವುದೆಂತು? || ೨||

 

ಮನೆಗೆ ಮುಳ್ಳಾಗದೆ ಮನವು ಕಲ್ಲಾಗದೆ ಅನುವಾದಿಸುವುದೆಂತು?

ಧ್ವನಿಯಿಲ್ಲ ವಾಗರ್ಥಸೌಭಾಗ್ಯಕ್ಕಿದರಲ್ಲಿ ಕನಸ ಕವನಿಪುದೆಂತು? ||೩ ||

 

Leave a Reply

*

code