ಅಂಕಣಗಳು

Subscribe


 

ಮುರಳೀ ರವಳೀ…

Posted On: Tuesday, December 15th, 2009
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮಹೇಶ್ ಎಲ್ಯಡ್ಕ, ಬರೆಹಗಾರರು,’ಒಪ್ಪಣ್ಣ ವೆಬ್ಸೈಟ್’, ಬೆಂಗಳೂರು

ಹವ್ಯಕ ಭಾಷೆ ಯಾರಿಗೆ ತಾನೇ ಗೊತ್ತಿಲ್ಲ. ಅದು ಕೇವಲ ಸೀಮಿತ ವರ್ಗದ ಭಾಷೆಯಾಗಿ, ಕನ್ನಡದ ಉಪಭಾಷೆಯಾಗಿ ಮಾತ್ರ ಉಳಿಯದೆ ; ತನ್ನ ಭಾಷೆಯೊಳಗೂ ಹತ್ತು ಹಲವು ಸ್ತರದ ವೈವಿಧ್ಯತೆಗಳನ್ನು ಚಾಚಿಗೊಂಡ ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಭಾಷೆ. ಬಹುಷಃ ಪ್ರತಿಯೋರ್ವ ಯಕ್ಷಗಾನ ಕಲಾವಿದನಿಗೂ ಈ ಭಾಷೆ ಮೊದಲಿನಿಂದಲೂ ಬಹಳ ಆಪ್ತ. ‘ಒಪ್ಪಣ್ಣ’ನೆಂಬ (www.oppanna.com) ಕಾವ್ಯನಾಮದಲ್ಲಿ ಬರೆಯುವ ; ವಿಶಿಷ್ಟ ಬರೆವಣಿಗೆಯ ಶೈಲಿಯುಳ್ಳ ಮಹೇಶ್ ಎಳ್ಯಡ್ಕ ಅವರ ಹವ್ಯಕ ಭಾಷಾ ಸೊಗಡಿನ ; ಸಂಗೀತದ ಕುರಿತಾದ ಲೇಖನ ಈ ಬಾರಿ ನಿಮ್ಮ ಓದಿಗೆ. ಸಾಮಾನ್ಯ ವ್ಯಕ್ತಿಯೊಬ್ಬನು ತನ್ನ ವ್ಯಾಪ್ತಿ-ನೆಲೆಯಲ್ಲಿಯೂ ಸಂಗೀತ-ನೃತ್ಯವನ್ನು ಯಾವ್ಯಾವ ಆಯಾಮಗಳಲ್ಲಿ ನೋಡಬಹುದೆಂಬುದಕ್ಕೆ ಒಂದು ಪುಟ್ಟ ನಿದರ್ಶನವಿದು. ಅಂದಹಾಗೆ ಓದುಗರ ವೈವಿಧ್ಯ ಓದುವಿಕೆಗೆ ಬೇಕಾಗಿ ಮಾಡುತ್ತಿರುವ ನೂಪುರ ಭ್ರಮರಿಯ ವಿಶಿಷ್ಟ ಪ್ರಯೋಗಗಳಲ್ಲಿ ಇದೂ ಒಂದು. ಮುಂದಿನ ದಿನಗಳಲ್ಲಿ ತುಳು, ಕನ್ನಡದ ಉಪಭಾಷೆಗಳಾದಿಯಾಗಿ ನೀವು ಇಂತಹುದೇ ಬರೆವಣಿಗೆಗಳಲ್ಲಿ ತೊಡಗಿಸಿಕೊಂಡು ಆಸ್ವಾದನೆಯ, ಬರೆಹಗಳ ಶೈಲಿಯ ಮಜಲುಗಳ ವ್ಯಾಪ್ತಿಯನ್ನು ವಿಸ್ತರಿಸಬಹುದು.

ನೂಪುರ ಸದಭಿರುಚಿಯ ಪ್ರಯತ್ನಗಳಿಗೆ ಮುಕ್ತವಾಗಿದೆ.

ಮನುಷ್ಯ ಆಗಿ ಹುಟ್ಟಿದ ಮೇಗೆ ಸಂಗೀತ- ಸಾಹಿತ್ಯಲ್ಲಿ ಇಷ್ಟ ಇಪ್ಪಲೇ ಬೇಕಡ. ಹಾಂಗೊಂದು ಮಾತು ಇದ್ದು. ಒಪ್ಪಣ್ಣಂಗುದೇ ನಿಂಗಳ ಹಾಂಗೇ ಸಂಗೀತಲ್ಲಿ ತುಂಬಾ ಆಸಕ್ತಿ, ಮದಲಿಂದಲೇ. ಕೆಸೆಟ್ಟು ಹಾಕಿ ಕೇಳುಲೆ ಸುರು ಮಾಡಿರೆ ಊರು ಅಡಿ ಮೊಗಚ್ಚಿರೂ ಗೊಂತಾಗ. ಜೋನು ಹಿಗ್ಗಿನ್ಸು ಹಾಡಿದ ‘ಎಂದರೋ…’, ಚೆಂಬೈ ಅಜ್ಜ ಹಾಡಿದ ‘ವಾತಾಪಿ…’, ಯೇಸುದಾಸಿನ ‘ಸಾರಸಮುಖಿ’, ಯಮ್ಮೆಲ್ವಿ ಅಜ್ಜಿ ಹಾಡಿದ ‘ನನುಪಾಲಿಂಪ’ ಎಲ್ಲ ಕೆಸೆಟ್ಟುಗಳಲ್ಲಿ ಮಡಿಕ್ಕೊಂಡು ಇಕ್ಕು, ಯಕ್ಷಗಾನದ ಕೆಸೆಟ್ಟುಗಳ ಒಟ್ಟೊಟ್ಟಿಂಗೆ! ಅಷ್ಟಪ್ಪಗ ಸಂಗೀತ ಹೇಳಿತ್ತು ಕಂಡ್ರೆ ಪದಂಗಳ ರಾಗವೂ, ತಾಳವೂ ಅರ್ತ ಅಕ್ಕು ಅಷ್ಟೆ. ಭಾಷೆಯೂ, ಭಾವವೂ ಅರ್ತ ಆಗಿಯೊಂಡು ಇತ್ತಿಲ್ಲೆ. ಸಾಮಾನ್ಯವಾಗಿ ಕೇಳಿಗೊಂಡು ಇದ್ದದು ದಕ್ಷಿಣಾದಿಯೇ ಇದಾ! ಸದ್ಯ ಉತ್ತರಾದಿಯುದೇ ಕೇಳುಲೆ ಸುರು ಮಾಡಿದ್ದಲಿ ಒಪ್ಪಣ್ಣ. ಅದರಲ್ಲಿ ‘ಭಾವ’ ಜಾಸ್ತಿ ಅಡ ಅಲ್ದಾ..!

ಓ ಮೊನ್ನೆ ಒಂದರಿ ಸಂಗೀತ ಕೇಳೆಕ್ಕು ಹೇಳಿ ಅನಿಸಿ ಅಪ್ಪಗ ಕೆಸೆಟ್ಟು ಪೆಟ್ಟಿಗೆ ತೆಗದು ಕೂದುಗೊಂಡೆ. ಮೋಹನ ರಾಗ- ಡಾ. ಎಮ್. ಬಾಲಮುರಳಿ -ಹರಿಪ್ರಸಾದ್ ಚೌರಾಸಿಯಾ ಹೇಳಿ ಒಂದು ಕೆಸೆಟ್ಟು ಕಂಡತ್ತು. ದ್ವಂದ್ವ ಅಡ, ಬಡಗಲಾಗಿ ಅದರ ‘ಜುಗಲ್ (ಯುಗಳ=೨) ಬಂದಿ’ ಹೇಳುದಡ. ಅದರ ಮೇಗೆ ಇಬ್ರ ಪಟಂಗ. ಸಣ್ಣ ಮಕ್ಕೊ ಮಣ್ಣಿ ತಿಂಬಗ ಮಾಡಿದ ಹಾಂಗೆ ಮಾಡಿ, ಮುಗ್ದ ಕಣ್ಣಿಲಿ ಒಂದು ನೆಗೆ ಮಾಡಿ ಇಪ್ಪ ಪೋಸಿಲಿ, ಲಾಲುಗಂದ ಬೊಟ್ಟು ಹಾಕಿದ – ಬಾಲಮುರಳಿಯ ಪಟ. ಅವನ ಬಲತ್ತಿಂಗೆ ಒಂದು ಉದ್ದದ ಕೊಳಲು ಹಿಡ್ಕೊಂಡು – ದಕ್ಷಿಣಾದಿಯ ಕೊಳಲಿನ ಹಾಂಗೆ ಬರೇ ಸಣ್ಣದಲ್ಲ- ರಜ ಉದ್ದ, ರಜ್ಜ ತೋರ – ಕಾಂಬಲುದೇ, ಸ್ವರವುದೇ! – ಬಾನ್ಸುರಿ (ಬಾನ್ಸು = ಬೆದುರು) ಹೇಳುದಡ ಅದಕ್ಕೆ – ಅದರ ಹಿಡ್ಕೊಂಡು ಬೆರಳಿಲಿ – ಮಾಟ ಮಾಡಿದ ಹಾಂಗೆ – ಎಂತದೋ ಸಂಜ್ಙೆ ಕೊಟ್ಟುಗೊಂಡು – ಈ ಕೆಸೆಟ್ಟಿನ ಕೇಳು ಹೇಳಿಗೊಂಡು ಇತ್ತಿದ್ದಲಿ ಚೌರಾಸಿಯಲಿ.

ರಜ ಆಸಕ್ತಿ ಹುಟ್ಟುಸಿತ್ತು.

ಬಾಲಮುರಳಿ ಹೇಳಿರೆ ದಕ್ಷಿಣಾದಿ ಸಂಗೀತದ ಬಲಿಪ್ಪ. ಒಳ್ಳೆ ಸ್ವರವುದೇ ಇದಾ! ಮಂದ್ರ ಷಡ್ಜಂದ ತಾರಕ ನಿಷಾದವರೆಗೆ ಆರಾಮಲ್ಲಿ ಏರುಸುತ್ತಲಿ. ಆಶು ಕವಿ ಅಡ. ಸ್ವತಃ ಕೀರ್ತನೆಗಳ ಬರದು ಹಾಡ್ತನಡ. ಅತ್ಲಾಗಿ ಚೌರಾಸಿಯ ಹೇಳಿರುದೇ ಚಿಲ್ಲರೆ ಜೆನ ಏನಲ್ಲ. ಕೊಳಲಿನ ಮಾತಾಡುಸುತ್ತನಡ. ಅಂತೂ, ಬಾಲಮುರಳಿ-ಚೌರಾಸಿಯ ಒಂದು ವಿಶೇಷ ಬೆರಕ್ಕೆ ಹೇಳಿ ಅನಿಸಿತ್ತು ಒಪ್ಪಣ್ಣಂಗೆ.

ಇವಿಬ್ರುದೇ ಹುಟ್ಟಿದ್ದು, ಸಂಗೀತ ಕಲ್ತದು, ಪ್ರಸಿದ್ಧಿಗೆ ಬಂದದು – ಎಲ್ಲವುದೇ ಬೇರೆ ಬೇರೆ ಊರಿಲಿ. ಇಬ್ರಿಂಗೂ ಗುರುಮುಖೇನ ಪಾಟ ಆದರೂ, ಆದ ಕ್ರಮವೇ ಬೇರೆ ಬೇರೆ. ಕಲ್ತ ಸಂಗೀತಂಗೊ ಬೇರೆ ಬೇರೆ. ಉಂಬ ಊಟ ಬೇರೆ, ಹಾಡಿ ಬೆಳದ ವಾತಾವರಣ ಬೇರೆ ಬೇರೆ. ಪಕ್ಕನೆ ಅವರ ಇಬ್ರನ್ನೂ ಒಂದೇ ಕಚೇರಿಗೆ ಕೂರುಸಿ ಅವಿಲು ಮಾಡಿರೆ ಹೇಂಗಕ್ಕಪ್ಪಾ!? ಒಂದರಿ ಕೇಳುಲೇ ಬೇಕು ಹೇಳಿ ಅನಿಸಿ ಹೋತು.

ಷಡ್ಜ-ಋಷಭ-ಗಾಂಧಾರ-ಪಂಚಮ-ದೈವತ – ಇವಿಷ್ಟು ಮೋಹನ ರಾಗದ ಅಸ್ಥಿಪಂಜರ. ಸ-ರಿ-ಗ-ಪ-ದ-ಸ ಹೇಳ್ತ ಐದು ಸ್ವರವ ಕುಣಿಸಿ ಅಪ್ಪಗ ಸಿಕ್ಕುತ್ತದು ಮೋಹನ ರಾಗ. ಮತ್ತೆ ಕಲಾವಿದನ ಚಾಕಚಕ್ಯತೆ, ಶೈಲಿ, ತಾಕತ್ತಿನ ಮೇಗೆ ಸ್ವರ ವಿಸ್ತಾರ ಮಾಡ್ತಲಿ. ಒಬ್ಬೊಬ್ಬಂದು ಒಂದೊಂದು ಶೈಲಿ. ಹುಟ್ಟು- ಬಾಲ್ಯ- ಕೌಮಾರ್ಯ-ಗೃಹಸ್ಥ-ವಾನಪ್ರಸ್ಥ – ಇವಿಷ್ಟು ಮನುಷ್ಯ ಜನ್ಮದ ಅವಿಭಾಜ್ಯ ಅಂಶಂಗೊ. ಒಬ್ಬೊಬ್ಬನ ಚಾಕಚಕ್ಯತೆಲಿ ಒಂದೊಂದು ಎತ್ತರಕ್ಕೆ ಏರುತ್ತವು. ಅವರವರ ಶಕ್ತಿಗೆ, ಅವರವರ ಭಾವಕ್ಕೆ ಅನುಕೂಲ ಆದ ಹಾಂಗೆ.

ಷಡ್ಜ:

‘ಯೋವೇದಾದೌಸ್ವರಃ’ ಹೇಳಿ ಗಣೇಶಮಾವ ಓಂಕಾರವ ಹೇಳಿತ್ತಿದ್ದವು, ಮೊನ್ನೆ ಒಂದರಿ ಮಾತಾಡುವಗ. ವೇದಾರಂಭಲ್ಲಿಪ್ಪ ಓಂಕಾರ ಸುರು ಅಪ್ಪದೇ ಷಡ್ಜಂದ ಅಡ. ಸಂಗೀತ ಆರಂಬ ಅಪ್ಪದುದೇ ಷಡ್ಜಂದಲೇ. ಯೇವ ಸಂಗೀತಗಾರನೂ, ಎಷ್ಟು ದೊಡ್ಡ ಕಚೇರಿ ಆದರೂ ಸುರು ಮಾಡುದು ಸ-ಪ-ಸಂದ. ಅಡಿಪಾಯ ಗಟ್ಟಿ ಇದ್ದು ಹೇಳಿ ಆದರೆ ಮಾಂತ್ರ ಪೆಂಟಗನ್ನೂ ನಿಂಗು, ತೇಜಮಹಾಲಯವೂ ನಿಂಗು. ಮುಂದಿನ ಮುಕ್ಕಾಲುಗಂಟೆಯ ಭರ್ತಿ ಸಂಗೀತದ ಸಮೃದ್ಧ ಹಂತಿ ಊಟಕ್ಕೆ ಗಂಭೀರ ಆರಂಭ ಕೊಟ್ಟಲಿ, ಬಾಲಮುರಳಿ. ವಾಹ್! ಎಂತಾ ಆರಂಭ, ಮಂದ್ರ ಗಾಂಭೀರ್ಯ!

ಮನುಷ್ಯನ ಜೀವನ ಆರಂಭ ಅಪ್ಪದು ಅಮ್ಮನ ಹೊಟ್ಟೆಂದ. ಬಾಬೆ ಹುಟ್ಟುವಗಳೇ ಅಂತಾ ಒಂದು ಸಂಭ್ರಮ, ಮನೆ-ಮನ ಇಡೀಕ. ಮುಂದೆಂತ ಹೇಳ್ತ ನಿರೀಕ್ಷೆ – ಉತ್ಸಾಹ.

ಋಷಭ:

ಅನುಕರಣೆ ತಪ್ಪು, ಆದರೆ ಅನುಸರಣೆ ಬೇಕೇ ಬೇಕು. ಸುರುವಾಣದ್ದರ ನೋಡಿ ಅದೇ ನಮುನೆ ನೊಣ ಪ್ರತಿ ತೆಗವದರ ಅನುಕರಣ ಹೇಳುದು, ಸಾರವ ಮಾಂತ್ರ ತೆಕ್ಕೊಂಡು ಮುಂದುವರಿವದಕ್ಕೆ ಅನುಸರಣ ಹೇಳುದು – ಹೇಳಿ ತಾಳಮದ್ದಳೆಗೆ ಅರ್ತ ಹೇಳ್ತ ಜೆನಂಗೊ ಹೇಳಿದ್ದು ಕೇಳಿತ್ತಿದ್ದೆ ಓ ಮೊನ್ನೆ. ‘ಎರಡನೇ’ದು ಹೇಳಿರೆ ಸುರುವಾಣದ್ದರ ಅನುಸರಣೆ ಆಗಿರೆಕ್ಕು. ಒಂದರ್ಥಲ್ಲಿ ಪ್ರಥಮತೆಂದಲೂ ದ್ವಿತೀಯತೆ ಮುಖ್ಯ. ನೂರು ಮೀಟರು ಓಡುವಗ ಎರಡ್ನೇಯವಲಿ ತುಂಬ ಹಿಂದೆ ಇದ್ದರೆ ಸುರುವಾಣವಂಗೆ ಗೆದ್ದ ಸಾರ್ತಕತೆಯೇ ಇರ್ತಿಲ್ಲೆ, ಒಂದೇ ಅಂಗುಲ ವೆತ್ಯಾಸ ಆದರೆ ಆ ಕುಶಿ ಮತ್ತಲ್ಲ!

ಷಡ್ಜದಷ್ಟೇ ರಸವತ್ತಾದ ರಿಷಭ ನಮ್ಮ ಜೀವನಲ್ಲಿ ಸಿಕ್ಕುತ್ತಾ ಹೋಯೆಕ್ಕು. ಹುಟ್ಟಿದ ಬಾಬೆಯ ಬೆಳವಣಿಗೆಗೆ ಪರಿಸರ ಹೇಂಗಿರ್ತು ಹೇಳುದು ಹುಟ್ಟಿದ್ದರಿಂದಲೂ ಹೆಚ್ಚು ಮುಖ್ಯ, ಆಸಕ್ತಿದಾಯಕ. ಋಷಭದ ಮುಂದುವರಿಕೆ ಬೆಳವಣಿಗೆಯ ಹಂತ.


ಗಾಂಧಾರ:

ಷಡ್ಜದ ಆರಂಬ, ಋಷಭದ ಮುಂದುವರಿಕೆ ಸಿಕ್ಕಿದ ಮತ್ತೆ ಆ ಪರಿಸರಲ್ಲಿ ತಲ್ಲೀನತೆ ಬೇಕು, ಅಲ್ಲದೋ? ಚೆಂದದ ಪರಿಸರಲ್ಲಿ ಬೆಳೆತ್ತಾ ಇಪ್ಪ ಮಗುವಿನ ತಲ್ಲೀನತೆ ಯೇವದರಲ್ಲಿ ಇದ್ದು? ನೆಡು ಪ್ರಾಯಲ್ಲಿ ಅದರ ಆಸಕ್ತಿಯ ವಿಷಯಂಗೊ ಹೇಂಗೆ ಇದ್ದು, ಮನೆತನವ ಮುಂದುವರುಶುಲೆ ಸಮರ್ತ ಆಗಿ ಬೆಳೆತ್ತಾ ಇದ್ದೋ? ಈ ವಿಚಾರವ ಅತ್ಯಂತ ಗಮನಲ್ಲಿ ಮಡಗೆಕ್ಕಾವುತ್ತು ಅಪ್ಪಮ್ಮ. ಯಕ್ಷ ಕಿನ್ನರ ಗಾಂಧರ್ವರ ಪ್ರಿಯ ಸ್ವರ ಆದ ಗಾಂಧಾರಲ್ಲಿ ಅದೇ ತಲ್ಲೀನತೆ ಮುಂದುವರಿತ್ತಾ ಹೋವುತ್ತು… ಜೀವನದ ಹಾಂಗೇ…

ಜೀವನ ಕಟ್ಟುಲೆ ಬೇಕಾದ ನಿಯತ್ತು ಬೆಳವದು ಮಧ್ಯ ವಯಸ್ಸಿಲೇ ಅಡ. ಮಾಷ್ಟ್ರುಮಾವಲಿ ಅನುಭವ ಬರದಿತ್ತಿದ್ದವು. ಗಾಂಧಾರದ ತಲ್ಲೀನತೆಲಿ ಕೋಣೆ ಇಡೀ ಒಂದಾತು. ಪದ ಪಷ್ಟ್ಳಾಸಿದ್ದು.

ಪಂಚಮ:

ಗಾಂಧಾರಲ್ಲಿ ಜೀವನ ಕಟ್ಟಿ ಆದ ಮತ್ತೆ ಪುರುಷ-ಕ್ಷೇತ್ರದ ಪರಿಚಯ, ಸಂಪರ್ಕ.

ಬಾಲಮುರಳಿಯ ಆರಂಭಕ್ಕೆ ಸಾಥ್ ಕೊಡುವಂತಹ ಕೊಳಲು, ಹಿಂದಂದ. ಅಷ್ಟೊತ್ತು ಪುರುಷ ಸ್ವರದ ತಲ್ಲೀನತೆಲಿ ಇದ್ದ ಕೆಮಿಗೊಕ್ಕೆ ಒಂದರಿಯೇ ಕೊಳಲಿನ ಇಂಪು. ಅದುದೇ ಪಂಚಮಲ್ಲಿ. ಕೋಗಿಲೆಯ ಪಿಟ್ಟೆ ಮೈಗೆ ಬಿದ್ದ ಮತ್ತೆ ಮೇಗೆ ನೋಡುವಗ ಒಂದು ಸ್ವರ ಬತ್ತಲ್ದ, ಅದೇ ಸ್ವರ – ಪಂಚಮ. ಮಧ್ಯಮಂದ ಒಂದು ಮೇಗೆಯೇ. ಆದರೆ ಮೋಹನ ರಾಗಕ್ಕೆ ಇದುವೇ ಮಧ್ಯಮ.

ಮಧ್ಯವಯಸ್ಸು ಬಪ್ಪ ಮೊದಲೇ ಸಮಾಜಲ್ಲಿ ಒಂದು ಅಲೆ ಉತ್ಪತ್ತಿ ಮಾಡಿ ಮಡಗುತ್ತಲಿ, ಮನುಷ್ಯ. ಕೊಳಲಿನ ಸಾಥಿನ ಒಟ್ಟೊಟ್ಟಿಂಗೆ ಹೆಜ್ಜೆ ಹಾಕುತ್ತಲಿ. ಹಲವಾರು ಹೊಸ ಹೊಸ ಪ್ರಯೋಗಂಗಳ ಮಾಡ್ತ. ಪ್ರಯತ್ನ ಮಾಡ್ತ, ಮುಂದೆ ಹೋವುತ್ತಲಿ, ಹಿಂದೆ ಬತ್ತಲಿ.ಮೇಲೆ-ಕೆಳ, ಏರು-ತಗ್ಗು ಎಲ್ಲ ಅನುಬವಿಸುತ್ತಲಿ. ಹಿಮ್ಮೇಳದ ಸಹವಾದನ ಕುಟುಂಬದ ಸದಸ್ಯರ ಅನ್ಯೋನ್ಯತೆಯ ಸಂಕೇತ. ಅದರಷ್ಟಕೇ ಓಡುತ್ತ ಶೃತಿ ನಿತ್ಯಜೀವನದ ಶಾಂತತೆಯ ಸಂಕೇತ. ಅದ್ಭುತ ಕವಿ ಸಮಯ. ಇನ್ನುದೇ ಕೇಳಿಗೊಂಡೇ ಇಪ್ಪಲಿ ಹೇಳಿ ಕಾಣ್ತು. . .

ಮುರಳೀರವಳೀ ಹಾ….ಯ್..!

ಹರಿ-ಪ್ರಸಾದ-ಬಾಲ-ಮುರಳೀ-ರವಳೀ- ಹಾ….ಯ್..!

[ಅರ್ತ: ಮುರಳೀರವಳೀ(ಎರಡು ಮುರಳಿ ಇದ್ದು!) ಹೇಳಿರೆ, ಬಾಲ “ಮುರಳಿ” ಕೃಷ್ಣನ ಹತ್ತರೆ ಒಂದು ಮುರಳೀ, ಹರಿಪ್ರಸಾದ ಚೌರಾಸಿಯನ ಹತ್ರೆ ಇನ್ನೊಂದು ಮುರಳಿ (ಕೊಳಲು) – ಹಾಂಗೆ ಒಟ್ಟು ಎರಡೆರಡು ಮುರಳಿ ಇದ್ದು]

ಆ ಇಡೀ ಕೇಸೆಟ್ಟಿಲಿ ಬಪ್ಪದು ಪದ ಅಷ್ಟೇ! ತುಂಬಾ ಅರ್ತ ಗರ್ಭಿತ. ಎರಡೇ ಗೆರೆಯ ಹುಂಡುಪದ್ಯದ ಸಾಲು..

ಬಾಕಿ ಉಳುದ್ದೆಲ್ಲ ರಾಗ-ತಾನ ಅಷ್ಟೇ.

ಪುರುಷನ ಹತ್ತರೆ ಒಂದು ಅಂಶ, ಸ್ತ್ರೀಯ ಹತ್ತರೆ ಒಂದು ಅಂಶ – ಎರಡೂ ಸೇರಿರೇ ಸಂಸಾರ ತಾನೇ! ಒಂದು ಇಲ್ಲದ್ರೂ ಅದು ಚಕ್ರ ಇಲ್ಲದ್ದ ರಥ.

ಪಂಚಮದ ಸಮ್ಮಿಳನಲ್ಲಿ ಆ ಸಂಸಾರ ಮುಂದುವರಿಯೆಕ್ಕು ಹೇಳುವ ಆಶಯ ಎಲ್ಲಾ ಸಂಸಾರಸ್ಥರದ್ದು.


ದೈವತ:

ನೆಡು ಪ್ರಾಯ ಕಳುದ ಮತ್ತೆ ಬೇರೆಂತ ಬೇಕು- ದೇವತಾರಾಧನೆ ಬಿಟ್ಟು?

ಪಂಚಮಲ್ಲಿ ಸಿಕ್ಕಿದ ಅನುಭವಂಗಳ ಮೆಲುಕು ಹಾಯ್ಕೊಂಡು, ಮೊದಲು ಮಾಡಿದ ಸಾಧನೆಯ ನೆಂಪುಮಾಡಿಗೊಂಡು… ಹತ್ತರೆ ಕೂದ ಹೆಂಡತ್ತಿ ಆ ವಿಷಯಂಗಳ ಇನ್ನೂ ಸ್ಪಷ್ಟ ಮಾಡಿ ನೆಂಪಿನ ಜಾಸ್ತಿ ಮಾಡುತ್ತು. ಮುಂದಾಣ ಜೇವಮಾನವ ಯಥಾಯೋಗ್ಯ ಪುಣ್ಯಕಾರ್ಯಲ್ಲಿ ಕಳವದು ಎಲ್ಲಾ ಹಿರಿಯ ಆಶಯ.

ಬಾಲಮುರಳಿ ಅವನೇ ಹುಟ್ಟು ಹಾಕಿ ಬೆಳೆಶಿ, ಸಾಂಕಿದ ಸ್ವರವಿಸ್ತಾರದ ಸೊಂಪಿನ ಅನುಭವಿಸಿಗೊಂಡು ಇದ್ದ. ಸ್ವರದ ಏರಿಳಿತ ಸರೀ ಗೊಂತಾವುತ್ತು, ಕೇಳುವ ಕೆಮಿಗೆ. ಕೊಳಲಿನ ಇಂಪು ಅದರ ನಾದವ ಇನ್ನುದೇ ಜಾಸ್ತಿ ಮಾಡಿತ್ತು. ಒಟ್ಟಾರೆ ಅನುಭವವೇ ಅನುಭವ.


ಷಡ್ಜ:

ಮತ್ತೆ ಬಾಲ್ಯ.

ತುಂಬ ಪ್ರಾಯ ಆದ ಮನುಷ್ಯನ ನಡವಳಿಕೆಗೊ ಬಾಲ್ಯಾವಸ್ಥೆಯ ನೆಂಪು ತತ್ತಡ. ದೀರ್ಘಕಾಲ ಒಟ್ಟಿಂಗಿಪ್ಪ ಹೆಂಡತ್ತಿಗೂ ಅದೇ ಅನುಭವ. ಪರಸ್ಪರ ಭಾವನೆಗೊ ಮಾಂತ್ರ, ಬಲ ಇಲ್ಲೆ. ಅನುಭವ ಮಾಂತ್ರ, ಅನುಸ್ವರ ಇಲ್ಲೆ. ಹುಟ್ಟಿಂದ ದೈವತದವರೆಗೆ ತಲ್ಲೀನತೆಲಿ ಜೊತೆಜೊತೆಲಿ ನೆಡದು ಬಂದ ಪಂಚಮದ ಕಾಲವ ನೆನಪಿಸುದೇ ಅಲ್ಲಿಪ್ಪ ಯಥಾ ಶಕ್ತಿ ಕಾರ್ಯ. ಸಣ್ಣಗಿಪ್ಪಗಾಣ ಹಾಂಗೇ ಭಾವನೆಗೊ. ಸ್ಥಿಮಿತಿ, ಮಿತಿ – ಎರಡೂ ಇಲ್ಲೆ. ಅದರಷ್ಟಕ್ಕೇ ಹರಿಯಬಿಡೆಕ್ಕಾವುತ್ತು. ಮುದಿಮರುಳು ಹೇಳ್ತವು. ಆದರೆ ಹಿನ್ನೆಲೆ / ಹಿಮ್ಮೇಳದವಕ್ಕೆ ಸರೀ ಗುರ್ತ ಇದ್ದು. ನಮ್ಮ ಪ್ರತಿ ಚಲನೆಯನ್ನುದೇ ಅವು ಪ್ರಸಾದ ಹೇಳಿ ಸ್ವೀಕರಿಸುತ್ತವು. ಬಾಲ್ಯಲ್ಲಿ ಹುಚ್ಚು ಆಲೋಚನೆಗೊ ಇತ್ತು, ಸಂಪತ್ತು ಶೇಖರಣೆ ಇತ್ತಿಲ್ಲೆ. ವೃದ್ಧಾಪ್ಯಲ್ಲಿ ಸಂಪತ್ತು ಧಾರಾಳ ಇದ್ದು, ಹರಿಯಬಿಡುವ ಹುಚ್ಚು ಇಲ್ಲೆ.

ಬಾಲಮುರಳಿ, ಚೌರಾಸಿಯ, – ಇಬ್ರುದೇ ಇನ್ನು ಮುಗುಶುವ ಏರ್ಪಾಡಿಂಗೆ ಬಂದವು. ರಾಗ-ತಾನ-ಪಲ್ಲವಿಯ ಮೂರು ಹಂತಂಗಳಲ್ಲಿ ಬೇಕಾದಷ್ಟು ಅನುಭವ ಹಂಚಿಗೊಂಡು, ಕುಶಿ ಕೊಟ್ಟು, ಕುಶಿ ತೆಕ್ಕೊಂಡು, ಕೇಳುಗರಿಂಗೆ ಹಬ್ಬದೂಟ ಬಳುಸಿದವು. ಅಂಬಗಂಬಗ ಅಲ್ಲಿ ಕೇಳ್ತವು ಚಪ್ಪಾಳೆ ತಟ್ಟಿದ್ದೇ ಅದಕ್ಕೆ ಸಾಕ್ಷಿ.

ಈಗ, ಉತ್ತರಾದಿ ಹೇಳಿರೆ ಮೂರು ಮಾರು ದೂರ ಹೋಯ್ಕೋಂಡು ಇದ್ದ ಒಪ್ಪಣ್ಣಂಗೆ ರಜಾ ಗುರ್ತ ಅಪ್ಪಲೆ ಸುರು ಆತು. ಬಾಲಮುರಳಿ ಚೌರಾಸಿಯನ ಗುರ್ತ ಮಾಡುಸಿದ. ಇವನಿಂದಾಗಿ ಅವನ, ಅವನಿಂದಾಗಿ ಮತ್ತೊಬ್ಬನ, ಮತ್ತೊಬ್ಬನಿಂದಾಗಿ ಇನ್ನೊಬ್ಬನ – ಹೀಂಗೇ ಗುರ್ತ ಬೆಳದು ಬೆಳದು ಮುಂದುವರಿವದಲ್ದೋ, ಮಾನವ ಸಮಾಜ?

ಬರೇ ಒಂದು ಕಚೇರಿಯ ಅರ್ತಮಾಡುವಗ ಒಂದು ಮಾನವ ಸಮಾಜದ ಅರ್ತ ಆವುತ್ತು. ಅಂಬಗ ಸಂಗೀತಲ್ಲಿ ಎಂತಾ ಶಕ್ತಿ ಇದ್ದು?

ಮೋಹನ ರಾಗದ ಭಾವ ಉತ್ಸಾಹಪೂರ್ಣ ಶಾಂತಿ ಅಡ. ‘ಅಪ್ಪನ್ನೇ!’ ಹೇಳಿ ಆತೆನಗೆ. ಕೇಳ್ತಾ ಇಪ್ಪಗ ಹಳೆ ಕೆಲವು ಮನಶ್ಶಾಂತಿ ತಪ್ಪ ಘಟನೆಗೊ ಎಲ್ಲ ನೆಂಪಾತು. ಪ್ರಾಯ ಅಲ್ಲಿಗೇ ನಿಂದು, ಕೆಳಾಂತಾಗಿ ಹೋದ ಹಾಂಗೆ ಅನಿಸಿತ್ತು. ಸುಮ್ಮನೆ ಅಲ್ಲ ಗಂಗಜ್ಜಿ (ಗಂಗೂಬಾಯಿ ಹಾನಗಲ್) ತೊಂಬತ್ತೈದು ವರ್ಷ ಬದ್ಕಿದ್ದು. 🙂

ಪ್ರಪಂಚಲ್ಲಿ ಯೇವದೇ ಜಗಳ ಇಲ್ಲದ್ದ ವಾತಾವರಣ ಅನಿಸಿ ಕುಶೀ ಆತು! ಯೇವ ಜಗಳವೂ ಇಲ್ಲೆ. ಜಾಗೆ ತಕರಾರು, ನೀರಿನ ಜಗಳ, ಹೋಕ್ವರ್ಕು ಬಿಟ್ಟದು, ಇಂತಾ ಎಲ್ಲಾ ಚಿರಿಪಿರಿ ಬಿಟ್ಟ ಶಾಂತತೆ (ಶಾಂತತ್ತೆ ಅಲ್ಲ!) ಇಪ್ಪ ವಾತಾವರಣ ಅನಿಸಿ ಹೋತು. ರಾಜ್ಯ – ರಾಜ್ಯದ ನಡುವೆ, ದೇಶ-ದೇಶದ ನಡುವೆ, ಜೆನ-ಜೆನದ ನಡುವೆ ಇರ್ತ ಎಲ್ಲ ಜಗಳ ನಂದಿ ಹೋದ ವಾತಾವರಣ ಅನಿಸಿ ಹೋತು. ಎಲ್ಲ ಉಗ್ರವಾದ ಶಮನ ಆದ ಸುಖ-ನೆಮ್ಮದಿ ಅನಿಸಿ ಹೋತು.

ಉಗ್ರವಾದಿ ಲಾಡೆನ್ನಿಂಗೆ ಇದರ ಕೇಳುಸಿರೆ ಬೆಡಿ ಕರೆಲಿ ಮಡಗಿ ವೀಣೆ ಹಿಡ್ಕೊಂಗೋ ಹೇಳಿ ಒಂದು ಕನುಪ್ಯೂಸು ಬಂದದು, ಒಪ್ಪಣ್ಣಂಗೆ. ಎಂತ ಹೇಳ್ತಿ? 🙂

1 Response to ಮುರಳೀ ರವಳೀ…

  1. subbanna mattihalli

    Aadu bhaasheyalli gambheera vichaara. ooadi bhaari khushi aitu..

Leave a Reply

*

code