ಅಂಕಣಗಳು

Subscribe


 

ಶ್ರೀ ಭಾರತೀ ಪ್ರಕಾಶನದಿಂದ ‘ಗುರುಗ್ರಂಥಮಾಲಿಕಾ’- 60 ದಿನದಲ್ಲಿ 60 ಪುಸ್ತಕಗಳ ನಿರಂತರ ಪ್ರಕಟಣೆಯ ವಿಶ್ವದಾಖಲೆಯಲ್ಲಿ ಕಲೆಯ ಕುರಿತ ಪುಸ್ತಕಗಳು

Posted On: Monday, October 28th, 2013
1 Star2 Stars3 Stars4 Stars5 Stars (No Ratings Yet)
Loading...

Author: - ‘ಮನೂಬನ’

ತಮ್ಮ ಗುರುತ್ವದಿಂದ ಲೋಕವನ್ನು ಬೆಳಗಿದ ಭಾರತೀಯ ಪರಂಪರೆಯ 60 ಮಹಾಪುರುಷರ ಜೀವನಕಥನ-ಮಾಹಿತಿಯನ್ನು ಒಳಗೊಂಡ 60 ಕನ್ನಡ ಪುಸ್ತಕಗಳ ಲೋಕಾರ್ಪಣೆ ಈ ಬಾರಿಯ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀ ರಾಘವೇಶ್ವರ ಸ್ವಾಮೀಜಿಗಳ ಚಾತುರ್ಮಾಸ್ಯದ ವಿಶೇಷ.

release of Bharatamuni book

ಈ ಪುಸ್ತಕಸರಣಿಯಲ್ಲಿ ಕಲಾದಿಗಂತದ ಮಹೋನ್ನತ ವ್ಯಕ್ತಿಗಳ ಜೀವನಸಂಕಥನವೂ ಇದೆಯೆಂಬುದು ನಮ್ಮ ಪಾಲಿಗೆ ಖುಷಿಯ ಸಂಗತಿ. ಅಷ್ಟೇ ಅಲ್ಲ, ಭರತಖಂಡದ ಶ್ರೇಯಸ್ಸಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ವಿಶೇಷ ವ್ಯಕ್ತಿಗಳ, ಗುರುಮಹಾತ್ಮರ, ಶಾಸ್ತ್ರಕಾರರ ಜೀವನಚರಿತ್ರೆ ಮತ್ತು ದುರ್ಲಭವೆನಿಸುವ ಶಾಸ್ತ್ರವಿಶೇಷಗಳನ್ನು ತಿಳಿಸುವ ಈ ಉಪಕ್ರಮ ಹಿಂದೆಂದೂ ನಡೆದಿರದ ದಾಖಲೆಯಾಗಿದೆ. ಆದ್ದರಿಂದ ಬೆಂಗಳೂರಿನ ಶ್ರೀ ಭಾರತೀ ಪ್ರಕಾಶನ ಹಮ್ಮಿಕೊಂಡ ಈ ಪುಸ್ತಕಯಾತ್ರೆಯು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ಗೆ ಸೇರಲಿದೆ ಎಂಬುದು ಕನ್ನಡ ಸಾಹಿತ್ಯಲೋಕದ ಪಾಲಿಗೆ ಹೆಮ್ಮೆ ಪಡಬೇಕಾದ ಅಂಶ.

ಹಾಗೆಂದು ಈ 60 ಪುಸ್ತಕದ ಯೋಜನೆ ದಾಖಲೆ ಮಾಡುವ ಉದ್ದೇಶಕ್ಕೆಂದೇ ಹೊರಟ ಪ್ರಯತ್ನವಲ್ಲ! ಆದರೂ ವಿಶ್ವದಾಖಲೆಯಾಗುವ ಎಲ್ಲಾಕಾರಣಗಳನ್ನು ಹೊಂದಿದೆ. 60 ದಿನಗಳ ಕಾಲ ಒಂದೇ ಪ್ರಕಾಶನದಿಂದ 60 ಪುಸ್ತಕ ಬಿಡುಗಡೆ; ಹೀಗೆ ಬಿಡುಗಡೆಯಾಗುವ ಪ್ರತೀ ಪುಸ್ತಕದ 250 ಪ್ರತಿಗಳನ್ನು ಉಚಿತವಾಗಿ 60 ದಿನಗಳ ಕಾಲ (ಅಂದರೆ ಒಟ್ಟಾರೆ ಸುಮಾರು 25,000 ಪ್ರತಿಗಳನ್ನು) ಉಚಿತವಾಗಿ ಮಠದ ಶಿಷ್ಯಪರಂಪರೆಯ ಮನೆಮನೆಗಳಿಗೆ ತಲುಪಿಸುವುದೆಂದರೆ ಸಾಮಾನ್ಯ ಮಾತೇ? ಪ್ರಸಕ್ತ ಜುಲೈ 12 ರಿಂದ ಪ್ರಾರಂಭವಾದ ಈ ಪಯಣ ಸೆಪ್ಟೆಂಬರ್ 9 ರವರೆಗೆ ಪ್ರತಿನಿತ್ಯ ಮಠದ ಶ್ರೀಭಾರತೀ ಪ್ರಕಾಶನದ ಕಡೆಯಿಂದ ಜರುಗುತ್ತಲಿದ್ದು ದಿನಕ್ಕೊಂದು ಪುಸ್ತಕ ಲೋಕಾರ್ಪಣೆಗೊಳ್ಳುತ್ತಾ ಅರಿವಿನ ಲೋಕಕ್ಕೆ ಹೊಸಬೆಳಕಿನ ಮುನ್ನುಡಿ ಬರೆಯುತ್ತಿದೆ.

‘ಪುಸ್ತಕ ಓದುವ ಪರಂಪರೆಯೇ ಕ್ಷೀಣೀಸುತ್ತಿದೆ’ ಎಂಬ ಅಪವಾದವನ್ನೇ ಸುಳ್ಳಾಗಿಸುವಂತೆ ಈ ಬೃಹತ್ ಯೋಜನೆ ಪ್ರಕಟಣೆಯ ಜೊತೆಜೊತೆಗೆ ಅಪಾರ ಓದುಗರನ್ನೂ ಏಕಕಾಲಕ್ಕೆ ಹೊಂದುತ್ತಲಿದೆ. ಪ್ರಕಾಶನವೊಂದು ಹೀಗೆ ಏಕಕಾಲದಲ್ಲಿ, ನಿರಂತರವಾಗಿ, ಅದೂ 60 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾ ಭಾರತೀಯ ಗುರು-ಮಹಾಪುರುಷರ ಕುರಿತು ದಿನಕ್ಕೊಂದು ಪುಸ್ತಕದಂತೆ ಬಿಡುಗಡೆ ಮಾಡುತ್ತಿರುವುದು ಸಾಹಿತ್ಯ-ಪ್ರಕಾಶನ ಕ್ಷೇತ್ರದಲ್ಲೇ ಪ್ರಥಮ ಅಲ್ಲದೆ ಸಮಾಜದ 25-30ಸಾವಿರ ಮನೆಗಳಿಗೆ ಉಚಿತವಾಗಿ ಪುಸ್ತಕ ನೀಡಲಾಗುತ್ತಿರುವುದು ಇತಿಹಾಸದಲ್ಲೊಂದು ಮೈಲುಗಲ್ಲು.

Mahaamuni Bharata Book  gurugranthamalika

ಈ ಮಾದರಿಯಲ್ಲೇ ಹಿಂದೊಮ್ಮೆ ರಾಷ್ಟ್ರೋತ್ಥಾನ ಪ್ರಕಾಶನವು ‘ಭಾರತ-ಭಾರತೀ’ ಪುಸ್ತಕಮಾಲೆಯಲ್ಲಿ ಒಂದೇ ಗುಕ್ಕಿಗೆ ಓದಿ ಮುಗಿಸುವಂತೆ ಹಲವು ದೇಶಭಕ್ತರ-ಪುರಾಣ ಪುರುಷರ ಕುರಿತು ಪುಟ್ಟ ಪುಟ್ಟ ಪುಸ್ತಕಗಳನ್ನು ಪ್ರಕಟಿಸಿತ್ತು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಅನಾವರಣಗೊಂಡ ಈ ಕೃತಿಸರಣಿಯು ಚಿಣ್ಣರಿಂದ ಮೊದಲ್ಗೊಂಡು ಬೇರೆ ಬೇರೆ ವಯೋಮಾನದ ಮನೆ-ಮನಗಳನ್ನು ತಲುಪಿತ್ತು. ನೃತ್ಯ-ಸಂಗೀತಾದಿ ಕಲಾವಿಷಯಗಳ ವಿಕಾಸಕ್ಕೆ ದುಡಿದ ಹಲವು ಮಹಾಪುರುಷರ ಸಂಕ್ಷಿಪ್ತಚಿತ್ರಣ ಆ ಮಾಲಿಕೆಯೊಳಗಿತ್ತು. ಈಗ ಶ್ರೀಭಾರತೀ ಪ್ರಕಾಶನ ಈ ನಿಟ್ಟಿನಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಿಯಮಿತವಾಗಿ ಗುರುವರೇಣ್ಯರ ಪುಸ್ತಕಗಳು ಲೋಕಾರ್ಪಣೆಗೊಳ್ಳುವಂತೆ ಸಮಗ್ರವಾಗಿ, ಸಂಕ್ಷಿಪ್ತವಾಗಿ, ‘ಭಾರತ-ಭಾರತೀ’ ಪುಸ್ತಕಮಾಲೆಗಿಂತಲೂ ಕೊಂಚ ದೊಡ್ಡ ಗಾತ್ರದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. (ವಿಶೇಷವೆಂದರೆ ಮುದ್ರಣದ ಜವಾಬ್ದಾರಿಯನ್ನು ರಾಷ್ಟ್ರೋತ್ಥಾನವೇ ವಹಿಸಿಕೊಂಡಿದೆ.)

ವಸಿಷ್ಠ, ವ್ಯಾಸ, ವಿಶ್ವಾಮಿತ್ರ, ಬೃಹಸ್ಪತಿ, ಅಗಸ್ತ್ಯ, ನಾರದ, ಪರಾಶರರಂತಹ ಹಲವು ಋಷಿಮುನಿಗಳು; ಯಾಜ್ಞವಲ್ಕ್ಯ, ಪಾಣಿನೀ, ಪಿಂಗಳ, ಬೋಧಾಯನ ಮುಂತಾದ ಶಾಸ್ತ್ರಕಾರರು; ಚರಕ, ಸುಶ್ರುತ, ವರಾಹಮಿಹಿರರಂತಹ ಶೋಧಕರು; ಸಮರ್ಥ ರಾಮದಾಸ, ಜ್ಞಾನೇಶ್ವರ, ಕೃಷ್ಣಚೈತನ್ಯರಂತಹ ಭಗವದ್ಭಕ್ತ ಕೃತಿರಚನಕಾರ-ದಿಗ್ಧರ್ಶಕರು, ಶಂಕರ, ಚಾಣಕ್ಯ, ಕುಮಾರಿಲಭಟ್ಟ, ಶ್ರೀರಂಗ, ಶ್ರೀಧರ, ರಮಣ, ವಿದ್ಯಾರಣ್ಯ, ದತ್ತಗುರುಗಳಂತಹ ಮಹಾಪುರುಷರು, ಪದ್ಮಪಾದ-ತೋಟಕ-ಹಸ್ತಾಮಲಕ-ದ್ರೋಣ-ಭೀಷ್ಮರಂತಹ ಆಚಾರ್ಯಸ್ವರೂಪರು..ಹೀಗೆ ಬೇರೆ ಬೇರೆ ಆಯಾಮದಲ್ಲಿ ಬಾಳಿ ಬೆಳಗಿದ ಮಹಾತ್ಮರ ಮಾಹಿತಿ, ಜೀವನಸಂಕಥನ, ತಿಳಿದುಕೊಳ್ಳಬೇಕಾದ ಕೃತಿ-ಶಾಸ್ತ್ರದ ಸಂಕ್ಷಿಪ್ತ ಪರಿಚಯಗಳು ಈ ಪುಸ್ತಕಮಾಲಿಕೆಯಲ್ಲಿ ಸಿಗುವುದು ವಿಶೇಷ.

ನೃತ್ಯ-ಸಂಗೀತದ ಆಸಕ್ತರಿಗೆ, ಅಧ್ಯಯನಾಪೇಕ್ಷಿಗಳಿಗೆ ವರವಾಗುವಂತೆ ಭರತಮುನಿ, ಆನಂಧವರ್ಧನ, ಅಭಿನವಗುಪ್ತ, ತ್ಯಾಗರಾಜ, ಸದಾಶಿವ ಬ್ರಹ್ಮೇಂದ್ರ, ವಿದ್ಯಾರಣ್ಯರ ಕುರಿತೂ ಪುಸ್ತಕಗಳು ಹೊರಬಂದಿವೆ. ಈ ಪುಸ್ತಕಗಳು ನಿತ್ಯ ಜೀವನದಲ್ಲಿ ಅನುಸರಿಸಬೇಕಿರುವ ಅಂಶಗಳು ಸೇರಿದಂತೆ ಬದುಕಲ್ಲಿ ಅಳವಡಿಸಿಕೊಳ್ಳಲೇಬೇಕಾದ ಪರಿಪೂರ್ಣ ವಿಚಾರ ಸಂದೇಶ ಸಾರುವ ಹೊತ್ತಿಗೆಯಾಗಿ ಜನರ ಕೈಸೇರುತ್ತಲಿದೆ.

ಆಕರ್ಷಕವಾದ ಮುಖಪುಟ, ಉತ್ತಮ ಗುಣಮಟ್ಟದ ಪುಟಗಳು, ಅಚ್ಚುಕಟ್ಟಾದ ಪುಟವಿನ್ಯಾಸ, ವೃದ್ಧರೂ ಓದಲು ಅನುಕೂಲವಾಗುವಂತೆ ದೊಡ್ಡ ಅಕ್ಷರಗಳಲ್ಲಿ ಮುದ್ರಣ ಈ ಪುಸ್ತಕಮಾಲಿಕೆಯ ಹೆಚ್ಚುಗಾರಿಕೆಗೆ ಸೇರ್ಪಡೆಯಾಗುವಂತದ್ದು. ಜೊತೆಗೆ ಇಂತಹ ಪುಸ್ತಕಗಳನ್ನು ಬರೆಯುವುದಾದರೂ ಯಾರು? ಸಾಹಿತ್ಯ-ಸಾಂಸ್ಕೃತಿಕ-ವಿದ್ವಲ್ಲೋಕದ ಸಂಪನ್ಮೂಲ ವ್ಯಕ್ತಿಗಳು, ವಿದ್ವಾಂಸರು, ಸಾಹಿತಿಗಳೇ ಪುಸ್ತಕಮಾಲಿಕೆಯ ಲೇಖಕರೂ ಕೂಡಾ ! ಹಿರಿಯ ವಿದ್ವಾಂಸ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರ ಮುಖವಚನ ಈ ಪುಸ್ತಕಮಾಲಿಕೆಯ ಪ್ರತೀ ಪುಸ್ತಕಗಳಿಗಿದೆ. ಈ ಮಾಲಿಕೆಯ ಸಂಪಾದಕತ್ವಕ್ಕಾಗಿ ವಿದ್ವಾನ್ ಜಗದೀಶ ಶರ್ಮ ಅವರ ಮುಂದಾಳತ್ವದಲ್ಲಿ ಹಲವು ಮಂದಿ ಪ್ರಾಜ್ಞರ ಕಾರ್ಯನಿರ್ವಹಣ ಸಮಿತಿಯೂ ಟೊಂಕ ಕಟ್ಟಿ ನಿಂತಿದೆ.

ಆದ್ದರಿಂದಲೇ ಈ ಪ್ರಯತ್ನವು ಸಾಂಸ್ಕೃತಿಕ-ಸಾಹಿತ್ಯಿಕ-ಧಾರ್ಮಿಕ-ಸಾಮಾಜಿಕ-ಸಂಶೋಧನೆ ಹೀಗೆ ಯಾವುದೇ ಕೋನಗಳಿಂದ ನೋಡಿದರೂ ಐತಿಹಾಸಿಕ ದಾಖಲೆಯಾಗಲಿದೆ. ಈ ನಿಟ್ಟಿನಲ್ಲಿ ರಾಘವೇಶ್ವರ ಶ್ರೀಗಳು ತಮ್ಮ ವ್ರತಕಾಲದಲ್ಲಿ ಭಾರತೀಯ ಗುರುವರೇಣ್ಯರನ್ನು ಗುರುತಿಸಿ ದಾಖಲಿಸಿ ಪ್ರಸರಿಸುವ ಕಾರ್ಯ ಹಮ್ಮಿಕೊಂಡಿರುವುದು ನಿಜಕ್ಕೂ ಸ್ತುತ್ಯರ್ಹ.

ಹಾಗೆಂದು ಈ ಪ್ರಯತ್ನ 60 ದಿನ- 60 ಪುಸ್ತಕಕ್ಕೆಂದೇ ಸೀಮಿತವಾಗಿಲ್ಲ. ಈಗಾಗಲೇ 60 ಪುಸ್ತಕಗಳಿಂದಾಚೆಗೂ ಹಲವು ಮಹಾತ್ಮರ ಕುರಿತು ಈ ಪುಸ್ತಕಗಳನ್ನು ಬರೆಯಲು ಲೇಖಕರಿಗೆ ಆಹ್ವಾನ ದೊರಕಿದ್ದು; ಈ ಗುರುಗ್ರಂಥಮಾಲಿಕೆಯಲ್ಲಿ 90ಕ್ಕಿಂತಲೂ ಹೆಚ್ಚಿನ ಗುರುವರೇಣ್ಯರ ಪುಸ್ತಕಗಳು ಮುದ್ರಣಗೊಳ್ಳುವುದು ಖಚಿತವಾಗಿದೆ. ಕನ್ನಡದ ಯುವಜನತೆ ಸೇರಿದಂತೆ ಎಲ್ಲ ಬಗೆಯ ಓದುಗರಿಗೂ-ಅಧ್ಯಯನಾಪೇಕ್ಷಿಗಳಿಗೂ ತಲುಪಿಸುವ ಸದುದ್ದೇಶದಿಂದ ಹೊರಟಿರುವ ಪ್ರಕಾಶನದ ಈ ಕಾರ್ಯ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆಯಾಗಿದೆ.

ಪ್ರತಿಯೊಂದು ಪುಸ್ತಕದ ಬೆಲೆ 60/-ರೂ (ಪುಸ್ತಕದ ಪುಟ, ವಿಷಯಗಳನ್ನು ಹೊಂದಿಕೊಂಡಂತೆ 80/-ರೂ ಇದ್ದಿರಲೂಬಹುದು) ಸದ್ಯಕ್ಕೆ ಈ ಗುರುಗ್ರಂಥಮಾಲಿಕೆಯ 60 ಪುಸ್ತಕಗಳನ್ನು ಒಮ್ಮೆಗೇ ಖರೀದಿಸುವವರಿಗೆ ರಿಯಾಯಿತಿಯಲ್ಲಿ 3000ರೂ/-ಗಳಿಗೆ (ಮೂಲಬೆಲೆ 4000/-) ಲಭ್ಯವಾಗಲಿದೆ. ಪುಸ್ತಕಗಳಿಗೆ ಶ್ರೀ ಭಾರತೀ ಪ್ರಕಾಶನದ ಅನೂರಾಧಾ ಪಾರ್ವತೀ ಬೆಂಗಳೂರು (ಮೊಬೈಲ್: 9880455776) ಇವರನ್ನು ಸಂಪರ್ಕಿಸಬಹುದು.

Leave a Reply

*

code