ಅಂಕಣಗಳು

Subscribe


 

ತರ್ಕಮದ್ದಲೆ – ಒಂದು ಸಾಧ್ಯತೆ

Posted On: Wednesday, August 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಯಕ್ಷಗಾನ ರಂಗಭೂಮಿಯ ವಿಶಾಲವಾದ ಸಾಧ್ಯತೆಗಳ ಚೌಕಟ್ಟಿನಲ್ಲಿ ಕೇವಲ ಪ್ರಯೋಗದ ದೃಷ್ಟಿಯಿಂದ ರೂಪಿಸಬಹುದಾದ ಒಂದು ರಂಗ ಕಲ್ಪನೆಯೇ ತರ್ಕಮದ್ದಲೆ – ತಾಳಮದ್ದಲೆ ಎಂಬ ಚಾಲ್ತಿಯಲ್ಲಿರುವ ಪದ್ಧತಿಯ ಹೆಸರಿನ ಬಲದಿಂದಲೇ ಈ ಹೆಸರನ್ನು ರೂಪಿಸಲಾಗಿದೆ. ಆದರೆ ಈ ಕಲ್ಪನೆ ಯಕ್ಷಗಾನದ ಸುಧಾರಣೆ ಅಥವಾ ಪರಿವರ್ತನೆ ಇತ್ಯಾದಿ ದೃಷ್ಟಿಕೋನಗಳನ್ನು ಖಂಡಿತ ಹೊಂದಿಲ್ಲ. ಹೊಂದಲೂ ಬಾರದು. ಆದರೆ ಯಕ್ಷಗಾನದ ಸ್ಥೂಲ – ಪರೋಕ್ಷ ಪ್ರೇರಣೆ ಇದಕ್ಕಿದೆ. ಇಲ್ಲಿಯೇ ಹೇಳಬೇಕು-ಇದು ಯಕ್ಷಗಾನಕ್ಕೆ ಏನೋ ಹೊಸ ಪ್ರೇರಣೆ ನೀಡುವಂಥದ್ದಲ್ಲ ಮತ್ತು ಅಂಥ ಉದ್ದೇಶವೂ ಈ ಪ್ರಯತ್ನಕ್ಕಿರಬಾರದು. ಕೇವಲ ಒಂದು ರಂಗಪ್ರಯತ್ನವಾಗಿ ಇದರ (ರಂಗ ಪ್ರಯತ್ನಕ್ಕೆ ಯಾರಾದರೂ ಮನಸ್ಸು ಮಾಡಿದರೆ ಅಂಥ ಪ್ರಯತ್ನದ) ಇತಿಮಿತಿಗಳನ್ನು ಧಾರಾಳವಾಗಿ ವಿಮರ್ಶಿಸಲು, ಟೀಕಿಸಲು ವಿಶ್ಲೇಷಿಸಲು ಅವಕಾಶವಿರುವ ಒಂದು ರಂಗ ಸಾಧ್ಯತೆ ಇದು.

ಹೆಸರೇ ಸೂಚಿಸುವಂತೆ ತರ್ಕಮದ್ದಲೆಯಲ್ಲಿ ತರ್ಕಕ್ಕೇ ಹೆಚ್ಚು ಅವಕಾಶ. ಚಿಂತನೆಗೆ ಹೆಚ್ಚು ಎಡೆ. ವಿಶ್ಲೇಷಣೆಗೆ ಹೆಚ್ಚು ಅವಕಾಶ. ಎಮೋಶನ್‌ಗಿಂತ ಹೆಚ್ಚು ರ‍್ಯಾಶನಾಲಿಟಿಗೆ ಅಂದರೆ ಭಾವಸಂವೇದನೆಗಳಿಗಿಂತ ಹೆಚ್ಚು ವಿಚಾರಣೆಗಳಿಗೆ ಮತ್ತು ವೈಚಾರಿಕತೆಗೆ, ಸರಿತಪ್ಪು ಸದ್ವಿವೇಚನೆಗೆ ಹೆಚ್ಚು ಅವಕಾಶ. ಯಕ್ಷಗಾನದಲ್ಲಿ ಬಳಸುವ ಮೂಲ ಪೌರಾಣಿಕ ಪ್ರಸಂಗಗಳ ಕಥಾಭಾಗಗಳನ್ನೆ ಆಯ್ದು ಆ ಕಥಾ ಪ್ರಸ್ತುತಿಯ ಮೂಲಕ ಪುರಾಣದ ಮಿಥ್‌ನ್ನು ಅಂದರೆ ಭ್ರಾಮಕ ಅವಾಸ್ತವಿಕತೆಯನ್ನು ಅಥವ ಸ್ವಲ್ಪಮಟ್ಟಿಗೆ ದೈವಿಕ ಮಾಯಕತೆಯನ್ನು ಮೀರುವ ರಂಗನಡೆಯೆ ತರ್ಕ ಮದ್ದಲೆಯ ಮುಖ್ಯ ಸಂಗತಿ.

ಸದ್ಯದ ತಾಳಮದ್ದಲೆಯೋ ಅಥವಾ ಗಂಭೀರ ವೈಚಾರಿಕ ನೆಲೆಗಟ್ಟಿನ ರಂಗಕೃತಿಗಳೋ(ಉದಾ:ಕುರುಕ್ಷೇತ್ರಕ್ಕೊಂದು ಆಯೋಗ) ಇದನ್ನು ಮಾಡುತ್ತಿವೆಯಲ್ಲ ಎಂಬ ಪ್ರಶ್ನೆ ಉದ್ಭವಿಸಬಹುದು. ಒಟ್ಟು ಪರಿಣಾಮದಲ್ಲಿ ಅಂಥ ವ್ಯತ್ಯಾಸ ಕಾಣಿಸದಿರಬಹುದು, ಪ್ರಯೋಗನಿರತರ ಪ್ರತಿಭೆಯಿಂದಾಗಿ ಕಾಣಲೂಬಹುದು ಎಂದು ಪ್ರಾರಂಭದಲ್ಲಿಯೇ ಒಪ್ಪಿಕೊಳ್ಳುತ್ತ ತರ್ಕಮದ್ದಲೆ ಪಡೆಯಬಹುದಾದ ಅಂಥ ಯಶಸ್ಸು ಪ್ರಯೋಗಾಸಕ್ತರ ಕಾಳಜಿಯನ್ನವಲಂಬಿಸಬೇಕಾದುದು ಅನಿವಾರ್ಯ ಎಂದಷ್ಟೆ ಈ ಹಂತದಲ್ಲಿ ಹೇಳಬಹುದು. ಪ್ರಯೋಗದ ನಂತರವೇ ಅದರ ಕಲಾ ಪ್ರಭಾವವು ಖಂಡಿತ ತಿಳಿದೀತು. ಒಂದೆರಡು ಪ್ರಯತ್ನಗಳಿಂದ ನಿಶ್ಚಿತ ಸಿದ್ಧಾಂತಗಳು ಅಸಾಧ್ಯ. ನಿರಂತರ ನಡೆದರೂ ವಸ್ತು, ವ್ಯಕ್ತಿ, ವಿವೇಚನೆಗಳ ಮಟ್ಟದಲ್ಲಿ ವ್ಯತ್ಯಾಸಗಳು ಆಗಬಹುದು. ಏಕವ್ಯಕ್ತಿ ತಾಳಮದ್ದಲೆ ಎಂಬುದನ್ನು ಡಾ. ಎಂ. ಪ್ರಭಾಕರ ಜೋಷಿ ಅವರು ಪಾತ್ರಧಾರಿಯಾಗಿ ಉಡುಪಿಯ ಸಮೂಹ ಮೊದಲ ಬಾರಿಗೆ ಪ್ರಯತ್ನಿಸಿದಾಗಲೂ ನಮಗಾದ ಅನುಭವದಿಂದ ಹೇಳಬಹುದಾದ ಮಾತು – ಯಾವುದೇ ನೂತನ ಆವಿಷ್ಕಾರವನ್ನು ಒಂದು ಜನಸಮುದಾಯ ಒಪ್ಪಿಕೊಂಡು ಕೆಲವೊಮ್ಮ ಪ್ರಚಾರದ ಬಲದಿಂದ ಅದು ಸ್ವೀಕರಿಸುವ ಅಥವಾ ಸಹಿಸಿಕೊಳ್ಳುವ ರಂಗ ಪ್ರಕಾರವಾಗುವುದೇ ಅಂಥ ಪ್ರಯತ್ನದ ಸಾಧನೆ ಎಂದು ಹೇಳುವಂತಿಲ್ಲ.ಅದೇ ಹೊತ್ತಿಗೆ ಬಲವಾದ ಕಾರಣದಿಂದ ಮತಧರ್ಮಗಳಲ್ಲಿ ಪಂಥಗಳು ಟಿಸಿಲೊಡೆದಂತೆ ಕಲಾಪ್ರಕಾರಗಳಲ್ಲಿ ನಡೆಯುವ ಶಾಖಾವಿನ್ಯಾಸ, ಶೈಲಿಭೇದಗಳು ಚಾಲ್ತಿಯಲ್ಲಿ ಉಳಿಯುವುದು ಸಾಧ್ಯ. ಉದಾಹರಣೆಗೆ, ಕಥಕಳಿಯಲ್ಲಿ ರಾಜನ ಆಸ್ಥಾನದಲ್ಲಿ ಪಾತ್ರ ವಹಿಸುವ ಅವಕಾಶದಿಂದ ವಂಚಿತನಾದ ಕುಂಚನ್‌ನಂಬಿಯಾರ್ ಎಂಬ ಕಲಾವಿದ ಸುಮಾರು ೨೦೦ ವರ್ಷಗಳ ಹಿಂದೆ ತಾನೇ ಒಬ್ಬ ಏಕಪಾತ್ರಧಾರೀ ಕಥಕ್ಕಳಿ ಪ್ರದರ್ಶನಕಾರನಾಗಿ ಆರಂಭಿಸಿದ ಓತ್ತುಂತುಳಲ್ (ಓಟಂತುಳಲ್) ಅಂದರೆ ಓಟ, ನೆಗೆತದ ಸರಳ ಕಲಾಪ್ರಕಾರವನ್ನು ಆರಂಭಿಸಿ ಜನಮನ ಗೆದ್ದಂತೆ ಇಂಥ ಪ್ರಯತ್ನ ಸಾಗಬೇಕಾಗಿದೆ.

ತರ್ಕಮದ್ದಲೆಯ ರಂಗ ಸ್ವರೂಪವನ್ನು ಸರಳವಾಗಿ ಹೀಗೆ ನಿರ್ದೇಶಿಸಬಹುದು.

1. ಸಾಧ್ಯವಾದಷ್ಟು ವಿವೇಚನೆಗೆ ಎಡೆಮಾಡಿ ಕೊಡುವ ಮತ್ತು ಕಾಡುವ ಕಥಾಭಾಗವನ್ನು ಆಯ್ದುಕೊಂಡು ಅದರ ಪ್ರಸಂಗ ಪದ್ಯಗಳನ್ನು ಸುಸಂಬದ್ಧಗೊಳಿಸಲು ಒಂದು ರಂಗಪಠ್ಯವನ್ನು ನಿರ್ಮಿಸುವುದು ಮೊದಲ ಹೆಜ್ಜೆ. ಈಗೀಗ ತಾಳ ಮದ್ದಲೆಯಲ್ಲಿ ಇಂಥ ಪದ್ಯಗಳ ಆಯ್ಕೆ ಮತ್ತು ಮರು ಜೋಡಣೆ ನಡೆಯುತ್ತಿವೆಯಾದರೂ ತರ್ಕಮದ್ದಲೆಯಲ್ಲಿ ಇದು ಇನ್ನಷ್ಟು ಸೂಕ್ತವಾಗಿ ನಡೆಯಬೇಕು. ಇಲ್ಲಿಯೇ ಹೇಳಬೇಕು. ಅನೇಕ ಪ್ರಸಂಗಗಳ ಪದ್ಯಗಳಲ್ಲಿ ಖಂಡಿತಕ್ಕೂ ಇದೀಗ ತಾಳಮದ್ದಲೆ ಪಾತ್ರಧಾರಿಗಳು ಅದ್ಭುತವಾಗಿ ವಿಸ್ತಾರಗೊಳಿಸುವಂಥ ಅರ್ಥಗಾರಿಕೆಗೆ ನೇರವಾಗಿ ಎಡೆಯಿಲ್ಲ. ಪ್ರಸಂಗಗಳು ಸಂದರ್ಭಗಳನ್ನು ಮಾತ್ರ ಒದಗಿಸುತ್ತವೆ. ಹೆಚ್ಚಿನ ಪ್ರಸಂಗಗಳು ಸುಂದರ ಸರಳ ಹಾಡುಗಬ್ಬಗಳು. ರಂಗ ಕಾವ್ಯಗಳು. ಅವುಗಳನ್ನು ಆಧರಿಸಿ ಅರ್ಥಧಾರಿಗಳು ಉತ್ಕ್ರಷ್ಟ ಪಾತ್ರ ಚಿತ್ರಣ, ಚಿಂತನೆಗಳನ್ನು ಮಾಡುತ್ತಿರುವುದಕ್ಕೆ ಕಾರಣ ಅವರ ಅಧ್ಯಯನ ಮತ್ತು ವಾಕ್‌ಪ್ರತಿಭೆ. ತರ್ಕಮದ್ದಲೆಗೂ ಈ ಸಿದ್ಧತೆ ಅಗತ್ಯ.

2. ಈ ಹಿಂದೆ ಸಮೂ ಪ್ರಯತ್ನಸಿದ ಕಡೆಂಗೋಡ್ಲು ಅವರ ಸೀತಾಪಹಾರ ಕಾವ್ಯಾಧಾರಿತ ಕಾವ್ಯ ತಾಳಮದ್ದಲೆಯಂತೆ ಈ ಪ್ರಯತ್ನಕ್ಕೆ ಅನುಕೂಲವಾಗುವ ಆಯ್ದ ಕಥಾಭಾಗಕ್ಕೆ ಪೂರಕವಾಗುವ ಪದ್ಯಗಳನ್ನು ಹೊಸದಾಗಿ ರಚಿಸಿ ಮೂಲ ಪ್ರಸಂಗದೊಂದಿಗೆ ಅಲ್ಲಲ್ಲಿ ಜೋಡಿಸಿಕೊಳ್ಳಬೇಕಾದುದು ತರ್ಕಮದ್ದಲೆಗೆ ಅಗತ್ಯ. ಪಾತ್ರಗಳು ತರ್ಕಸರಣಿಯನ್ನು ಪೋಣಿಸುವ ಹಾಗೆ ಪ್ರಸಂಗಪದ್ಯಗಳ ಜಾಡು, ಜೋಡಣೆ ಸಾಗಬೇಕು.

3. ಯಾವುದೇ ೨ ಯಾ ೩ ಪಾತ್ರಗಳ, ಒಂದು ಕಥಾ ಸಂದರ್ಭದ ಉದಾಹರಣೆಗೆ, ಶ್ರೀರಾಮ ಬಾಣ ಬಿಟ್ಟ ಮೇಲೆ ವಾಲಿ ಬಾಣ ಸಹಿತ ರಾಮನಿಗೆ ಮುಖಾಮುಖಿಯಾಗುವ ಭಾಗಶಃ ಕಥಾ ಸಂದರ್ಭವಾಗದೆ ಒಂದು ಪೌರಾಣಿಕ ಕಥೆಯ ಪೂರ್ಣಚಿತ್ರಣ ದೊರಕುವಂತೆ ಪ್ರಸಂಗದರಚನೆ, ಆಯ್ಕೆ ಅಥವಾ ಸಂಪಾದನೆ ನಡೆಯಬೇಕು. ಎಲ್ಲ ಸಂದರ್ಭಗಳಿಗೂ ತರ್ಕ ಬೇಕಾಗಿಲ್ಲ. ಮುಖ್ಯ ಘಟ್ಟಗಳಲ್ಲಿ ಮಾತ್ರ ತರ್ಕ ಸರಣಿ ಮೂಡಿಬರಬೇಕು.

4. ಚಾಲ್ತಿಯಲ್ಲಿರುವ ತಾಳಮದ್ದಲೆಗಿಂತ ಭಿನ್ನ ಸ್ವರೂಪನ್ನು ತರ್ಕ ಮದ್ದಲೆ ಹೊಂದುವುದೇ ಬಹುಮುಖ್ಯವಾದ ಪಾತ್ರಭಿನ್ನತೆಯಿಂದ. ಕಥೆಯ ಪಾತ್ರಗಳಲ್ಲದೆ ವೈಚಾರಿಕ ವಾದಗಳನ್ನು ಮಂಡಿಸುವ ಕೃತಕಪಾತ್ರಗಳನ್ನು ತರ್ಕಮದ್ದಲೆಯ ನಿರ್ದೇಶಕ ರೂಪಿಸಬೇಕಾದುದು ಅಗತ್ಯ. ಪ್ರಸಂಗದ ಪಾತ್ರಗಳಲ್ಲದೆ ಈ ಪ್ರತ್ಯೇಕ ಪಾತ್ರ ಸಮೂಹ ತರ್ಕಮದ್ದಲೆಯ ಪ್ರಮುಖ ಅಂಗ. ಏನಿದು ಪ್ರತ್ಯೇಕ ಪಾತ್ರ? ಕೃತಕ ಪಾತ್ರ ಸಮೂಹ? ಬೇರೇನು ಅಲ್ಲ. ಕಥೆಯ ಭಾವ ಸಂದರ್ಭಕ್ಕೆ ತಾರ್ಕಿಕ ಆಯಾಮ ನೀಡುವ ಪಾತ್ರಗಳೇ ಈ ಪ್ರತ್ಯೇಕ ಪಾತ್ರಗಳು. ಗ್ರೀಕ್ ನಾಟಕದಂತೆ ಇದು ಮೇಳ – ಕೊರಸ್‌ಪಾತ್ರ. ಉದಾಹರಣೆಗೆ ರಾಮ ಒಂದು ಪಾತ್ರವಾದರೆ ರಾಮನಿಗೆ ಮುಖಾಮುಖಿಯಾಗುವ ತರ್ಕವ್ಯಕ್ತಿ ಇನ್ನೊಂದು ಪಾತ್ರ.

ಪ್ರಾಯೋಗಿಕವಾಗಿ ಕನಿಷ್ಠ ೨ ಮಂದಿ ಗರಿಷ್ಠ ೪ ಮಂದಿ ಇಂಥ ಪ್ರತ್ಯೇಕವಾದ ಅರ್ಥ ಕಲಾವಿದರನ್ನು ಪಾತ್ರ ಸಮೂಹವಾಗಿ ಬಳಸಿಕೊಳ್ಳಬೇಕು. ತರ್ಕಮದ್ದಲೆ ಎಂಬೀ ಪರಿಕಲ್ಪನೆ ಹೆಚ್ಚು ಕಡಿಮೆ ಗ್ರೀಕ್ ನಾಟಕದ ಮೇಳದ ಸೈದ್ಧಾಂತಿಕ ಸೂತ್ರದಿಂದ ಸ್ಫೂರ್ತಿಯನ್ನು ಪಡೆದಿದೆ. ತರ್ಕಮದ್ದಲೆಯಲ್ಲಿ ಇವರನ್ನು ವಾದಿ ಪ್ರತಿವಾದಿಗಳು ಎಂಬುದಾಗಿ ಕರೆಯಬಹುದು. ತರ್ಕಪಂಡಿತರೆಂದೂ ಕರೆಯಬಹುದು. ವಾದಿರಾಜರೆಂದೂ ಕರೆಯಬಹುದು. ಸರಳವಾಗಿ ತರ್ಕ ಪಾತ್ರ ಒಂದು, ಎರಡು ಎಂಬುದಾಗಿ ಗುರುತಿಸಬಹುದು.

5. ತರ್ಕಮದ್ದಲೆಯ ಕಥಾ ಪಾತ್ರಧಾರಿಗಳು ಉದಾಹರಣೆಗೆ, ರಾಮ, ರಾವಣ ಇತ್ಯಾದಿ, ಆ ಪಾತ್ರಗಳು ಮಾತ್ರ ಆಗಿರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಆ ಪಾತ್ರಗಳ ಪೌರಾಣಿಕ ಸಂದರ್ಭಗಳಿಗೆ ಮಾತ್ರ ತಮ್ಮ ಅರ್ಥಗಾರಿಕೆಯನ್ನು ಸೀಮಿತಗೊಳಿಸಬೇಕು. ಹೀಗೆ ಅರ್ಥ ಹೇಳುವಾಗ ಅಡಿಗಡಿಗೆ ಸೂಕ್ಷ್ಮ, ನಿರ್ಣಾಯಕ ಸಂದರ್ಭಗಳಲ್ಲಿ ಅವರು ತರ್ಕ ಪಾತ್ರಧಾರಿಗಳಿಗೆ ಮುಖಮುಖಿಯಾಗಿ ತಮ್ಮ ಪಾತ್ರ ಸಂದರ್ಭಗಳ ತರ್ಕಬದ್ಧ ಸರಿತಪ್ಪುಗಳಿಗೆ, ವಿಶ್ಲೇಷಣೆಗೆ, ತಮ್ಮನ್ನು ಒಡ್ಡಿಕೊಳ್ಳಬೇಕು.

6. ತರ್ಕಮದ್ದಲೆಯ ಜೀವಾಳವೇ ಈ ತರ್ಕಪಾತ್ರಧಾರಿಗಳ (ಅ) ಮಧ್ಯ ಪ್ರವೇಶ

ಆ) ಉದ್ಗಾರ, ಪ್ರತಿಕ್ರಿಯೆ, ಅವಲೋಕನ ಮತ್ತು (ಇ) ತರ್ಕಬದ್ಧ ಕಥಾ ಜೋಡಣೆ.

7. ಅಂದರೆ ತರ್ಕಪಾತ್ರಗಳು – ಪೌರಾಣಿಕ ಕಥಾಭಾಗದ, ಮೌಲ್ಯಗಳ, ಆಧುನಿಕ ಪ್ರಸ್ತುತತೆಯ, ಪಾತ್ರಗಳ ಆತ್ಮಾವಲೋಕನದ, ಹಾಗೂ ಪ್ರೇಕ್ಷಕರ ಎಲ್ಲ ಸಂಶಯಗಳಿಗೆ, ಧ್ವನಿಗಳಿಗೆ ಮುಖವಾಣಿಯಾಗಿ ತರ್ಕಮದ್ದಲೆಯಲ್ಲಿ ಮೂಡಿಬರಬೇಕು.

8. ತರ್ಕಪಾತ್ರಧಾರಿ ಎಲ್ಲಂದರಲ್ಲಿ, ಪಾತ್ರಗಳ ಮಾತಿನ ಸರಣಿಯನ್ನು ತುಂಡರಿಸಿ ಪ್ರಶ್ನೋತ್ತರವಾದರೆ ಪ್ರಶ್ನೋತ್ತರ, ಪ್ರತಿಕ್ರಿಯೆ, ಶಹಭಾಸ್‌ಗಿರಿ, ಉದ್ಗಾರವಾದರೆ ಹಾಗೆ – ನಡೆಸುತ್ತ ತರ್ಕ ಸರಣಿಯನ್ನು ರಸಭಂಗವಾಗದಂತೆ ಜೋಡಿಸಬೇಕು. (ಅಷ್ಟಾವಧಾನದಲ್ಲಿ ನಡುನಡುವೆ ಒಬ್ಬರು ಮಧ್ಯಪ್ರವೇಶಿಸಿದಂತೆ ಇದನ್ನು ಊಹಿಸಬಹುದಾದರೂ ಕಥೆಯ ಹಂದರ ಶಿಥಿಲಗೊಳ್ಳಬಾರದು ಎಂಬುದು ಇಲ್ಲಿ ಮುಖ್ಯ.)

9. ಈ ತರ್ಕ ವಿವೇಚನೆಯು ತರ್ಕಪಾತ್ರಗಳ ನಡುವೆ, ಪಾತ್ರಧಾರಿಗಳೊಡನೆ, ಕೆಲವೊಮ್ಮೆ ಭಾಗವತರೊಡನೆ ಲವಲವಿಕೆಯಿಂದ ಸರಾಗವಾಗಿಸಾಗಬೇಕು. ಕಥೆಯ ಓಟವನ್ನು ಬಿಡದಿರುವುದು ಮುಖ್ಯ. ಅತಿವಾಚಾಳಿತನ, ಅನಗತ್ಯ ಪಾತ್ರನಿಂದನೆ, ಪೌರಾಣಿಕ ಛಿದ್ದ್ರೀಕರಣ ನಡೆಯದಂತೆ ಸದ್ವಿಚಾರಗಳ ವಿವೇಚನೆ ನಡೆಯಬೇಕು. ಆಶು ಸಂಭಾಷಣೆಯೇ ಆಧಾರವಾಗಬೇಕು.

10. ತುಂಬ ಪ್ರಾಥಮಿಕ ಹಂತದ ರೂಪುರೇಷೆ ನೀಡಿದ್ದೇನೆ ಎಂಬ ಅರಿವು ನನಗಿದೆ. ಸಾಧ್ಯತೆಯ ದಾರಿಯೂ ಅಷ್ಟು ಸುಗಮವಾಗಿಲ್ಲ ಎಂಬುದೂ ತಿಳಿದಿದೆ. ಆದರೆ ಬೌದ್ಧಿಕವಾಗಿ ಬಹು ಎತ್ತರಕ್ಕೆ ಬೆಳೆದಿರುವ ತಾಳಮದ್ದಲೆ ಎಂಬ, ಜಗತ್ತಿನಲ್ಲಿ ಇದು ಒಂದೇ ಒಂದು ಎಂದು ಹೇಳಬಹುದಾದ, ರಂಗ ಪ್ರಕಾರದಲ್ಲಿ ಅನೇಕ ಪ್ರತಿಭಾವಂತ ಹಿರಿಯ ತರುಣ (ಮಹಿಳೆಯರೂ ಸೇರಿ) ಅರ್ಥಧಾರಿ ಕಲಾವಿದರು ಸಾಧಿಸುತ್ತಿರುವ ವೈಚಾರಿಕ ವಾಕ್ ಸಿದ್ಧಿಯನ್ನು ಕಂಡು ಕೇಳಿ ಆನಂದಿಸಿದ ನನಗೆ ಅದು ತನ್ನೊಳಗಿರುವ ಅಪಾರ ಸಾಧ್ಯತೆಗಳನ್ನು ಇನ್ನಷ್ಟು ಕ್ರಿಯಾಶೀಲ ಗೊಳಿಸಬಹುದು ಎಂಬ ಹಸಿ ಹಸಿ ಹಸಿವಿರುವುದರಿಂದ ತರ್ಕಮದ್ದಲೆಯ ಪರಿಕಲ್ಪನೆಯನ್ನು ಟಿಪ್ಪಣಿಯಾಗಿಸಿದ್ದೇನೆ. ತಾಳಮದ್ದಲೆಯ ಭಾವನಾತ್ಮಕ ಮತ್ತು ವೈಚಾರಿಕ ಅಂಶಗಳನ್ನು ಪ್ರತ್ಯೇಕಿಸುವುದರಲ್ಲಿ ತರ್ಕಮದ್ದಲೆಯ ಸೂಕ್ಷ್ಮ ಅಡಗಿದೆ ಎಂಬುದನ್ನಷ್ಟೆ ಈ ಹಂತದಲ್ಲಿ ಟಿಪ್ಪಣಿಯ ಮುಕ್ತಾಯ ವಾಗಿಸುತ್ತಿದ್ದೇನೆ.

ಈ ಪರಿಕಲ್ಪನೆ ಬೀಜಾಂಕುರವಾದುದು ೩ ವರ್ಷಗಳ ಹಿಂದೆ. ಅಮೇರಿಕಾದ ನ್ಯೂಜೆರ್ಸಿಯಲ್ಲಿ ಮಗಳಮನೆಯಲ್ಲಿ ಅವಳ ಬಾಣಂತಿತನದಿಂದಾಗಿ ಅನಿವಾರ್ಯ ಗೃಹಬಂಧನದಲ್ಲಿರುವಾಗ. ಆದರೂ ಅವಳ ನೆರವಿನಿಂದ ರಂಗಭೂಮಿಗೆ ಸಂಬಂಧಿಸಿದ ಕೆಲವು ಗ್ರಂಥಗಳನ್ನು ಮತ್ತು ಅಂತರ್‌ಜಾಲಮಾಹಿತಿ ಸಂಗ್ರಹಗಳನ್ನು ಅವಲೋಕಿಸುವುದು ಸಾಧ್ಯವಾಯಿತು. ಗ್ರೀಕ್‌ರಂಗಭೂಮಿಯ ಕುರಿತು ಒಂದೆರಡು ಮುಖ್ಯ ಗ್ರಂಥಗಳ ಓದು ಸಾಧ್ಯವಾಗಿ ತರ್ಕಮದ್ದಲೆ ಯ ಅಸ್ಪಷ್ಟ ಸಾಧ್ಯತೆ ಕೆಲಸವಿಲ್ಲದವನ ಕೈ(ಮನ) ಕೂಸಾಯಿತು. ಅದರೊಂದಿಗೆ ನನ್ನದೇ ಓದಿನ ಧ್ವನಿ ಗ್ರಹಣದ ನೆರವಿನಿಂದ ಒಂದು ಏಕವ್ಯಕ್ತಿ ಗದ್ಯ ರಂಗಾಭಿವ್ಯಕ್ತಿಯ ಪ್ರಯತ್ನವೂ (ಸೀಳುಬಿದಿರಿನ ಸಿಳ್ಳು) ಸಾಗಿತು.

ತರ್ಕಮದ್ದಲೆಯನ್ನು ಟಿಪ್ಪಣಿಯಾಗಿಸುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಒಂದು ವಿಚಾರವನ್ನು ಇಲ್ಲಿಯೇ ಪ್ರಸ್ತಾಪಿಸಬೇಕು. ಯಕ್ಷಗಾನ ಕಲಾರಂಗವು ನಿರಂತರ ಪ್ರಯೋಗ ಶೀಲ ರಂಗಭೂಮಿಯಾದರೂ ಅದರಲ್ಲಿ ನಡೆಯುವ ಪ್ರಯೋಗಗಳು ಭಿನ್ನ ರಂಗವಲಯದ (ನಾಟಕ, ನೃತ್ಯ, ಲೇಖನ ವ್ಯವಸಾಯ) ಪ್ರಯೋಗಾಸಕ್ತರಿಂದಲೇ ನಡೆಯುತ್ತಿದ್ದು ಯಕ್ಷಗಾನದ ಮೂಲ ಚೌಕಟ್ಟಿನೊಳಗಿರುವ ಕಸುಬುದಾರಿಗಳಿಂದ ನಡೆಯುತ್ತಿರುವುದು ಕಡಿಮೆ ಅಥವಾ ಅವರು ಪ್ರಯೋಗ ನಡೆಸುತ್ತಿದ್ದೇವೆ ಎಂಬ ಅರಿವಿಲ್ಲದೆಅಪ್ರಜ್ಞಾಪೂರ್ವಕ ಪ್ರಯೋಗದ ಹರಹುವನ್ನು ವಿಸ್ತಾರಗೊಳಿಸುತ್ತಿದ್ದಾರೆ. ಇತ್ತೀಚೆಗೆ ತಾಳಮದ್ದಲೆಯ ಕುರಿತಾಗಿಯೂ ಭೌಗೊಳಿಕವಾಗಿ ಮತ್ತು ಸಾಂಸ್ಕ್ರತಿಕವಾಗಿ ತಾಳಮದ್ದಲೆ ಕ್ಷೇತ್ರದ ಹೊರಗಿನವರೇ ಒಳಗೆ ಇಣುಕುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿರುವುದು ಯಕ್ಷಗಾನದ ಮೇಲೆ ಆಗುತ್ತಿರುವ ಬಾಹ್ಯ ಪ್ರಭಾವ (ಆಕ್ರಮಣ?)ಕ್ಕೆ ಸ್ಪಷ್ಟನಿದರ್ಶನ. ತರ್ಕಮದ್ದಲೆಯೂ ಅಂಥ ಅಪಾಯಕ್ಕೆ ಕಾರಣವಾದೀತು ಎಂಬ ಭಯವೂ ನನ್ನೊಳಗಿದೆ.

ಇದೊಂದು ಸ್ಥೂಲ ಕಲ್ಪನಾತ್ಮಕ ಚೌಕಟ್ಟು ಮಾತ್ರ. ತಾಳಮದ್ದಲೆ ಮತ್ತು ಯಕ್ಷಗಾನ ಪ್ರದರ್ಶನ ಸಾಕಷ್ಟು ಪ್ರಬುದ್ಧವಾಗಿ ವಿಕಾಸಗೊಂಡಿರುವಾಗ ಇಂಥ ಅಧಿಕಪ್ರಸಂಗ – ಪ್ರಯತ್ನ ಬೇಕೇ ಎಂಬ ಉದ್ಗಾರ ಉದ್ಭವಿಸಬಹುದು. ಸಹಜ. ಮೊದಲೆ ಹೇಳಿದಂತೆ ಪ್ರಬುದ್ಧವಾಗಿರುವ ಯಕ್ಷಗಾನದ ಯಾವತ್ತು ಸುಧಾರಣೆ ಈ ರಂಗ ಕಲ್ಪನೆಯ ಉದ್ದೇಶವಲ್ಲ. ಇದೊಂದು ಸಾಧ್ಯತೆಯ ರಂಗಕಲ್ಪನೆ ಮಾತ್ರ. ಆದರೆ ಇದರ ಹಿಂದೆ ಒಂದು ಚಿಂತನೆ ಇದೆ. ಯಕ್ಷಗಾನ ತಾಳಮದ್ದಲೆಯ ವಿಶಾಲ ಚೌಕಟ್ಟಿಗೆ ಗ್ರೀಕ್, ಬ್ರೆಕ್ಟ್, ಸಂಸ್ಕ್ರತ ನಾಟಕಗಳ ರಂಗ ಸೂಕ್ಷ್ಮಗಳನ್ನು ಮತ್ತು ನಮ್ಮದೇ ಪರಂಪರೆಯ ಹರಿಕಥೆ, ಗಮಕ ವಾಚನ ಇತ್ಯಾದಿಗಳ ಕಲಾತ್ಮಕತೆಯನ್ನು ಸಮಹದದಲ್ಲಿ ಬೆರಸಿ ಒಂದು ರಂಗಾನುಭವನ್ನು ಪಡೆಯುವುದೇ ಈ ತರ್ಕಮದ್ದಲೆ ಎಂಬ ರಂಗಕಲ್ಪನೆಯ ಉದ್ದೇಶ. ಜಗತ್ಪ್ರಸಿದ್ಧ ನಾಟಕಗಳನ್ನು ಉದಾಹರಣೆಗೆ ರೋಮಿಯೋ ಎಂಡ್ ಜೂಲಿಯಟ್‌ನ್ನು ಬ್ಯಾಲೆಯಾಗಿಸಿದಂತೆ, ಸ್ವ್ಯಾನ್‌ಲೇಕ್‌ನಂಥ ಆಕರ್ಷಕ ಬ್ಯಾಲೆಗಳನ್ನು ಭಿನ್ನರೀತಿಗಳಲ್ಲಿ ಭಿನ್ನತಂಡಗಳು ಮತ್ತೆ ಮತ್ತೆ ನಾಟಕವಾಗಿ ಪ್ರಯೋಗಿಸಿದಂತೆ ನಮಗೆ ದಕ್ಕಿದ ಒಂದು ಮಾಧ್ಯಮದಲ್ಲಿ ಪ್ರಯೋಗದ ದೃಷ್ಟಿಯಿಂದ ನಡೆಸಬಹುದಾದ ಇಂಥ ಪ್ರಯತ್ನ ಕೇವಲ ಜನಾಕರ್ಷಣೆಯ ದೌರ್ಬಲ್ಯವನ್ನು ಮೀರಬೇಕಾದುದು ಅಗತ್ಯ.*

(ಲೇಖಕರು ಹೆಸರಾಂತ ವಿದ್ವಾಂಸರು, ಕವಿಗಳು, ಉಡುಪಿ ನಿವಾಸಿ)

Leave a Reply

*

code