ಅಂಕಣಗಳು

Subscribe


 

ರಂಗಸಂಗೀತ : ಒಂದಷ್ಟು ವಿಚಾರ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ಮೂರ್ತಿ ದೇರಾಜೆ, ವಿಟ್ಲ

ಶ್ರೀಯುತ ಮೂರ್ತಿ ದೇರಾಜೆ, ದಕ್ಷಿಣಕನ್ನಡದ ಪುಟ್ಟ ಊರು ವಿಟ್ಲದಲ್ಲಿ ನೆಲೆಸಿರುವ ಹಿರಿಯ ರಂಗಕರ್ಮಿ, ಸಂಘಟಕರು, ವಿಮರ್ಶಕರು, ಸಮಸಾಂಪ್ರತಿ ಮತ್ತು ತಮ್ಮ ತಂದೆ ಯಕ್ಷಗಾನ ಅರ್ಥಧಾರಿ, ಸಾಹಿತಿ ದೇರಾಜೆ ಸೀತಾರಾಮಯ್ಯರ ಸ್ಮರಣಾರ್ಥವಾಗಿ ಸಂಸ್ಥೆಯನ್ನು ರೂಪಿಸಿ ಅನೇಕ ಪ್ರಕಾಶನ, ಯಕ್ಷಗಾನ, ಸಂಗೀತ, ನಾಟಕ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದ್ದಾರೆ. ಅವರ ಬರೆಹಗಳು ಈಗಾಗಲೇ ನಾಡಿನ ಹಲವು ನಿಯತಕಾಲಿಕೆ, ಪತ್ರಿಕೆ, ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗುತ್ತಲೇ ಬಂದಿವೆ. ಅದು ರಂಗಭೂಮಿಯಾಗಿರಲಿ, ನೃತ್ಯವಾಗಿರಲಿ, ಸಂಗೀತ, ಶಿಲ್ಪ, ಕುಶಲಕಲೆ, ಚಿತ್ರಕಲೆಗಳಾಗಿರಲಿ.. ಇವರ ಅನುಭವಜನ್ಯವಾದ ಮಾತುಗಳಲ್ಲಿ ಕಲಾವಿದರು ಮನನ ಮಾಡಿಕೊಳ್ಳಬೇಕಾದ ಸಾಕಷ್ಟು ವಿಚಾರಗಳಿವೆ. ಇಂದಿಗೆ ಕಲೆ ಮತ್ತು ಶಿಕ್ಷಣದ ಪರಸ್ಪರ ಸಂಬಂಧವು ಮಕ್ಕಳಲ್ಲಿ ಮೂಡಬೇಕಾದ ಬಗೆಯನ್ನು ಚಿತ್ರಿಸಿದ್ದಾರೆ. ಇದು ಈ ಹೊತ್ತಿನ ಅನಿವಾರ್ಯವೂ ಆಗಿದೆ. ಈ ಸಂಬಂಧ ಯಾವುದೇ ಚರ್ಚೆ, ಸಂವಾದ, ಅನಿಸಿಕೆಗಳಿಗೆ ಮುಕ್ತ ಅವಕಾಶವಿದೆ-ಸಂ)

 

ಸಂಗೀತ ಎನ್ನುವುದು ಬಹಳ ದೊಡ್ಡ ಸಂಗತಿ. ಸಂಗೀತ ಎಂದರೆ ಮನಸ್ಸನ್ನು ತೋಡಿಕೊಳ್ಳುವುದು. ಶಾಸ್ತ್ರೀಯ ಸಂಗೀತ, ಚಿತ್ರಗೀತೆ, ರಂಗಗೀತೆ, ಭಾವಗೀತೆ, ಜನಪದ ಗೀತೆ, ಯಕ್ಷಗಾನದ ಹಾಡು, ಪಾಶ್ಚಾತ್ಯ ಸಂಗೀತ…ಹೀಗೆ, ಸಂಗೀತದ ಅನೇಕ ಪ್ರಾಕಾರಗಳಲ್ಲಿ ಕನಿಷ್ಟ ಯಾವುದಾದರೂ ಒಂದನ್ನಾದರೂ ಇಷ್ಟಪಡದವರು ಇರಲಾರರು. ಯಾವುದೋ ಒಂದು ಶ್ರೇಷ್ಟ, ಇನ್ನೊಂದು ಕನಿಷ್ಟ ಎಂದು ಹೇಳುವಂತೆಯೇ ಇಲ್ಲ. ಎಲ್ಲಾ ಪ್ರಾಕಾರಗಳಲ್ಲೂ ಮನಸ್ಸಿನೊಂದಿಗಿರುವ ಸಂಬಂಧವೇ ಮುಖ್ಯವಾಗುತ್ತದೆ.

ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುತ್ತದೆ. ಆ ಉದ್ದೇಶ ಸಾರ್ಥಕವಾಗಬೇಕಾದರೆ ಮನಸ್ಸು ಅದರಲ್ಲೇ ಲೀನವಾಗಬೇಕಾಗುತ್ತದೆ. ಚಿತ್ರಗೀತೆಯಲ್ಲಿ ಬಿಜಿ‌ಎಮ್ ಅಂದರೆ ಎರಡು ಚರಣಗಳ ನಡುವಿನ ಖಾಲಿ ಜಾಗದ ಅಥವಾ ಹಾಡಿನ ಹಿಂದೆ ಮುಂದೆ ಇರುವ ಸಂಗೀತ. ಅಂದರೆ ಸಾಮಾನ್ಯವಾಗಿ ಹೇಳುವ “ಗ್ಯಾಪ್ ಮ್ಯೂಸಿಕ್” ಹುಟ್ಟಿಕೊಂಡದ್ದು ಯಾಕೆ ಅಂದರೆ ಆ ಖಾಲಿಜಾಗದ ಸಂದರ್ಭದಲ್ಲೂ ದೃಶ್ಯ ಇದ್ದೇ ಇರುವುದರಿಂದ. ಆದರೆ ಅದನ್ನೇ ಭಾವ ಗೀತೆಗಳಲ್ಲಿ ಬಳಸುವುದು ಎಷ್ಟು ಸರಿ!!. ಯಕ್ಷಗಾನ ಆಟದಲ್ಲಿ ಹಾಡಿದಂತೆ, ತಾಳಮದ್ದಳೆ ಕೂಟದಲ್ಲಿ ಭಾಗವತರು ಹಾಡುವುದು ಸರಿಯಾದೀತೇ ? “ರಾಷ್ಟ್ರಗೀತೆ, ನಾಡಗೀತೆಗಳಿಗೆ ಬಿಜಿ‌ಎಮ್ ಸೇರಿಸುವುದಂತೂ ಶಿಖರಾಪರಾಧ” ಅಂತ ಹಿಂದೊಮ್ಮೆ ಸಾಹಿತಿ ಜಯಂತ ಕಾಯ್ಕಿಣಿ ಪ್ರಜಾವಾಣಿಯಲ್ಲಿ ಬರೆದಿದ್ರು. ಹೀಗೆ ಯಾವುದೇ ಪ್ರಾಕಾರದ ಸಂಗೀತದ ಉದ್ದೇಶ ಮೊದಲು ಅರ್ಥವಾದರೆ ಆ ಸಂಗೀತವನ್ನು ಅನುಭವಿಸುವುದಕ್ಕೂ ವಿಶ್ಲೇಷಿಸುವುದಕ್ಕೂ ಸಾಧ್ಯವಾಗುತ್ತದೆ. ಅಂದರೆ ಹಿಂದೆ ಮುಂದೆ ಗೊತ್ತಿಲ್ಲದೇ ಹೊಗಳುವುದು, ತೆಗಳುವುದು ಎರಡೂ ಅಪಕ್ವವಾದ ಮನಸ್ಥಿತಿ.

ನಾಟಕದ ಹಾಡುಗಳು ಅಂದರೆ ರಂಗಗೀತೆಗಳು ಬಹಳ ಹಿಂದಿನಿಂದಲೂ ರಸಿಕರ ಮನಸೂರೆಗೊಂಡವುಗಳೇ. ಹಿಂದೆಲ್ಲಾ ನಾಟಕ ಅಂದರೆ ಹಾಡು ಅನಿವಾರ್ಯವೇ ಆಗಿತ್ತಂತೆ. ನಟರಿಗೆ ಹಾಡಲು ತಿಳಿದಿರಬೇಕಾದ್ದು ಕಡ್ಡಾಯವಾಗಿತ್ತಂತೆ. ಎಷ್ಟೋ ಸಾರಿ ದೊಡ್ಡ ದೊಡ್ಡ ಗಾಯಕರು ನಟರಾದ ಸಂದರ್ಭದಲ್ಲಿ ಪ್ರೇಕ್ಷಕರು ಹೆಚ್ಚು ಹೆಚ್ಚು ಹಾಡನ್ನೇ ಬಯಸಲು ಶುರುಮಾಡಿ, ಕೆಲವೊಮ್ಮೆ ದೃಶ್ಯವೊಂದು ಸಂಗೀತ ಕಛೇರಿಯೇ ಆದ ಉದಾಹರಣೆಗಳಿವೆಯಂತೆ. ಖಳಪಾತ್ರವೊಂದು ಕರುಣಾಜನಕವಾಗಿ ಹಾಡುತ್ತಾ ಸಾಯುವ ದೃಶ್ಯ, ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಕಾರಣವಾಗಿ “ಒನ್ಸ್ ಮೋರ್”ನೊಂದಿಗೆ ಚಪ್ಪಾಳೆಯ ಸುರಿಮಳೆಯಾಗಿ, ಪಾತ್ರ ಎದ್ದು ನಿಂತು ಮತ್ತೊಮ್ಮೆ ಹಾಡಿ, ಪುನ ಸಾಯುವ ದೃಶ್ಯ… ಇಂದು ಅಭಾಸವೆನಿಸಿದರೂ ಆ ಕಾಲದಲ್ಲಿ ಅದನ್ನು ಯಾರೂ ಪ್ರಶ್ನೆ ಮಾಡದೇ ಒಪ್ಪಿಕೊಂಡಿದ್ದರೇನೋ!! ಇಂತಾದ್ದನ್ನೆಲ್ಲಾ ಟಿ.ಪಿ.ಕೈಲಾಸಂ ಅವರು ತನ್ನ ನಾಟಕಗಳಲ್ಲಿ ಲೇವಡಿ ಮಾಡಿದರೂ, ರಂಗಸಂಗೀತದ ಹೊಸ ದಾರಿ ಹುಡುಕಲು ಪ್ರಾಯಃ ಅವರಿಂದ ಸಾಧ್ಯವಾದಂತೆ ಕಂಡುಬರುವುದಿಲ್ಲ. ಅದಕ್ಕೆ ಬಿ.ವಿ.ಕಾರಂತರೇ ಬರಬೇಕಾಯ್ತು. ಅಂತಹ ನಾಟಕ, ಸಂಗೀತಗಳಿಂದಲೇ ಅನುಭವ ಪಡೆದ ಬಿ.ವಿ.ಕಾರಂತರು ರಂಗಗೀತೆಗಳಿಗೆ, ರಂಗಸಂಗೀತಕ್ಕೆ ಹೊಸ ಭಾಷ್ಯವನ್ನೇ ಬರೆದರು. ಬಿ.ವಿ.ಕಾರಂತರು ಸಂಯೋಜಿಸಿದ ರಂಗಗೀತೆಗಳನ್ನು ಕೇಳಿದ ಮೇಲೆಯೇ ವಿಚಾರವಂತರಿಗೂ – ಇಷ್ಟರವರೆಗೆ ತಪ್ಪಿದ್ದೆಲ್ಲಿ ಎನ್ನುವ ಅರಿವಾಯ್ತೋ ಏನೋ !

ಸಂಗೀತ ಹೀಗೆಯೇ ಇರಬೇಕೆಂದು ಹೇಳುವುದು ಕಷ್ಟ. ರಂಗಸಂಗೀತ ರೆಡಿಮೇಡ್ ಅಲ್ಲವೇ ಅಲ್ಲ, ರಂಗದಲ್ಲೇ ಹುಟ್ಟಿಕೊಳ್ಳುವಂತಾದ್ದು. ಕಾರಂತರು ಹೇಳ್ತಾರೆ ‘….ರಂಗಗೀತೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲ’ ಅಂತ- ಅಂದರೆ ಆಯಾ ದೃಶ್ಯಗಳ ಜೊತೆಗೆ ಮಾತ್ರ ಹಾಡಿಗೊಂದು ಸಂಬಂಧ. ರಂಗಗೀತೆ ಅಂದರೆ ಅದು ಬರೇ ಮಾಧುರ್ಯಕ್ಕಾಗಿ ಅಲ್ಲ, ಅದು ಮಾತಾಗ್ಬೇಕು ಅಂತ. ಆಧುನಿಕ ನಾಟಕಗಳ ಸಂದರ್ಭದಲ್ಲಿ ಯಾಕೋ ‘ಸಂಗೀತ’ ಅಂದರೆ ನಾಟಕದ ಹಾಡುಗಳಿಗೆ ಮಾತ್ರ ಅನ್ವಯಿಸಿ ಹೇಳುವ ಕ್ರಮವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ನಾಟಕ ಪ್ರದರ್ಶನಕ್ಕೆ ಸಂಬಂಧಪಟ್ಟಂತೆ ಸಂಗೀತ ಎಂದರೆ, ಹಾಡುಗಳು ಮಾತ್ರ ಅಲ್ಲ, ಧ್ವನಿಗಳೂ ಸಂಗೀತವೇ, ನಿಶ್ಶಬ್ಧವೂ ಸಂಗೀತವೇ, ವಾದ್ಯಗಳು ಮಾತ್ರವಲ್ಲ, ಅವಾದ್ಯಗಳೂ ಸಂಗೀತವೇ.

ನಾಟಕದ ಸಂಗೀತಕ್ಕೆ ಸಂಬಂಧಪಟ್ಟಂತೆ ನಾಟಕ ನಿರ್ದೇಶಕನಿಗೆ ಲಯ-ಶ್ರುತಿಗಳ ಅರಿವು ಸ್ವಲ್ಪವಾದರೂ ಇರಲೇಬೇಕಾಗುತ್ತದೆ. ಆತನಿಗೆ ತನ್ನ ನಾಟಕಕ್ಕೆ ಏನು ಬೇಕು ಏನು ಬೇಡ ಎನ್ನುವ ತಿಳುವಳಿಕೆ ಇರಬೇಕಾದ್ದು ಅನಿವಾರ್ಯ. ನಟರ ಚಲನೆಯಲ್ಲಿ, ಸಂಭಾಷಣೆಯಲ್ಲಿ ಲಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಿದ್ದರೆ ಮಾತ್ರ ಬೇಕಾದಲ್ಲಿ ಬಾಹ್ಯಸಂಗೀತವನ್ನು ಸೇರಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಸಂಗೀತವು ನಾಟಕಕ್ಕಿಂತ ಬೇರೆ ಉಳಿದು ಬಿಡುತ್ತದೆ. ‘ನಾಟಕದಲ್ಲಿ ಸಂಗೀತ’- ಅಂದ ಮಾತ್ರಕ್ಕೆ ಹಾಡು ಇತ್ಯಾದಿ ಬಾಹ್ಯ ಸಂಗೀತ ಇರಲೇಬೇಕೆಂಬ ಹಠ ಬೇಕಾಗಿಲ್ಲ. ಹಾಗಿದ್ದಾಗ್ಯೂ ಶ್ರುತಿ-ಲಯಗಳನ್ನು ನಿರ್ಲಕ್ಷಿಸಬಾರದು. ಹಾಗೆಂದು ಶ್ರುತಿ, ರಾಗ, ಲಯ, ತಾಳ ಎನ್ನುತ್ತಾ ಶಾಸ್ತ್ರೀಯ ಚೌಕಟ್ಟಿನಿಂದ ಹೊರಬರಲಾರದವರು ಹಾಡುವುದೂ, ಸಂಗೀತ ವಿನ್ಯಾಸ ಮಾಡುವುದು, ಸ್ವಲ್ಪ ಕಿರಿಕಿರಿ ಮತ್ತು ಅಪಾಯ ಕೂಡಾ.

ನಾಟಕ ಸ್ವಲ್ಪ ಕಳಪೆಯಾದರೆ ಸಂಗೀತದ ಮೂಲಕ ಮೇಲೆತ್ತಬಹುದು ಎನ್ನುವುದು ತಪ್ಪು ಕಲ್ಪನೆ. ನಾಟಕ ಮತ್ತು ರಂಗಸಂಗೀತವನ್ನು ಕೇವಲ ಒಂದು ‘ವಾರ್ಷಿಕೋತ್ಸವ’ದ ಮಟ್ಟದಲ್ಲಿಟ್ಟು ನೋಡಿದ್ದರಿಂದಲೇ ಇಂತಹ ಅಭಿಪ್ರಾಯ ಬೆಳೆದು ಬಂದಿರಬಹುದು. ಬಿ.ವಿ.ಕಾರಂತರು ಸಂಗೀತದ ಮೂಲಕ ನಾಟಕವನ್ನು ಎತ್ತರಿಸಿದರು ಅಂದರೆ ಅಲ್ಲಿ ಸಂಗೀತ ನಾಟಕಕ್ಕಿಂತ ಬೇರೆಯಾಗಿ ಉಳಿಯದೇ ನಾಟಕದ ಭಾಗವೇ ಆಗಿರ್ತಾ ಇತ್ತು. ಯಾಕೆಂದರೆ ಬಿ.ವಿ.ಕಾರಂತರಿಗೆ ನಾಟಕವೂ ಸಂಗೀತವೂ ಒಂದೇ. ರಂಗಸಂಗೀತದಲ್ಲಿ ಎಲ್ಲರೂ ಕಾರಂತರನ್ನೇ ಅನುಕರಿಸಬೇಕೆಂದು ಅರ್ಥವಲ್ಲ. ಆದರೆ ಆ ಮಟ್ಟದ ಕಲಾಕೃತಿಯನ್ನು ಸಾಧಿಸಬೇಕಿದ್ದರೆ ಬಿ.ವಿ.ಕಾರಂತರನ್ನು ಮತ್ತು ಬಿ.ವಿ.ಕಾರಂತರಂತೆ ಧ್ಯಾನಿಸಬೇಕಾದ ಅನಿವಾರ್ಯತೆ ಇದೆ.

Leave a Reply

*

code