ಅಂಕಣಗಳು

Subscribe


 

ಮೊದಲನೇ ಸಂಚಿಕೆಯ ಹೆಜ್ಜೆಯಲ್ಲಿ…

Posted On: Tuesday, November 4th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನೃತ್ಯವೋ ಬ್ರಹ್ಮ ನಟರಾಜನದು ಜಗಕೆಲ್ಲಾ

ಪ್ರತ್ಯೇಕ ಜೀವ ದಶೆಯವನಂಗಭಂಗಿ

ಸತ್ಯ ಸತ್ವ ಜ್ವಾಲೆ ವಿಶ್ವ ಮಾಯಾ ಲೀಲೆ

ಪ್ರತ್ಯಗಾತ್ಮನು ನೀನು ಮಂಕುತಿಮ್ಮ

– ಡಿ. ವಿ. ಜಿ.

ನರ್ತನವೇ ಬ್ರಹ್ಮ, ನರ್ತನವೇ ವಿಷ್ಣು, ನರ್ತನವೇ ಈಶ್ವರ. ನಟರಾಜನ ನರ್ತನವೇ ಜಗತ್ತು. ನರ್ತನವೇ ಆನಂದ. ನರ್ತನವೇ ಆರೋಗ್ಯ. ಸದಾನಂದಕ್ಕೂ ನರ್ತನ. ಚಿದಾನಂದಕ್ಕೂ ನರ್ತನ. ಭಗವಂತನ ಸಾಕ್ಷಾತ್ಕಾರಕ್ಕೂ ನರ್ತನ. ಇಂತಹಾ ನರ್ತನ ಲೋಕದಲ್ಲಿ ಪರಿಭ್ರಮಣ ಮಾಡುವ ಸಲುವಾಗಿ ಒಂದಷ್ಟು ಸಕಾರಾತ್ಮಕ ಮನಸಿಟ್ಟುಕೊಂಡು ನಿಮ್ಮೆದುರಿಗೆ ಅನಾವರಣಗೊಳ್ಳುತ್ತಿರುವುದೇ ನೂಪುರ ಭ್ರಮರಿ.

ಈ ಪುಟ್ಟ ಪತ್ರಿಕೆಯನ್ನು ಪ್ರಾರಂಭಿಸುವ ಹಿಂದಿನ ಕೆಲವೊಂದು ಉದ್ದೇಶಗಳನ್ನು ನಿಮಗೆ ತಿಳಿಸಲೇಬೇಕು. ಸುಮಾರು ಐದು ವರ್ಷಗಳಿಂದ ಪತ್ರಿಕೋದ್ಯಮ ಹಾಗೂ ಸುಮಾರು ೧೪ ವರ್ಷಗಳಿಂದ ಭರತನಾಟ್ಯ ವಿದ್ಯಾರ್ಥಿನಿಯಾಗಿರುವ ನನಗೆ ಪ್ರತೀಸಲ ಬರೆಯಬೇಕಾದಾಗಲೂ ಕಾಣುತ್ತಿದ್ದದ್ದು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆ; ಜೊತೆಗೆ ಇತರ ಪತ್ರಿಕೆಗಳಲ್ಲೂ ನೃತ್ಯಮಾಧ್ಯಮದ ಕುರಿತಂತೆ ಸಂವಾದ, ಚರ್ಚೆಗಳು, ವಸ್ತುನಿಷ್ಟ ವಿಮರ್ಶೆಗಳು ವಿರಳವಾಗುತ್ತಿದ್ದದ್ದು. ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳು ಇವೆಯಾದರೂ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಇತ್ತೀಚೆಗೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸಿದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಪತ್ರಿಕೆ ಬೇಕೆನ್ನಿಸಿದ್ದು ಹೌದು. ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ನನಗೂ ಕರ್ತವ್ಯವಿದೆ ಎಂದೆನಿಸಿತು. ಹಾಗಾಗಿ ಪತ್ರಿಕೋದ್ಯಮದ ಆಶಯಗಳನ್ನು ಜೊತೆಗಿಟ್ಟುಕೊಂಡು, ಸಾಂಸ್ಕೃತಿಕ ಅಡಿಪಾಯದಲ್ಲಿ ನೃತ್ಯದ ವಿವಿಧ ಆಯಾಮಗಳತ್ತ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಎಂಬ ನಂಬುಗೆಯಲ್ಲಿ ಕಣ್ಬಿಡುತ್ತಿರುವ ಹಸುಗೂಸು ನೂಪುರಭ್ರಮರಿ.

ಪತ್ರಿಕೆ ಹುಟ್ಟುಹಾಕುವುದೇನೋ ಸುಲಭ. ಆದರೆ ಅದರ ಸಮರ್ಥ ರೂಪಿಸುವಿಕೆ, ಬೆಳೆಸುವಿಕೆ ಕಷ್ಟಸಾಧ್ಯ. ಹಲವಾರು ಸವಾಲುಗಳನ್ನು ಬೇಡುವ ರಂಗವಿದು. ಸಾಂಸ್ಕೃತಿಕ ರಂಗದ ಬಗ್ಗೆ ಅದರಲ್ಲೂ ನೃತ್ಯದ ಕುರಿತಾಗಿ ಸೀಮಿತ ಅಭಿಪ್ರಾಯಗಳು, ಸೀಮಿತ ಓದುಗರು, ಓದುವ ಮತ್ತು ಬರೆಯುವ ನಿಟ್ಟಿನಲ್ಲೂ ಸೀಮಿತ ಸಾಧ್ಯತೆಗಳಿವೆ. ಆದರೆ ಪತ್ರಿಕೆಯನ್ನು ಕೇವಲ ನೃತ್ಯ-ನಾಟ್ಯರಂಗದ ಕಲಾವಿದರಿಗೆ, ಗುರುಗಳಿಗೆ ಸೀಮಿತವಾಗಿರಿಸದೆ ಸಾಮಾನ್ಯ ವೀಕ್ಷಕ, ಓದುಗರಿಗೂ ಮುಟ್ಟಬೇಕು, ಸದಭಿರುಚಿಯ ಎಲ್ಲರಿಗೂ ತಲುಪುವಂತಾಗಬೇಕು ಎಂಬ ಆಶಯ ನಮ್ಮದು. ನೃತ್ಯದ ಕುರಿತಾಗಿ ಚಿಂತನೆಗಳು ಎಲ್ಲಾ ಕಡೆಯಿಂದಲೂ ಹರಿದು ಬಂದು ನೃತ್ಯದ ಆಯಾಮಗಳತ್ತ ಜಾಗೃತಿ, ಅರಿವು ಮೂಡಬೇಕೆಂಬ ಹಂಬಲ ನಮ್ಮದು . ‘ಸೀಮಿತ ವರ್ಗಕ್ಕೆ ಮಾತ್ರ ಎಂಬ ಅಪವಾದವನ್ನು ಬದಿಗಿರಿಸಿ ನರ್ತನ ಜಗತ್ತಿನ ಹಲವು ಒಳತೋಟಿಗಳನ್ನು ಅರ್ಥವಾಗುವಂತೆ ವಿವರಿಸುವ ಪ್ರಯತ್ನ ಜೊತೆಗಿನದು. ಪ್ರಾಂತೀಯ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಭರತನಾಟ್ಯಕ್ಕೆ ಹೆಚ್ಚಿನ ಅವಕಾಶ ಕೊಡುವ ಉದ್ದೇಶವಿದೆಯಾದರೂ, ಇತರ ನೃತ್ಯಪ್ರಕಾರಗಳ ಕುರಿತು ಸಾದ್ಯಂತವಾಗಿ ವಿಚಾರ ವಿಮರ್ಶೆಗಳನ್ನು ಹಂಚಿಕೊಳ್ಳುವ ಕನಸಿದೆ. ಪತ್ರಿಕೆಯ ಪ್ರೋತ್ಸಾಹಕರಾಗಿ ಗೆಳೆಯರ ಬಳಗವಿದ್ದರೂ ಏಕಸಂಪಾದಕತ್ವ ಮತ್ತು ಪ್ರಕಾಶನದಲ್ಲಿ ಮುನ್ನಡೆಯಬೇಕಾಗಿದೆ. ತಾವೆಲ್ಲರೂ ನೂಪುರ ಭ್ರಮರಿ‘ಯ ಜೊತೆಗಿರುತ್ತೀರಿ ಎಂಬ ನಂಬಿಕೆಯನ್ನು ಬಗಲಿಗಿಟ್ಟು ಮುನ್ನಡೆಯುತ್ತೇವೆ..

ಪುಟಾಣಿ ಪತ್ರಿಕೆಯಾದರೂ, ಇದು ಮೌಲ್ಯಯುತವಾದುದನ್ನಷ್ಟೇ ಹಂಚಿಕೊಳ್ಳುತ್ತದೆ ಎಂಬ ಆಶ್ವಾಸನೆಯನ್ನು ಮೊದಲಿಗೆ ನೀಡಲಿಚ್ಚಿಸುತ್ತೇವೆ. ಜೊತೆಗೆ ಖಾಸಗಿ ಹಂಚಿಕೆಯ ದ್ವಿಮಾಸಿಕವಾಗಿದ್ದು ಯಾವುದೇ ಲಾಭದ ಉದ್ದೇಶವೂ ಇದರ ಹಿಂದಿಲ್ಲ ಎಂಬುದನ್ನು ಸ್ವಷ್ಟಪಡಿಸಲು ಇಚ್ಛಿಸುತ್ತೇವೆ. ಇದು ನಮ್ಮನ್ನು ನಾವು ಕಂಡುಕೊಳ್ಳುವ, ಅರಿಯುವ, ಅರ್ಥೈಸುವ, ಅರಿವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಕ್ತವೇದಿಕೆ ರೂಪುಗೊಳ್ಳಬೇಕೆಂಬ ಸಣ್ಣ ಮಟ್ಟಿನ ಸ್ವಾರ್ಥ.

ಪತ್ರಿಕೋದ್ಯಮ ಎನ್ನುವ ಕೃಷಿಯಲ್ಲಿ ನೂಪುರ ಭ್ರಮರಿ ಇನ್ನೂ ಚಿಗುರೊಡೆಯುವ ಸಸಿ. ಅದನ್ನು ಭವಿಷ್ಯದ ಹೆಮ್ಮರವಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ನೃತ್ಯದ ಕುರಿತಾಗಿ ಬರುವ ಕ್ಲೀಷೆಯೆನಿಸಿಕೊಂಡ ಮಾಮೂಲಿ ವಿಮರ್ಶೆಗಳ ಸಾಧ್ಯತೆಯನ್ನು ಆದಷ್ಟೂ ಕಡಿಮೆ ಮಾಡುವುದು ಪತ್ರಿಕೆಯ ಆಶಯಗಳಲ್ಲೊಂದು. ಹಾಗಂತ ಆವರಣವಿಲ್ಲವೆಂದಲ್ಲ. ಆವರಣವಿಲ್ಲದ ಕೃಷಿ ಕಾಡಾಗಿ, ಮುಳ್ಳು ಕಂಟಿಗಳ ಸ್ಥಾನವಾಗಿ ಹೋಗುತ್ತದೆ. ಆದರೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಪರಿಪಾಠ ಮುಂದುವರಿಯದಂತೆ ನೋಡಿಕೊಳ್ಳಬೇಕೆಂಬ ಆಸೆಯಿದೆ.

ಪತ್ರಿಕೆಯನ್ನು ಪ್ರಾರಂಭಿಸುವಲ್ಲಿ ವಿಮರ್ಶನಾಶೀಲ ಚರ್ಚೆಗಳನ್ನು ಒದಗಿಸಿದ ತಂದೆತಾಯಿಯರಿಗೂ, ಎಲ್ಲಾ ಗುರುಹಿರಿಯರಿಗೂ, ಗೆಳೆಯರಾದ ವಿಷ್ಣುಪ್ರಸಾದ್ ನಿಡ್ಡಾಜೆ, ಚೈತ್ರರಶ್ಮಿಯ ಸಂಪಾದಕ ರಾಮಚಂದ್ರ ಹೆಗಡೆ, ರಾಧಿಕಾ ವಿಟ್ಲ, ಶ್ರೀ ಲಕ್ಷ್ಮಿ ಎಂ. ಭಟ್, ಪರಶುರಾಮ ಕಾಮತ್‌ರಿಗೆ ಮನತುಂಬಿದ ಕೃತಜ್ಞತೆಗಳು.

ನಿಮ್ಮ ಸಲಹೆ, ಸಹಾಯ, ಸಹಕಾರ ನೂಪುರ ಭ್ರಮರಿಗೆ ಇರುತ್ತದೆ. ತಾನೇ?

ಪ್ರೀತಿಯಿಂದ ನಿಮ್ಮ

ಮನೋರಮಾ ಬಿ. ಎನ್

Leave a Reply

*

code