ಅಂಕಣಗಳು

Subscribe


 

ಅಭಿನಯಭಾರತೀ- ಆಕ್ಷೇಪಸಾಕ್ಷಿಕೆ

Posted On: Friday, July 31st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 74ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ- ನಾಯಕನೆಡೆಗೆ ಹಲವು ಆಕ್ಷೇಪಗಳ ಮೂಟೆಗಳನ್ನು ಹೊತ್ತಿರುವ ನಾಯಿಕೆಯನ್ನಾಲಿಸಲು ಆಕೆಯ ಸಖಿಯರು ಬಳಿಯಲ್ಲಿದ್ದಾರೆ. ತಾನು ಅವನಲ್ಲಿ ವೃಥಾ ಕೋಪಿಸಿಕೊಂಡಿದ್ದೇನೆನ್ನುವ ಆತನ ಚರ್ಯೆಗಳನ್ನೇ ಮುಂದುಮಾಡಿ ಆತನ ನಡೆನುಡಿಗಳು ಸರಿಯೇ ಎಂಬ ವಾದ ಹೂಡುತ್ತಿದ್ದಾಳೆ.  ಸವತಿ/ಪರಸ್ತ್ರೀ ಯೆಡೆಗೆ ತಿರುಗುವ ತನ್ನ ನಲ್ಲನು ಅಪರಾಧಿಯಾಗಲಿಚ್ಛಿಸದೆ ನಡೆದುಕೊಂಡ ರೀತಿಯೆಲ್ಲವನ್ನೂ ಆಕ್ಷೇಪಿಸಿದ್ದಾಳೆ. ಇಷ್ಟೆಲ್ಲದಕ್ಕೂ ತಾನೇ ಸಾಕ್ಷಿಯಾದರೂ ಅವುಗಳನ್ನು ಮರೆಸಿ ನಟಿಸುವ ಅವನ ಕುಟಿಲತೆಯನ್ನು ಗೆಳತಿಯರೊಂದಿಗೆ ಬಟಾಬಯಲು ಮಾಡುತ್ತಾ ಖಂಡಿಸಿದ್ದಾಳೆ.   

ಆಕ್ಷೇಪಸಾಕ್ಷಿಕೆ

ರಾಗ : ; ತಾಳ : ತ್ರ್ಯಶ್ರಗತಿ ಆದಿ

ಕೇಳಿರೇ ! ಕೆಳದಿಯರೇ! ಆತನನ್ನಿದೋ!

ಹೇಳಿರೇ! ಅವನು ಗೆಯ್ದ ಪಾತಕವನಿದೋ !  ||  ||

 

ಆತನಲ್ಲಿ ನಾನು ವೃಥಾ ಖಾತಿಗೊಂಡೆನೆಂಬನಲ್ಲ!

ರೀತಿ-ನೀತಿಯಿರ್ಪುದೇನೆ? ಮಾತ ನಿಲಿಪನೇ ? || ಅ.ಪ ||

 

ಆಕೆಯಲ್ಲಿ ಹೋಗುವಾಗ ನನ್ನ ದಾಸಿ ಕಂಡಳೆಂದು

ಜೋಕೆ! ಎಂದು ಲಂಚವಿತ್ತದ್ದಾರೊ ನುಡಿಸಿರೇ!

ಷೋಕಿನಿಂದ ಪೇಟೆಯಲ್ಲಿ ಆಕೆಯೊಡನೆ ತಿರುಗುವಾಗ

ನಾಕು ಮಂದಿ ನೋಳ್ಪರೆಂದು ಕೊಡೆಯ ಪಿಡಿದನೇ ! || ೧||

 

ಅವಳ ಮನೆಯ ಬೀದಿಯಲ್ಲಿ ಸಾಗಿ ಬರುವ ಎನ್ನ ಕಂಡು

ಜವದಿ ಬಾಗಿಲಾಚೆ ನಿಂತು ಮರೆಸಿಕೊಂಡನಾರೇ ?

ಕವಿಯಲಿರಳು, ಕಳ್ಳಗುರುತು ತಳೆದು ಬಂದು ಎನ್ನ ಮನೆಗೆ

ನೆವಗಳನ್ನು ನುಡಿದು ನಡೆದ ಗಡುಸದಾರದೇ ? ||೨ ||

 

ಸರಸವಾಗಿ ಅವಳ ಚಿತ್ರ ಬರೆದು, ಬಳಿಕ ನಾನು ಬರಲು

ಭರದಿ ಮರೆಸಲದನು ನಟಿಪ ಚದುರನಾರೇ?

ಪರವಶತೆಯೊಳೆನ್ನ ಸೇರಿ ಅವಳ ಹೆಸರ ಜಾರಿ ನುಡಿದು

ಸರಸರನೆನ್ನೊಡನೆ ಬೇಡಿ ಓಡಿದ ಖಳನಾವನೇ ? ||೩ ||

Leave a Reply

*

code