ಅಂಕಣಗಳು

Subscribe


 

ಅಭಿನಯಭಾರತೀ- ಅಸುಖಸಖಿ

Posted On: Tuesday, October 13th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 91ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ತನ್ನ ಭವಿತವ್ಯದ ಸೌಖ್ಯಕ್ಕೆ ಸಖಿಯರಿಂದ ಅನುಕೂಲವಾಗುತ್ತದೆಯೆಂದು ಎಣಿಸಿದ ನಾಯಿಕೆಗೆ ನಿರಾಸೆಯಾಗಿದೆ. ನಾಯಕನ ಬಗೆಗೆ ಇದ್ದ ನಿರೀಕ್ಷೆಗಳೆಲ್ಲವೂ ಸುಳ್ಳಾಗಿದೆ. ತನ್ನ ಸಖಿಯರ ಬಗೆಗಿದ್ದ ವಿಶ್ವಾಸವೇ ಅವಳ ಬಾಳನ್ನು ಕೂಪಕ್ಕೆ ತಳ್ಳಿದೆಯೆಂಬ ಸಂತಾಪವೇ ಆಕೆಯ ಮಾತುಗಳನ್ನು ಕಹಿಯಾಗಿಸಿದೆ. ಮೂರ್ಖ ಸಖಿಯರು ಕಪಟಿ ನಾಯಕನ ಸತ್ಯವನ್ನು ಕಂಡರಿಸದೆ ಅರ್ಥೈಸಿಕೊಂಡ ಬಗೆಯೇ ಬೇರೆಯಾದ ಕಾರಣ, ಆ ಕೃತ್ಯವೇ ನಾಯಿಕೆಯ ಯೌವನಕ್ಕೇ ಮುಳ್ಳಾಗಿ ಪರಿಣಮಿಸಿದೆಯೆಂಬ ನೋವು ಮಡುಗಟ್ಟಿದೆ. ಶೃಂಗಾರ ನಾಯಿಕೆಯ ಭಾವವೈಫಲ್ಯಕ್ಕೆ ಸಖಿ- ದೂತೀಯರ ಸ್ವಭಾವ, ವರ್ತನೆ ಹೇಗೆಲ್ಲಾ ಕಾರಣವಾಗಬಹುದೆಂಬ ಹಿನ್ನಲೆಯನ್ನು ಅರಿಯುವಲ್ಲಿ ಈ ಪದ್ಯ ಪೋಷಕವಾಗಿದೆ.

ಈ ಪದ್ಯವನ್ನು ಸಿಸಿಆರ್ಟಿ ಸೀನಿಯರ್ ಫೆಲೋಶಿಫ್ ಪ್ರಯುಕ್ತ; ಶಾಲಿನಿವಿಠಲ್ ಅವರ ನೃತ್ಯಸಂಶೋಧನೆ -ಪಂಡರೀಕ ವಿಠಲನ ದೂತೀಕರ್ಮಪ್ರಕಾಶದ ಪುನರ್ ನಿರ್ಮಾಣದ ಹಿನ್ನೆಲೆಯಲ್ಲಿ ಏಪ್ರಿಲ್ ೨೦೧೯ರಂದು ಬೆಂಗಳೂರಿನ ಕಲಾಗೌರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಶೋಭಾ ಶಶಿಕುಮಾರ್ ಅವರ ಶಿಷ್ಯಂದಿರಾದ ಮಧುಲಿಕಾ ಶ್ರೀವತ್ಸ, ಮೇಘಾ ಶ್ರೀನಿವಾಸ್, ಸಂಗೀತಾ ಅಯ್ಯರ್, ಅನುರಾಧಾ ಲೋಕೇಶ್ ಅವರು ’ಸ್ಖಲಿತ’ ಎಂಬ ದೂತೀ ಪ್ರಕಾರಕ್ಕೆ ಈ ರಚನೆಯನ್ನು ಅನ್ವಯಿಸಿ ನರ್ತಿಸಿದ್ದರು. ಅದರ ವಿಡಿಯೋ ಸರಣಿ ಇಲ್ಲಿದೆ. https://m.facebook.com/story.php?story_fbid=1233925860096535&id=139783552784864 

ಅಸುಖಸಖಿ

ರಾಗ: ಪೂರ್ವಿಕಲ್ಯಾಣಿ ; ತಾಳ: ಖಂಡ ಛಾಪು

ನೀವನುಭವಿಗಳೆಂದು ನಿಮ್ಮ ನಚ್ಚುತಲಿಂದು

ಸಾವನೇ ಸವಿದೆನಯ್ಯೋ ! ಸಖಿಯರೇ !

ಬೇವನೇ ಬೆಳೆದೆನಯ್ಯೋ ||ಪ||

 

ಮಾರಕಾರಣದಲ್ಲಿ ಮೋಹಚಾರಣದಲ್ಲಿ

ನೀರೆಯರು ನೀವೆಲ್ಲ ನೆಗಳ್ವರೆಂದೆಣಿಸಿ |

ಸೂರೆಗೆಯ್ದಾತನೊಳ್ ಸಾರಯೌವನವನೇ

ಜಾರಿದೆಂ ನಾನಿಂದು ಜಗದ ಕಣ್ಣೊಳ್ || ೧||

 

ನೂರು ಹೂಗಳ ತುಂಬಿ ಮೇರೆ ಮೀರಿ ವಿಳಂಬಿ

ಜಾರಿಕೊಳ್ಳುವನಾತನೆಂದರಿಯದೆ |

ಸೂರೆಗೊಂಡಿರೆ ನಾನು ನೀರೆತನವನೆ ನೀವು

ತೋರದಾದಿರೆ ಅಂದು ತಥ್ಯವನ್ನು ||೨ ||

 

ಹತ್ತು ಜನರೆದುರಿನೊಳ್ ಮುತ್ತಿ ನೀವೆಲ್ಲರೂ

ಕುತ್ತನಿತ್ತವನನ್ನು ನಿಲಿಸಿಕೊಂಡು |

ತತ್ತರಿಸುವಂತವನು ಕೆತ್ತಲಾರದೆ ಹೋದಿ-

-ರೆತ್ತೆತ್ತಲೋ ಅವನ ಕಪಟವನ್ನು || ೩||

 

Leave a Reply

*

code