ಅಂಕಣಗಳು

Subscribe


 

ಔದಾರ್ಯದಗ್ಧೆ

Posted On: Tuesday, August 4th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 76ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನ ಜಾರತನದ ನಡವಳಿಕೆಯ ಬಗ್ಗೆ ಅನ್ಯಮನಸ್ಕತೆ ಇದ್ದರೂ ಸಾವರಿಸಿ, ಸೈರಿಸಿಕೊಂಡು ಹೋಗುತ್ತಿದ್ದ ನಾಯಿಕೆಯು ಆತನು ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆಂದರಿತೂ,  ತನ್ನ ಕಾಂತನ ಉತ್ತರವನ್ನು ತಿಳಿಯಲು ಕಳುಹಿಸಿದ ಸಖಿಯಲ್ಲಿ ಕಾತರಳಾಗಿ ಪ್ರಶ್ನಿಸುತ್ತಿದ್ದಾಳೆ. ಅವನಿಗೆ ಅನುರೂಪವಾಗಿ ನಡೆದುಕೊಂಡರೂ, ತನ್ನನ್ನು ಮತ್ತೊಬ್ಬಳಲ್ಲಿ ದೂರಿಕೊಂಡಿದ್ದು ತಿಳಿದು ಅನ್ಯಮನಸ್ಕಳಾಗಿದ್ದಾಳೆ. ಸವತಿ ತನ್ನ ಮೇಲೆ ದ್ವೇಷ ಕಾರುತ್ತಿದ್ದಾಳೆಂದು ಅವನಿಗೆ ತಿಳಿಯದೇ ಎಂದು ಪ್ರಶ್ನಿಸುವ ಈ ದಗ್ಧೆಯ ಔದಾರ್ಯವೇ ಆಕೆಯನ್ನು ನುಂಗುತ್ತಿದೆ. ಆತನ ಉಪೇಕ್ಷೆಗೆ ಕಾರಣ ತಿಳಿಯದಂತಾಗಿದೆ. ಹಾಗೆಂದೇ ತನ್ನೊಳಗನ್ನೂ ಪ್ರಶ್ನಿಸಿಕೊಳ್ಳುವಂತಿದೆ ಈ ವಿಪ್ರಲಬ್ಧೆಯ ಮಾತು.

ಔದಾರ್ಯದಗ್ಧೆ

ರಾಗ: ಆರಭಿ ; ತಾಳ : ಆದಿ

ಏನೆಂದೆನೇ ? – ಅವನೇನೆಂದನೇ ?

ಆ ನನ್ನ ಕಾಂತನನೇನೆಂದೆನೇ ? || ಪ ||

 

ನೀನರಿಯೆಯಾ ಎನ್ನ ಪರಿಪೂರ್ಣನಿಷ್ಠೆಯ-

ನಾ ನಾಥನೇತಕೆ ತಾನಿಂತುಗೆಯ್ದನೇ ? || ಅ.ಪ ||

 

ನೂರೆಂಟು ಸವತಿಯರನ್ನವನು ತಂದನೆಂ-

ದಾರೊಂದಿಗಾದರೂ ನಾನೆಂದೆನೇ ?

ನೂರಾರು ಕನ್ನೆಯರಾನಂದಕರನೆಂ-

ದಾರಲ್ಲಿ ದೂರಿದೆ ನಾಂ ಸುಮ್ಮನೆ ? ||೧ ||

 

ಬಂದಾಗಲಾದೇವನಿಚ್ಛೆಯು ಬಂದಾಗ,

ಕುಂದಿಲ್ಲದಂತೆಲ್ಲ ಕೊಡಲಿಲ್ಲವೇ ?

ಸಂದರ್ಭವರಿಯದೆ ಎಂದಾದರೂ ನಾನು

ಅಂದಗೆಡಿಸಿದೆನೇ ? ಅವನೊಲವ ? ||೨ ||

 

ಇಂತಿದ್ದರೂ ನಾನು, ಅವನೇಕೆ ಆಕೆಯೊಳ್

ಚಿಂತಿಸದಂತೆನ್ನ ಪರಿಪರಿದೂರಿದ ?

ಅವನರಿಯನೇ ಆಕೆ ಎನ್ನನ್ನು ಎಗತಾಳಿ-

ಜವರಾಯಗೀಯದೆ ಬಿಡಳೆಂದು; ಖಳೆ ಕಾಳಿ ! || ೩||

Leave a Reply

*

code