ಅಂಕಣಗಳು

Subscribe


 

ಶಿವದಾಂಪತ್ಯ

Posted On: Friday, December 25th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 133ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ, ನಾಯಿಕೆ ಮತ್ತು ನಾಯಕರೀರ್ವರಿಗೂ ಅನ್ವಯವಾಗುವ ಮೂರು ರಚನೆಗಳಿವೆ. ಇವು ದಾಂಪತ್ಯದ ಮೂರು ಪ್ರಧಾನ ನೆಲೆಗಳನ್ನೇ ಪ್ರತಿಪಾದಿಸಿವೆ. ಇವುಗಳೊಂದಿಗೆ ನಾಯಿಕಾ-ನಾಯಕ ಪದ್ಯಗಳ ಕನ್ನಡ ಅವತರಣಿಕೆ ಮುಕ್ತಾಯಗೊಳ್ಳುತ್ತಿದೆ. 

ಇಂದಿನ ದಾಂಪತ್ಯಗೀತ:  ದಾಂಪತ್ಯದ ಸೌಖ್ಯ ಸಾಮರಸ್ವ, ಸೌಹಾರ್ದ, ಸಮನ್ವಯವನ್ನು ಸಾರುವ ಆದರ್ಶಗೀತವದು. ನೂರೆಂಟು ಕಲಹಗಳ ನಂತರವೂ ಕಲೆಯುವ ಮನಸ್ಸುಗಳ ಮಧುರ ಹಾರ್ದ ಬಂಧದ ನೋಟವಿದು.ಅದನ್ನೇ ಪರಸ್ಪರ ಪಡೆನುಡಿಯುತ್ತಿರುವ ಸತಿ-ಪತಿಯರು ಇಲ್ಲಿ ಕಾಂತಾವಿಧೇಯ- ಸ್ವಾಧೀನಪತಿಕಾ ನಾಯಕ-ನಾಯಿಕೆಯರಿಗೆ ಅನುರೂಪವಾದವರು. ಉತ್ತಮ ಸ್ವೀಯೆಯೂ, ಉತ್ತಮ ಅನುಕೂಲನೂ ಆದ ಗಂಡು ಹೆಣ್ಣಿನ ಸಾದೃಶ್ಯ ಕಲ್ಪನೆಯಿದು.  ತಮ್ಮ ಜೀವನದ ಸಿಂಹಾವಲೋಕನದಲ್ಲಿ ತಪು-ಒಪ್ಪುಗಳ ಮನೋಮಂಥನ ಇಲ್ಲಿ ಧನ್ಯತೆಯ  ಭಾಗಳನ್ನೆಬ್ಬಿಸಿದೆ. 

ಈ ಪದ್ಯದೊಂದಿಗೆ ಅಭಿನಯಭಾರತಿಯ ಎಲ್ಲಾ ನಾಯಿಕೆ ನಾಯಕರ ಕನ್ನಡ ಗೀತೆಗಳು ಮುಕ್ತಾಯಗೊಳ್ಳುತ್ತಿದೆ. ಇನ್ನುಳಿದಂತೆ ಸಂಸ್ಕೃತ ಗೀತಗಳನ್ನು ಮುಂದಿನ ಸಂಚಿಕೆ/ ಸರಣಿಯಲ್ಲಿ ಹಂಚಿಕೊಳ್ಳಲಾಗುವುದು. 

ಶಿವದಾಂಪತ್ಯ

ರಾಗ: ಜಂಜೋಟಿ  ; ತಾಳ: ಮಿಶ್ರ ಛಾಪು

ನಿನ್ನೆಗಳ ನೂರೆಂಟು ಪುಡಿನುಡಿಯಿಂದು ನಮ್ಮಯ ಪಾಲಿಗೆ

ಹೊನ್ನುಗನಸಿನ ಕಾವ್ಯವಾಗಿದೆ; ಅದನೆ ಹಾಡಿದೆ ನಾಲಿಗೆ     ||ಪ||

 

ಗೆಜ್ಜೆಗಳನೇ ಪೋಣಿಸುತ ನಾವಿಷ್ಟು ದಿನಗಳ ಕಳೆದೆವು

ಹೆಜ್ಜೆಗಳ ಹಾಕುವುದ ಕಲಿಯದೆ ಬಯಲ ರಂಗದೆ ಸುಳಿದೆವು! ||ಅ.ಪ||

 

ಪ್ರೀತಿಗಣಿತದ ಕಳೆದು ಕೂಡುವ ಬೆಳಕು ಮೂಡಿಹುದೀಗಲೇ

ಸೋತುಗೆಲ್ಲುವ ಬಾಳ ಬಣ್ಣದ ಚೆಲುವು ನೋಡಿಹುದೀಗಲೇ || ೧||

 

ಒಲವುಬಳ್ಳಿಯ ಚೆಲುವುಹೂಗಳು ಬಾನ ತಾರೆಗಳಾಗಿವೆ

ನೆಲದವರೆಗೂ ಅವುಗಳಕ್ಕರೆ ಬೆಳಕ ಬೆರಳ್ಗಳು ತಾಗಿವೆ ||೨ ||

 

ಹಮ್ಮು ಬಿಮ್ಮಿನ ಹಾವಸೆಯು ದೂರಾಗಿ ಜೀವನ ತಿಳಿದಿದೆ

ನೆಮ್ಮದಿಯು ಬಿಂಬಿಸಿದೆ ಕಂಗಳ ಕೋಡಿಯಲಿ; ಕೆಳೆಯುಳಿದಿದೆ || ೩||

Leave a Reply

*

code