ಅಂಕಣಗಳು

Subscribe


 

ಹಿತಚಿಂತನೆ

Posted On: Wednesday, November 18th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 107ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ನಾಯಿಕಾ-ನಾಯಕಾವಸ್ಥೆಗೆ ಪೂರಕವೂ, ಪ್ರೇರಕವೂ, ಪೋಷಕವೂ ಆದ ಸಖ್ಯಾಭಿವ್ಯಕ್ತಿಯ ಕೆಲವು ಸಂಚಿಕೆಗಳಲ್ಲಿ ಇದೂ ಒಂದು. ಈ ಸಂಚಿಕೆಗಳಲ್ಲಿ ಪ್ರಧಾನವಾಗಿ ಸಖಿ/ಗೆಳತಿ/ನೆರೆಮನೆಯಾಕೆ/ಹಿತಚಿಂತಕಿ/ದಾಸಿ ಹೀಗೆ ಅನೇಕರನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಈಕೆಯ ಪಾತ್ರ, ಲಕ್ಷಣದ ಕುರಿತಾಗಿ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು, ಪಂಡರೀಕ ವಿಠಲನ ದೂತೀಕರ್ಮಪ್ರಕಾಶದ ವರೆಗೂ ಸಖಿ/ದೂತಿಯರ ಅನೇಕ ಪ್ರಸ್ತಾಪವಿದೆ. ಜಯದೇವನ ಗೀತಗೋವಿಂದದಲ್ಲಿ ಸಖಿ ಗುರುಸಮಾನಳೆಂಬ ತತ್ತ್ವಾರ್ಥವನ್ನೂ ಕಾಣಬಹುದಾಗಿದೆ. ನಾಯಿಕೆ-ನಾಯಕರ ಸಮಾಗಮ ಮತ್ತು ಬೇರ್ಪಡುವಿಕೆಯ ಹಿನ್ನೆಲೆಯಲ್ಲಿ ಇವಳ ಪಾತ್ರವಿದ್ದು; ಇವಳ ಮಾತುಗಳೇ  ಪದ್ಯಗಳ ರೂಪದಲ್ಲಿ ಹರಿದುಬಂದಿದೆ. 

ಇಂದಿನ ಸಖಿ : ಕುಟಿಲ ಮನೋವೃತ್ತಿಯ ನಾಯಕನ ಬಲೆಗೆ ಬಿದ್ದು, ಆತನಿಂದ ವಂಚಿತಳಾದ ವಿಪ್ರಲಬ್ಧಾ ನಾಯಿಕೆಯ ಪರಿಸ್ಥಿತಿಯನ್ನು ಗಮನಿಸಿ ತಾನು ಹಿಂದೊಮ್ಮೆ ಹೇಳಿದ ಬುದ್ಧಿವಾದದ ನುಡಿಗಳನ್ನು ಮತ್ತೊಮ್ಮೆ ನೆನಪಿಸಿಕೊಡುತ್ತಾ ಆಕೆಯ ಸ್ಥಿತಿಗೆ ಪರಿತಪಿಸಿದ್ದಾಳೆ ಈ ಸಖಿ.  ಇಲ್ಲಿ ನೂರು ಗುಡಿಯ ಪೂಜಾರಿ ಎನ್ನುವ ಅನ್ವಯವು ನಾಯಕ ಹಲವು ಹೆಣ್ಣುಗಳ ಸರದಾರ ಎಂಬರ್ಥದಲ್ಲಿ ನೃತ್ಯಕ್ಕೆ ಸೂಕ್ತವಾಗಿ ಮೂಡಿಬಂದಿದೆ. ತಾನಾಡಿದ ಬುದ್ದಿಮಾತುಗಳನ್ನು ಕೇಳದೆ ಹಿತವೆಣ್ಣಿಸಿದ ಸಖಿಯರನ್ನು, ದೊರಕಿದ ಸಾಕ್ಷ್ಯಗಳನ್ನು ಚಿಂತನೆಗೆ ಅವಕಾಶ ಕೊಡದಂತೆ ದೂರ ತಳ್ಳಿದ ಫಲವಾಗಿ ನಾಯಿಕೆಗೆ ಇಂದಿನ ಸ್ಥಿತಿ ಒದಗಿದೆಯೆಂದು ಹಲವು ನಿದರ್ಶನಗಳನ್ನು ಹೇಳಿ ಸಂಕಟ, ಕೋಪದಿಂದ ಜರಿದಿದ್ದಾಳೆ ಈ ಹಿತಚಿಂತಕಿ.  

ಹಿತಚಿಂತನೆ

ರಾಗ : ಮೋಹನಕಲ್ಯಾಣಿ ; ತಾಳ : ಆದಿ

ಆ ನೂರು ಗುಡಿಯ ಪೂಜಾರಿಯ ಮೋಜಿಗೆ 

ನೀನೇಗಬೇಡೆಂದು ನುಡಿದೆನಲ್ತೆ     ||  ||

 

ಅಂದು ಕೇಳದ ನೀನು ಇಂದು ನೊಂದಳುವುದು

ಸಂದ ಪ್ರಾರಬ್ಧದಿಂದಲ್ತೆ ಸಖೀ || ಅ.ಪ ||

 

ಅಭಿಸಾರಕ್ಕೇಗುವಾಗ, ಅಭಿಮಾನ ಬಿಡುವಾಗ

ಶುಭಚಿಂತಕಿಯರ ಜಡಿವಾಗ |

ಲಭಿಸಿದ ಸಾಕ್ಷವ ಲಘುವಾಗಿ ಕಾಂಬಾಗ

ಪ್ರಭವಿಸಬೇಕಿತ್ತಿಂದಿನ ಬುದ್ಧಿ ||1 ||

 

ಕಾಲಕಾಲಕೆ ಬಂದು ಎಚ್ಚರ ನುಡಿವೆನ್ನ-

ನೇಳಿಸಿ ಮುಖವನು ಮುರಿದೆಯಲಾ !

ಆ ಲುಬ್ಧಕನಿಂದು ನಿನ್ನನ್ನು ಮರೆಯಲು

ಗೋಳಿನ ಪಾಳಿಗೆ ಬಿದ್ದೆಯಲಾ !  || 2||

 

ಕಡ್ಡಿಯ ಮುರಿದು ನಾಂ ಕೈಯ್ಯಲ್ಲಿರಿಸಿದೆ-

ನಡ್ಡಕ್ಕೆ ತಿರುಗೀತು ಕಥೆಯೆಂದು |

ದಡ್ಡಿ ! ನೀಂ ಮರೆತೆಯೌ ಪೆರರಿಗಮೀ ಖಳಂ

ಒಡ್ಡಿದ ಬಲೆಯನು, ಗೆಳತಿಯನು ||3 ||

Leave a Reply

*

code