ಅಂಕಣಗಳು

Subscribe


 

ಮದನಮುಗ್ಧೆ

Posted On: Sunday, November 15th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 105ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  :  ತಾನೇಕೆ ನಾಯಕನಲ್ಲಿಗೆ/ಪತಿಯಿರುವಲ್ಲಿಗೆ ಹೋಗಬೇಕು ಎಂದು ಮುಗ್ಧಳಾಗಿ ಪ್ರಶ್ನಿಸುತ್ತಾ ತನ್ನ ಗೆಳತಿಯೇ ತೆರಳಬೇಕೆಂದು ತನ್ನ ಬಿಂಕವನ್ನು, ಅಂಜಿಕೆಯನ್ನೂ ಪ್ರಕಟಿಸಿದ್ದಾಳೆ ಈ ಮುಗ್ಧಾ ನಾಯಿಕೆ. ಆದರೆ ರತಿಚೇಷ್ಟೆಗಳನ್ನು ಅರಿಯುವಷ್ಟು ಪ್ರಬುದ್ಧಳಾಗಿರುವುದರಿಂದ ಈಕೆ ಈಕೆ ಜ್ಞಾತಯೌವನ ಎಂಬ ವಿಭಾಗಕ್ಕೆ ಸೇರುತ್ತಾಳೆ. ಆಗ ತಾನೇ ಮದುವೆಯಾದ ಈಕೆ ನವೋಢ ಎಂಬ ಪ್ರಕರಕ್ಕೆ ನಾಯಿಕೆ. ಆದ ನಾಯಕನ ರತಿಚೇಷ್ಟೆಗಳನ್ನು ಸ್ವೀಕರಿಸುವಷ್ಟು ಮನವೂ,ಮತಿಯೂ ಪಕ್ವವಾಗದಿರುವುದರಿಂದ ಆತನ ಕಡೆಗೆ ಅಸಹನೆ ಬಂದಿದೆ. ಇದನ್ನು ಹಲವು ಸನ್ನಿವೇಶ ಸಂದರ್ಭಗಳಿಂದ ಆಕೆ ಗೆಳತಿಯಲ್ಲಿ ವಿವರಿಸಿ ತನ್ನ ನಾಯಕನಿಂದ ಒದಗುತ್ತಿರುವ ಕಷ್ಟವಲ್ಲದ ಕಷ್ಟವನ್ನು (ಮದನಕೇಳಿ) ತೋಡಿಕೊಂಡಿದ್ದಾಳೆ.

ಮದನಮುಗ್ಧೆ

ರಾಗ : ನವರಸಕನ್ನಡ ; ತಾಳ : ಮಿಶ್ರಛಾಪು

ನಾನೇಕೆ ಹೋಗಲಿ? ಅವನಲ್ಲಿಗೆ ಸಖಿ

ನೀನೇ ತೆರಳು, ತೆರಳು ! ತರಲಾಕ್ಷಿಯೇ ||ಪ||

 

ನನಗೇನೊ ಅಂಜಿಕೆ, ಅವನಿಗೋ ರಂಜನೆ |

ಜನಕೆಲ್ಲ ನಗೆಪಾಟಲಿದು ಸುಮ್ಮನೆ ||ಅ.ಪ||

 

ಅತ್ತೆಯೊಂದಿಗೆ ನಾನು ಅಡುಗೆಗೆ ತೊಡಗಲು

ಕುತ್ತುಗಳನ್ನಾತನೆತ್ತುವನೇ! ಮತ್ತೆ

ಕತ್ತಲ ಕೋಣೆಯತ್ತೆಳೆಯುವನೇ ! ||೧ ||

 

ನಾದಿನಿಯೊಂದಿಗೆ ಮೋದದಿಂದಿರಲಾನು-

ನ್ಮಾದಿಯಂತೆನ್ನನು ನಾದುವನೇ ಹುಸಿ-

-ಕಾದುವನೇ ! ಎದೆ ಮೋದುವನೇ ! || ೨||

 

ಆಲಿಯರೊಡನಿರೆ ಬಾಲಿಕೆಯೆನ್ನನು

ಕೇಲಿಯ ಕಲಹಕ್ಕೆ ಸೆಳೆಯುವನೇ ಸೋತು

ಸೋಲಿಪನೇ! ಚಿತ್ತ ಚಾಲಿಪನೇ ! || ೩||

 

ಹಿರಿಯರ ಕೂಟದೆ ಮರಿಯಾದೆಯಿಲ್ಲದೆ

ಪರಿಪರಿ ಸನ್ನೆಯ ಮಾಡುವನೇ ಬಲು

ಕಿರಿಕಿರಿಯಾಗಿಸಿ ಕೊಲ್ಲುವನೇ ! || ೪||

 

Leave a Reply

*

code