ಅಂಕಣಗಳು

Subscribe


 

ಪಥಿಕ ಪ್ರಣಯಿನಿ

Posted On: Monday, November 9th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 103ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ನಿತ್ಯವೂ ಕಾಣಸಿಗುವ ಹಾದಿಗನ ಕಡೆಗಿನ ಕಂಡೂ ಕಾಣದ ಒಲವನ್ನು ಸಖಿಯಲ್ಲಿ ಪ್ರಕಟಿಸಿದ್ದಾಳೆ ಈ ಮಧ್ಯಾ ನಾಯಿಕೆ. ದಿನವೂ ಆತನು ನಡೆದುಹೋಗುವುದನ್ನೇ ನಿರೀಕ್ಷಿಸುತ್ತಾ ಆತನನ್ನು ಕಾಣುತ್ತಿರುವುದಕ್ಕೆ ಕಂಗಳು ಪುಣ್ಯ ಮಾಡಿವೆಯೆಂಬಷ್ಟರ ಮಟ್ಟಿಗಿನ ಅನುಬಂಧವನ್ನು ಕೂಡಾ ಬೆಳೆಸಿಕೊಂಡ ಈಕೆ ಆತನನ್ನು ಸೂಕ್ಷ್ಮವಾಗಿ ಗಮನಿಸಿದ್ದಾಳೆಂಬುದನ್ನು ಆಕೆಯ ಮಾತುಗಳೇ ಹೇಳುತ್ತಿವೆ. ಆತನ ಬಗೆಗಿನ ವಿವರವೊಂದನ್ನೂ ತಿಳಿಯದಿದ್ದರೂ ಆತನ ನಿಲುವು, ರೂಪು ನಯಿಕೆಯನ್ನು ಬಹುವಾಗಿ ಆಕರ್ಷಿಸಿದೆ ಎಂಬುದು ಆಕೆಯ ವರ್ಣನೆಯೇ ಹೇಳುತ್ತಲಿದೆ. ಮೊದಲನೋಟದ ಪ್ರೇಮವೋ ಎಂಬಂತಿದೆ ಆಕೆಯ ಭಾವಾಭಿವ್ಯಕ್ತಿ. ಆತನು ತನ್ನ ದೃಷ್ಟಿಯನ್ನು ಗಮನಿಸಿ ತಿರುಗಿನೋಡಿದನೇ, ಸರಸದಿಂದ ಮಂದಹಾಸ ಬೀರಿದನೇ ಅಥವಾ ಗಮನಿಸದೇ ಮುನ್ನಡೆದನೇ ಎಂದೆಲ್ಲಾ ಕಾತರವನ್ನೂ ಅಭಿವ್ಯಕ್ತಿಸಿದ್ದಾಳೆ.

ಪಥಿಕ ಪ್ರಣಯಿನಿ

ರಾಗ: ಸುರುಟಿ ; ತಾಳ : ರೂಪಕ

ಹಾದಿಯಲ್ಲಿ ಹೋಗುತಿರ್ಪನೇ- ಆಹ್ಲಾದಿಯೀತ     ||  ||

ಕಾದು ನಿಂತುದಕ್ಕೆ ಸಂದಿತೇ ಕಂಗಳ ಸಾಫಲ್ಯ     || ಅ.ಪ ||

 

ಮುಂಗುರುಳಿನ ತೋರಣವನು

ಕಂಗಳ ಬಾಗಿಲಿಗೆ ಕಟ್ಟಿ |

ಸಿಂಗರಿಸುತ ಮಾಡದಲ್ಲಿ

ತಂಗಿರೆ ಹಗಲೆಲ್ಲ ನಾನು ||೧ ||

 

ಏನು ಗಂಡುಗಾಡಿಚೆಲುವ !

ಮಾನಿನೀಮನೋನುಮಥನ |

ಬಾನ ಚಂದಿರನ ನೀವಾಳಿಸಿ

ನಾನೆಸೆವೆನೇ ಇವನಿಗೆ  ||೨ ||

 

ತಿರುಗಿ ನೋಡಿ ಸರಿದನೇನೆ?

ದರಹಾಸವ ಸುರಿದನೇ?

ಸರಸದ ಸೋಂಕಿದ್ದಿತೇನೆ?

ಮರೆತೇ ಮುನ್ನಡೆದನೇ ? ||||

Leave a Reply

*

code