ಅಂಕಣಗಳು

Subscribe


 

ಪ್ರಾಣೋತ್ಕ್ರಮಣೆ

Posted On: Tuesday, June 23rd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 45ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಹೇಗೆ ಪ್ರಥಮನೋಟವೇ ತನ್ನೆಲ್ಲಾ ಅಂಕೆಗಳನ್ನು ಮೀರಿ ಪ್ರಣಯಕ್ಕೆ ಕಾರಣವಾಯ್ತು ಎಂಬುದನ್ನು ನಾಯಿಕೆಯು  ವರ್ಣಿಸುವ ಮೂಲಕ ರತಿಭಾವೋತ್ಸಾಹದ ಪ್ರಥಮ ಘಟ್ಟಗಳನ್ನು ವಿರಹದ ಮೂಲಕ ಈ ಸೀಸಪದ್ಯದಲ್ಲಿ ಕಾಣಿಸಿದ್ದಾಳೆ. ನೋಡಿದಾಕ್ಷಣವೇ ಪಂಚೇಂದ್ರಿಯಗಳೂ ನಲ್ಲನೆಲೆಡೆಗೆ ನೆಟ್ಟು, ಕಳೆದುಹೋದುದನ್ನು ಗಮನಿಸಿದ ನಾಯಿಕೆ ಅವುಗಳನ್ನು ಅರಸುತ್ತಾ ಕೊನೆಗೆ ತನ್ನ ಗಮ್ಯಸ್ಥಾನವನ್ನು ಕಂಡುಕೊಂಡಿದ್ದು ಅವನ ಮನಸ್ಸಿನಲ್ಲಿ. ಮನಸ್ಸನ್ನು ವಾಪಾಸು ಕರೆತರಬೇಕೆಂಬ ಗುರಿಯಲ್ಲಿ ಹೊರಟ ಚಿತ್ತವೃತ್ತಿಗಳೂ ಗುಂಪಾಗಿ ಹೊರಟು ಸಂಗಮಿಸಿದ್ದು ನಲ್ಲನಲ್ಲೇ. ಅವುಗಳನ್ನು ಕರೆತರಲು ಶಿಸ್ತಿನಿಂದ ಹೊರಟ ಬುದ್ಧಿಯೂ ತನ್ನ ಜಾಡನ್ನು ಬದಲಿಸಿಕೊಂಡಲ್ಲಿಗೆ ತಾನೂ ಬಹುಜನರು ಹಿಡಿದು ಸವೆಸಿದ ಮಾರ್ಗವನ್ನೇ ಮತ್ತೆ ಹಿಡಿದಿದ್ದೇನೆಂದೂ; ಬದುಕಿಸಿಯೂ ಕೊಲ್ಲುವ, ಕೊಂದು ಬದುಕಿಸುವ ಈ ಪರಿಯ ಉತ್ಕಟ ನೋವು ನನಗೇ ಬರಬೇಕೆ ಎಂದು ಪ್ರಶ್ನಿಸಿ ಸವಿಯಾಗಿ ಸವಿದಿದ್ದಾಳೆ ಹೃದಯಂಗಮವಾದ ಪ್ರಣಯರುಚಿಯನ್ನು ! 

 

ಪ್ರಾಣೋತ್ಕ್ರಮಣೆ

ರಾಗ: ಶಿವರಂಜನಿ ; ವಿತಾಳ 

ಪಂಚೇಂದ್ರಿಯಂಗಳುರುಸತ್ತ್ವವೆಲ್ಲವು ಸೇರಿ

ಮೊದಲ ಬಾರಿಗೆ ಸಂದುದಾತನಲ್ಲಿ |

ಅವುಗಳನ್ನರಸುತ್ತೆ ಸುತ್ತಿ ಸುಳಿಯುತೆ ಮನವು

ಅವನ ಮನದೊಡನೆಯೇ ರಮಿಸಿತಲ್ಲಿ || ಪ ||

 

ಮನವ ಕರೆತರಲೆಂದು ಚಿತ್ತವೃತ್ತಿಗಳೆಲ್ಲ

ಗುಂಪಾಗಿ ಸಾಗಿ ಸಮನಿಸಿದುವಲ್ಲಿ |

ಹದ್ದಿನಲ್ಲಿರಿಸಿ ಮರಳಿಸುವೆನೆಂದಬ್ಬರಿಸಿ

ಬುದ್ಧಿಯೂ ತೆರಳಿತಾ ಬಟ್ಟೆಯಲ್ಲಿ || ೧||

 

ಇಂತು ಬಹುಮಹಾಜನರೆಲ್ಲ ಸರಿದು ಸವೆದ

ಪರಮಮಾರ್ಗಮಂ ವಿಡಿಯದೇಕೆನ್ನೊಳಿದ್ದು |

ಬದುಕಿ ಕೊಲ್ಲುತುಂ ಕೊಂದು ಮೇಣ್ಬದುಕಲಿತ್ತು

ಬಿನ್ನಣಿಸುವುದೇ ? ಜೀವ! ನನಗೇಕೆ ನೋವು? ||೨ ||

 

Leave a Reply

*

code