ಅಂಕಣಗಳು

Subscribe


 

ಪ್ರೌಢಪ್ರಬೋಧಿನಿ

Posted On: Thursday, November 19th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 108ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ನಾಯಿಕಾ-ನಾಯಕಾವಸ್ಥೆಗೆ ಪೂರಕವೂ, ಪ್ರೇರಕವೂ, ಪೋಷಕವೂ ಆದ ಸಖ್ಯಾಭಿವ್ಯಕ್ತಿಯ ಸಂಚಿಕೆಗಳಲ್ಲಿ ಇದೂ ಒಂದು. ಈ ಸಂಚಿಕೆಗಳಲ್ಲಿ ಪ್ರಧಾನವಾಗಿ ಸಖಿ/ಗೆಳತಿ/ನೆರೆಮನೆಯಾಕೆ/ಹಿತಚಿಂತಕಿ/ದಾಸಿ ಹೀಗೆ ಅನೇಕರನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಈಕೆಯ ಪಾತ್ರ, ಲಕ್ಷಣದ ಕುರಿತಾಗಿ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು, ಪಂಡರೀಕ ವಿಠಲನ ದೂತೀಕರ್ಮಪ್ರಕಾಶದ ವರೆಗೂ ಸಖಿ/ದೂತಿಯರ ಅನೇಕ ಪ್ರಸ್ತಾಪವಿದೆ. ಜಯದೇವನ ಗೀತಗೋವಿಂದದಲ್ಲಿ ಸಖಿ ಗುರುಸಮಾನಳೆಂಬ ತತ್ತ್ವಾರ್ಥವನ್ನೂ ಕಾಣಬಹುದಾಗಿದೆ. ನಾಯಿಕೆ-ನಾಯಕರ ಸಮಾಗಮ ಮತ್ತು ಬೇರ್ಪಡುವಿಕೆಯ ಹಿನ್ನೆಲೆಯಲ್ಲಿ ಇವಳ ಪಾತ್ರವಿದ್ದು; ಇವಳ ಮಾತುಗಳೇ  ಪದ್ಯಗಳ ರೂಪದಲ್ಲಿ ಹರಿದುಬಂದಿದೆ. 

ಇಂದಿನ ಸಖಿ : ನಾಯಕನೆಡೆಗೆ ಇರುವ ನಾಯಿಕೆಯ ಪ್ರೀತಿ, ನಲುಮೆಗಳನ್ನು ಬಲ್ಲವಳಾದ ವೇಶ್ಯಾಕುಲದಯಜಮಾನಿಯ ಸ್ಥಾನದಲ್ಲಿರುವ ತಾಯಿಯು ತನ್ನದೇ ಮಗಳೆನಿಸುವ ಸಾಧಾರಣಾ ನಾಯಿಕೆಗೆ ವ್ಯಂಗ್ಯದಿಂದ ಪ್ರಶ್ನೆಗಳನ್ನು ಕೇಳುತ್ತಾ ನೀಡುತ್ತಿರುವ ಉಪದೇಶವಿದು. ತಮ್ಮ ಕುಲವೃತ್ತಿಯ ಕೌಶಲವನ್ನು ಮರೆತು, ಬಲೆಯ ಬೀಸುವುದನ್ನು ಬಿಟ್ಟು ತಾನೇ ಬಲೆಗೆ ಸಿಲುಕುವುದೇ? ಎಂದೆಲ್ಲಾ ಬಗೆಬಗೆಯಾಗಿ ಪ್ರಶ್ನಿಸಿದ್ದಾಳೆ. ನಾಯಕನು ಬಂದಾಗ ನಾಯಿಕೆಯು ಖಚಿತವಾಗಿ ನಡೆದುಕೊಳ್ಳಬೇಕಾದ ವರ್ತನೆಗಳನ್ನು ನಿರ್ದೇಶಿಸಿದ್ದಾಳೆ.

ಈ ರಚನೆಯು ಮೊತ್ತಮೊದಲ ಬಾರಿಗೆ ಪಂಡರೀಕ ವಿಠಲನ ದೂತೀಕರ್ಮಪ್ರಕಾಶವೆಂಬ ದೂತಿಯರಿಗೆ ಮೀಸಲಾದ ಲಕ್ಷಣಗ್ರಂಥದ ಕುರಿತ ಶಾಲಿನೀ ವಿಠಲ್ ಅವರ ಸಿಸಿಆರ್ಟಿ ನೃತ್ಯಸಂಶೋಧನೆಯ ಅಂಗಭಾಗವಾಗಿ ನರ್ತಿಸಲಾಗಿತ್ತು. ಡಾ.ಶೋಭಾ ಶಶಿಕುಮಾರ್ ಅವರ ವಿದ್ಯಾರ್ಥಿನಿಯರಾದ ಸಂಗೀತಾ ಅಯ್ಯರ್ ಮತ್ತು ಮೇಘಾ ಶ್ರೀನಿವಾಸ್ ಇದನ್ನು ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ರಾಗಸಂಯೋಜನೆಗೆ ನೂಪುರ ಭ್ರಮರಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾಗೌರಿ ಸಭಾಂಗಣದಲ್ಲಿ ಅಭಿನಯಿಸಿದ್ದರು.  ದೂತಿಯರ ಪುನರ್ ನವೀಕರಣಕ್ಕೆ ಸಂಬಂಧಿಸಿದಂತೆ  ಧಾತ್ರಿ ಎಂಬ ದೂತಿ/ಸಖಿಯ ಲಕ್ಷಣಕ್ಕೆ ಅನುಸಾರವಾದ ರಚನೆ ಇದಾಗಿತ್ತು. ಅದರ ವಿಡಿಯೋ ಸರಣಿ ಇಲ್ಲಿದೆ. https://m.facebook.com/story.php?story_fbid=1233925860096535&id=139783552784864 

ಅದಾಗಿ ನೂಪುರ ಭ್ರಮರಿಯ ವತಿಯಿಂದ ಜರುಗಿದ ರಾಜ್ಯಮಟ್ಟದ ನೃತ್ಯಸಂಶೋಧನ ವಿಚಾರಸಂಕಿರಣ, ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಡ್ಯಾನ್ಸ್ ಜಾತ್ರೆಯ ನೃತ್ಯಸಂಶೋಧನೆಯ ಪ್ರಸ್ತುತಿಯಲ್ಲಿಯೂ ಈ ರಚನೆಯನ್ನು ಉಪನ್ಯಾಸದ ಸಹಿತ  ನರ್ತಿಸಲಾಗಿದೆ. 

 

ಪ್ರೌಢಪ್ರಬೋಧಿನಿ

ರಾಗ : ಚಾರುಕೇಶಿ ; ತಾಳ : ಆದಿ

ಇಂತಪ್ಪ ಮೋಹವೇನೇ ? ಮಾನಿನೀಮಣಿ 

ಕಾಂತನೊಳೇಂ ಕೂರ್ಮೆಯೇ !    ||  ||

 

ಆತನ ಕಾಂಬುದೊಂದರೆ ಚಣ ತಡವಾಗ –

ಲೀ ತಪನೆಯ ಪರಿ ಸರಿಯೇನೇ ?    || ಅ.ಪ ||

 

ಬಲೆಯ ಬೀಸುವ ಭಾಮೆ ಬಲೆಗೆ ಸಿಲ್ಕುವುದೇನೆ?

ಕುಲದ ಕೌಶಲವನು ಮರೆವರೇನೇ ?

ಒಲಿವುದೆಂಬುದುಮುಂಟು; ಇಂತಾರುಮೀ ಪರಿ

ಒಲಿವ ಹುಚ್ಚನು ಕಾಣೆವೆಲ್ಲೆಲ್ಲಿಯೂ || 1||

 

ಮನದೊಳಗಾಳದ ಮೋಹಗಳಿದ್ದರೂ

ಜನರಲ್ಲಿ ಬಯಲಾಗಿ ತೋರ್ಪರೇನೇ ?

ಅನುರಾಗವುಂಟೆಂದು ಪಸೆ ತೋರಲದೆ ಸಾಕು

ಬಿನದಿಸಿ ಬೀಗಲು ಪುರುಷರಿಗೆ ||2||

 

ಬಿಗುವಾಗು ಮೊದಲಿಗೆ ನಿನ್ನಾಣ್ಮಂ ಬಂದಾಗ

ನಗೆಯಲ್ಲಿ ನಿರ್ಬಂಧಗೊಳಿಸವನಂ |

ಮಿಗವನೇಳಿಪ ನೋಟದಿಂದಾತನಾಟವ

ಜಗುಳಿಸು; ನೀನೆನ್ನ ಮಗಳೆನಿಸು || 3 ||

Leave a Reply

*

code