ಅಂಕಣಗಳು

Subscribe


 

ರಸಿಕಾಸಹಾಯೆ

Posted On: Friday, November 6th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 102ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ಪ್ರೇಮಸಮಯವನ್ನು ಮತ್ತಷ್ಟು ರಸಮಯಗೊಳಿಸುವ ಸಲಹೆಗಳನ್ನು ಅಳವಡಿಸಿಕೊಳ್ಳಲಾಗದ ಮುಗ್ಧಾ ನಾಯಿಕೆಯ ಬೇಗುದಿಯೇ ಬಹಳಷ್ಟು ರಸಮಯವಾಗಿ ಪದ್ಯದಲ್ಲಿ ಮೂಡಿದೆ. ನಾಯಕನ ಬಳಿ ಹುಸಿಕೋಪ ತೋರಿಸಲಾಗದೆಂದೂ, ಅಶಾಂತಿಯನ್ನೆಬ್ಬಿಸೆನೆಂದೂ ಸಖಿಯೀಯುತ್ತಿರುವ ಉಪದೇಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ ಎಂಬ ಕೊರಗಿನೊಂದಿಗೆ ತೋಡಿಕೊಂಡಿದ್ದಾಳೆ. ರಸಿಕಾಸಹಾಯಕಿಯಾದ ಸಖಿಯ ಬಳಿ ಬಗೆಬಗೆಯಾದ ಆಂಗಿಕ ತಂತ್ರಗಳನ್ನು ಹೇಳಿಸಿಕೊಂಡ ಬಳಿಕವೂ ಅದನ್ನು ಪ್ರಯೋಗಿಸುವ ಚಾಕಚಕ್ಯತೆಯನ್ನರಿಯದೆ ಇರುವ ಸಂದಿಗ್ಧ ಒಂದೆಡೆಯಾದರೆ; ಮತ್ತೊಂದೆಡೆ ನಾಯಕನನ್ನು ಕವಲಿಸುವ ಮನಸ್ಸೇ ಆಕೆಗೆ ಬಾರದು.

ಈ ನಾಯಿಕೆಯನ್ನು ಮೊತ್ತಮೊದಲ ಬಾರಿಗೆ ನೃತ್ಯಕ್ಕಳವಡಿಸಿ ಶತಾವಧಾನಿ ಡಾ. ಆರ್. ಗಣೇಶರಿಗೆ ಬಿಟಿ ಎಂ ಕಲ್ಚರಲ್ ಅಕಾಡೆಮಿಯ ಸಭಾಂಗಣದಲ್ಲಿತ್ತ ಅಭಿನಂದನಾ ಸಮಾರಂಭದಂದು ಮುದಾವಹವಾಗಿ ನರ್ತಿಸುವುದರೊಂದಿಗೆ ತಮ್ಮ ಅಭಿನಯವ್ಯಾಖ್ಯಾನದಲ್ಲಿ ಮತ್ತಷ್ಟು ವಿಸ್ತರಣೆಯನ್ನು ಮಾಡಿದವರು ಡಾ.ಶೋಭಾ ಶಶಿಕುಮಾರ್.

ರಸಿಕಾಸಹಾಯೆ

ರಾಗ: ರೀತಿಗೌಳ ; ತಾಳ : ಆದಿ

ಕೋಪಗೊಳ್ಳುವುದಾಗದೇ – ಎನ್ನಿಂದ |

ತಾಪ ತೋರಿಸಲಾಗದೇ     ||  ||

 

ಕಾಂತನು ಬರಲಿನ್ನೇಕಾಂತದೊಳು ಅ-

ಶಾಂತಿಯ ಕಲ್ಪಿಸಲಾನರಿಯೆ    || ಅ.ಪ ||

  

ಮೊಗವನು ತಿರುವುವ ಪರಿಯೆಂತೇ ಸಖಿ !

ಹಗರಣ ಮಾಡುವ ಬಗೆಯೆಂತೇ ?

ನಿಗಡಿಸಿ ಹುಬ್ಬನು ಕಾಣುವನಿತರೊಳ್

ವಿಗಡವದನವಿದು ನಗುವುದೇ ! ||೧ ||

 

 ಔಡುಗಚ್ಚುವ ವಿಧವನು ತಿಳಿಸೇ ಸಖಿ !

ನೋಡುತ ನೋಡದ ಹದವೇನೇ ?

ಝಾಡಿಕೆಯನು ತುಟಿ ಮಾಡುವನಿತರೊಳ್

ಕೂಡಿಕೊಳ್ಳಲೆಂದೋಡುವುದೇ ! ||೨ ||

  

ಅವಮಾನಿಪ ರೀತಿಯದೇನೇ ? ಸಖಿ !

ಅವಲೇಪದ ರೀತಿಯದೆಂತೇ ?

ಅವನ ತೋಳ್ಗಳಿಂ ಜಾರುವನಿತರೊಳ್

ಕವಲಿಪುದವನನೇ ಎನ್ನೊಲವು ! ||||

Leave a Reply

*

code