ಅಂಕಣಗಳು

Subscribe


 

ರಸಿಕಾನ್ಯೆ

Posted On: Friday, July 17th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 62ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ನಲ್ಲನು ತನ್ನನ್ನು ಅರಸಿ ಅವಳಿದ್ದಲ್ಲಿಗೆ ಬಂದ ರೀತಿಯೇ  ಈ ಪರಕೀಯ ನಾಯಿಕೆಗೆ ಭೀತಿಯನ್ನು ತಂದೊಡ್ಡಿದೆ. ಆತನನ್ನು ಸ್ತುತಿಸುತ್ತಲೇ ಆತನ ತುಂಟತನದ ತರಲೆಗೆ ಆಕ್ಷೇಪಿಸಿದ್ದಾಳೆ. ಆತನು ಬರುವುದನ್ನು ಕಂಡೇ ಈಕೆಯ ನೆಂಟರು ಆತನ ಉದ್ದೇಶವನ್ನರಿತವರಂತೆ ಮುಖ ತಿರುವುತ್ತಿರುವುದು ನಾಯಿಕೆಗೆ ಇರಿಸುಮುರಿಸೆನಿಸಿದೆ. ಹಿರಿಯರಿಗೆ ಮಂಕುಬೂದಿ ಎರಚಿ *ಹರೆಯ ಎನ್ನುವ ಎರೆಯನ್ನು ಸಿಕ್ಕಿಸಿ ಆಕೆಗೆ ಗಾಳ ಹಾಕಿದ್ದಾನೆ. ಆಕೆ ಹೋಗುವೆಡೆಯೆಲ್ಲಾ ಈತನೂ ಕಾರಣಗಳನ್ನು ಮುಂದುಮಾಡಿಕೊಂಡು ಬೆರೆಯಲು ಗಮನಿಸುತ್ತಿದ್ದಾನೆ. ಎಷ್ಟೇ ಅನ್ಯರ ಕಣ್ಣಿಗೆ ಕಾಣದಂತೆ ಪ್ರಣಯೋಪಚಾರ ಮಾಡಿಸಿಕೊಳ್ಳಬೇಕೆಂದು ನೋಡಿದರೂ ಅದು ಸುಲಭಸಾಧ್ಯವಾಗುತ್ತಿಲ್ಲ. ಹಾಗೆಂದು ಆತನ ನೋಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಷ್ಟೂ, ಗರತಿತನದ ಬಿಗುಮಾನ-ಬಿಂಕಗಳು  ನೀಗುವಷ್ಟರ ಮಟ್ಟಿಗೆ ನಾಯಿಕೆಯ ಮನಸ್ಸಿನಲ್ಲಿ ಕಾಮನೆ, ರಸಿಕತನ ಹೊಯ್ದಾಡಿದೆ.

 

ರಸಿಕಾನ್ಯೆ

ರಾಗ : ಕಾಪಿ ; ತಾಳ : ರೂಪಕ

ಭೀತಿ ನನಗೆ ನೀನು ಬಂದ ರೀತಿಯಿಂದ- ಓ ಚಾತುರೀಧುರೀಣ ಜಾಣ ||ಪ||

ಸೇರಲೆನ್ನನಿಷ್ಟು ಭಾರಿ ಸಾಹಸಗಳೆ ! ಓ ಚಾರುತಾಪ್ರಸಾರ-ಸಾರ ! ||ಅ.ಪ||

 

ಮರುಳು ಹಿಡಿಸಿ ಹಿರಿಯರಲ್ಲಿ ಹದನು ಕಂಡು ನೀಂ

ಹರೆಯದೆರೆಯನ್ನಿರಿಸಿ* ಎನಗೆ ಗಾಳ ಹಾಕಲು |

ಬರಲು ನೀನು, ನಿನ್ನ ಕಂಡು ಚುರುಕುನೋಟದಿ

ಬಿರುಸುಮೊಗವ ತಿರುವುತಿಹರು ಮನೆಯ ನಂಟರು ||೧ ||

 

ಮನೆಯ ಹೊರಗೆ ಮುಗುದೆಯರೊಡನಾನು ನಡೆಯಲು

ಅನುವಿನಿಂದ ನೀನು ಬಂದು ಬೆರೆವ ಬವಣೆಯಿಂ |

ಜನರ ನಯನಗಳಿಗೆ ಧೂಳು ಚೆಲ್ಲಿ ಮೆಲ್ಲನೆ

ಮನದ ಬಯಕೆಯನ್ನು ಸಲ್ಲಿಸುವ ವಿಲಾಸದಿಂ ||೨ ||

 

ತೂಗುತಿಹುದು ಎನ್ನ ಮನವು ರಾಗಯೋಗದಿಂ

ಬಾಗುತಿಹುದು ಎನ್ನ ಬಿಗುಪು ನೋಟನೋಟಕುಂ |

ನೀಗುತಿಹುದು ಗರತಿತನದ ಬರಡುಬಿಂಕವು

ಹೀಗಾದೊಡಮೆನ್ನ ಕನ್ನೆಕೊರತೆ ಕಳೆಯಲಿ ||೩ ||

 

 

 

Leave a Reply

*

code