ಅಂಕಣಗಳು

Subscribe


 

ಸಂಧಾನಮಾನಿನೀ

Posted On: Friday, July 31st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 75ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಹಳೆಯ ಕಹಿ ಪ್ರಸಂಗದಿಂದ ಪಾಠ ಕಲಿತಿರುವ ನಾಯಿಕೆಯು ನಲ್ಲ ಮತ್ತು ತನ್ನ ಭೇಟಿ ಘಟಿಸಲು ರಾಯಭಾರವೇತಕೆ? ಅದರ ಬದಲಾಗಿ ಆತನನ್ನೇ ಕರೆಯಿಸಿ ದೊರಕಿಸಿಕೊಡಬಾರದೇ ಎಂದು ಸಖಿಯಲ್ಲಿ ಬಿನ್ನವಿಸಿದ್ದಾಳೆ. ಇದರಿಂದಾಗಿ ಸವತಿಯರ ಹಿಗ್ಗು ಹೆಚ್ಚಿದೆ, ಸ್ನೇಹಿತರ ನಡುವೆ ಈ ಸುದ್ದಿ ಗುಲ್ಲೆದ್ದು ಗೇಲಿಗೆ ಕಾರಣವಾಗಿದೆ; ಪರಸ್ಪರ ಹಿರಿಯರಲ್ಲಿ ಕೋಪಕ್ಕೆ ಕಾರಣವಾಗಿದೆ; ಇಷ್ಟಾಗಿಯೂ ತನ್ನಲ್ಲಿ ಕುಂದೆಣಿಸಿ, ಚೆಲುವನೆಂದು ಬೀಗುತ ಪ್ರೀತಿಯನ್ನು ಕೊಲ್ಲಬಹುದೇ? ನಾನು ನವೆದರೆ ಅವನಿಗೆ ಸಂತೋಷವೇ ಎಂಬುದಾಗಿ  ಪ್ರಶ್ನಿಸಿದ್ದಾಳೆ. ನೋವನ್ನು ಬಿಚ್ಚಿಡುತ್ತಾ ಅದನ್ನು ಕೊನೆಗಾಣಿಸುವ ಹಾದಿಯಲ್ಲಿ ಸಂಧಾನವೆಸಗಲು ಈ ಕಲಹಾಂತರಿತೆ ಕೋರಿದ್ದಾಳೆ.

ಸಂಧಾನಮಾನಿನೀ

ರಾಗ: ಕಾಂಬೋಧಿ ; ತಾಳ : ತ್ರ್ಯಶ್ರಗತಿ ಆದಿತಾಳ

ರಾಯಭಾರವೇತಕೇ ಸಖೀ ಮತ್ಸಮ್ಮುಖಕ್ಕೆ

ರಾಯನನ್ನು ಕರೆಯಿಸೇ ಸಖೀ ಮಹ-

ರಾಯನನ್ನು ದೊರಕಿಸೇ ಸಖೀ |ಪ|

 

ಅಂದು ನಾನು ಗೈದುದಕ್ಕೆ ಕುಂದು ತೋರುತ

ಅಂದಗಾರನೆಂದು ಬಿಂಕದಿಂದ ಬೀಗುತ |

ಕೊಂದುಕೊಂಡು ಕೂರ್ಮೆಯನ್ನು, ಕಾಣಬಾರದೆ

ಕಂದಿಸುವುದು ಚಂದವೇನೆ? ಕಾಂತೆಯೆನ್ನನು || ೧||

 

ಸವತಿಯರಿಗೆ ಸುಗ್ಗಿಯಾಯ್ತು, ಸೋಲು ಗೆದ್ದಿತು

ಜವದಿ ತಿಳಿದು ನೇಹಿಗರಿಗೆ ಗೇಲಿಯಾಯಿತು |

ಕವಿದು ಕೋಪ, ಹಿರಿಯರಲ್ಲಿ ಹೊಗೆಯು ಹಬ್ಬಿತು

ನವೆಯೆ ನಾನು ಮೋದವೇನೆ ಅವನ ಪಾಲಿಗೆ ? || ೨||

 

Leave a Reply

*

code