ಅಂಕಣಗಳು

Subscribe


 

ಸ್ಮರಸಂಧಾನೆ

Posted On: Monday, August 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 87ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  :   ಪ್ರಣಯಸೋಮದಿಂದ ರುಚಿಯುಳ್ಳವಳಾದ ನಾಯಿಕೆಯು ತನ್ನೆಡೆಗೆ ಕಾಂತಾಸಕ್ತಿಯಿಂದ ನುಗ್ಗಿ ಬರುತ್ತಿರುವ  ಸ್ಮರನನ್ನು ಮಣಿಸುವ ಉಪಾಯಗಳನ್ನು ಅವಲೋಕಿಸಿದ್ದಾಳೆ. ಇದನ್ನು ಅನುಸಂಧಾನಿಸುವ  ಮಂತ್ರಾಲೋಚನೆ ಅವಳದ್ದಾಗಿದೆ. ಕತ್ತಲೆಯಾಗುತ್ತಿದ್ದಂತೆಯೇ ಆಕ್ರಮಿಸಿಕೊಳ್ಳುವ ಮನ್ಮಥನು ಆಡುವ ಆಟಕ್ಕೆ ಪ್ರತಿಯಾಗಿ ತಾನೆಷ್ಟು ಪ್ರಯತ್ನಿಸಿದರೂ ಸೋತು ಹೋಗಿದ್ದೇನೆಂದೂ, ಆತನನ್ನು ಸೋಲಿಸುವ ಬಗೆಯೆಂತು ಎಂದು ಆಲೋಚಿಸುತ್ತಾ ತನ್ನನ್ನೇ ಬಗೆಬಗೆಯಾಗಿ ಪ್ರಣಯೋನ್ಮಾದದಲ್ಲಿ ಕಳೆದುಕೊಂಡ ಬಗೆಯನ್ನು ವಿವರಿಸಿದ್ದಾಳೆ. ಈ ರಚನೆಯನ್ನು ಸಖಿ-ನಾಯಿಕೆಯ ಸಂಭಾಷಣೆ ಅಥವಾ ಸ್ವತಃ ನಾಯಿಕೆಯೇ ತನ್ನ ಅಂತರಂಗದಲ್ಲಿ ಸಂಭಾಷಿಸುವಂತೆ ಯೋಜಿಸಿಕೊಳ್ಳಬಹುದಾಗಿದೆ. ಅಪಾರವಾದ ಅಲಂಕಾರಧ್ವನಿ ಇಲ್ಲಿದೆ. 

ಸ್ಮರಸಂಧಾನೆ

ರಾಗ : ಅಭೇರಿ ; ತಾಳ : ಮಿಶ್ರಛಾಪು

ಎಂತು ಗೆಲ್ಲುವೆಯೋ ಸ್ಮರ ವಿಸ್ಮರಣೆಯನೆಂತು ಕೊಲ್ಲುವೆಯೋ ಚಿರ ||ಪ||

-ಕಾಂತನನ್ಯಾಸಕ್ತನಾಗಿರಲಾತನ ಕ್ರಾಂತಗೊಳಿಪುದೆನ್ನಿಂದಾಗದಿರಲು ನೀಂ ||ಅ.ಪ||

 

ಇರುಳಿನ ಗಜವೇರಿ ಶಶಿಯ ಬೆಳ್ಗೊಡೆ ತೋರಿ ಬರುವೆನೆನ್ನುವೆಯೇನೋ ಹರವೈರಿ !

ಸುರುಳಿಕುರುಳ ಸುತ್ತಿ ನಗುಮೊಗವನ್ನೆತ್ತಿ ಮೆರೆದು ಸುಳಿದು ನಾನು ಸೋತೆನಲಾ ! ||೧ ||

 

ಕಬ್ಬಿನ ಬಿಲ್ಲಿಗೆ ಕೌಸುಮಶರವಿಟ್ಟು ಸಬ್ಬವಕಾರನ ಸೆದೆಯುವೆಯಾ?

ಹುಬ್ಬನು ಕೀಲಿಸಿ ಕಣ್ಣಲಿ ಕಣ್ಣ್ಬಿಟ್ಟು ತಬ್ಬಲೆಂದುಬ್ಬಿ ನಾಂ ತಪ್ಪಿದೆನೋ ! ||೨ ||

 

ಶುಕದ ರಥದೊಳು ಮೇಣ್ ಪಿಕದ ಪರಾಕೊಳು ಪ್ರಕಟಿಸಿ ಪೆಂಪನು ವಿಗಡಿಪೆಯಾ?

ಸಕಲಕಲಾವಿದೆಯಾಂ ನುಡಿ-ಪಾಡುಗಳಕಟ ಪ್ರಯೋಗಿಸಿ ಮೂಗುವಟ್ಟೆ ||೩ ||

 

ಮಲಯಾನಿಲವನಿನ್ನು ಸುಳಿಯಿಸಿ ಕಳವಳಗೊಳಿಸುವ ಚಾತುರಿ ತೋರುವೆಯಾ?

ಮೆಲುದುಟಿಮೇಲಿನ ಮಧುರಿಮವೆನ್ನದು ಮಲಗಿತು ನಿಟ್ಟುಸಿರನ್ನುಟ್ಟು ||೪ ||

 

Leave a Reply

*

code