ಅಂಕಣಗಳು

Subscribe


 

ಸ್ಮೇರಸಾಧಾರಣೆ

Posted On: Thursday, October 29th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 96ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ಸಾಧಾರಣೆ ನಾಯಿಕೆಯು ನಾಯಕನ ಗುಣವನ್ನು ಪ್ರಶಂಸಿಸುತ್ತಾ, ಆತನ ಪತ್ನಿಪ್ರೇಮದ ಪರಾಕಾಷ್ಠೆಯನ್ನೂ ಅಚ್ಚರಿಯಿಂದ ಪ್ರಶ್ನಿಸಿದ್ದಾಳೆ. ತನ್ನಂತೆ ಆಕೆಯು ನಿಸ್ಸಂಕೋಚವಾಗಿ ಎದುರಾಗಿ, ಸ್ವಾಗತಿಸಿ, ತಬ್ಬಿ ವೀಳ್ಯವಿತ್ತು, ಸಿಹಿ ನೀಡಿ, ಚುಂಬನಾದಿಗಳಿಂದ ತೋಷಗೊಳಿಸುವಳೇ? ಆಟವಾಡುವಳೇ? ಹುಸಿ ಮುನಿಸು – ನಗು-ಸೊಗ ತೋರುವಳೇ? ಹಾಡಿ ಕುಣಿಯುವಳೇ? ತನ್ನೊಂದಿಗೆ ಸ್ಪರ್ಧಿಸಿಯಾಳೇ ರತಿಚೇಷ್ಟೆಯಲ್ಲಿ -ಎಂಬೆಲ್ಲ ಕುತೂಹಲ, ಹೆಚ್ಚುಗಾರಿಕೆಯನ್ನು ತೋರುತ್ತಾ ಬಿಸುಸುಯ್ದಿದ್ದಾಳೆ, ತನ್ನ ಪ್ರಣಯಪೂಜೆಗೆ ಆಹ್ವಾನಿಸುತ್ತಲೇ ಪತ್ನಿಯಧ್ಯಾನದಲ್ಲಿ ಮುಳುಗಿರುವಾತನ ಗುಣವನ್ನು ಮನದುಂಬಿ ಕಣ್ಮುಂಬಿಕೊಳ್ಳುತ್ತಾ, ಇಂಥಹ ಪ್ರೀತಿ ಇರುವುದಾದರೆ ತಾನೂ ನಾಯಕನಿಂದಲೇ ತಾಳಿಕಟ್ಟಿಸಿಕೊಳ್ಳಬೇಕೆಂಬ ಹಂಬಲವನ್ನು ತೋರುವ ಗುಣವಂತಿಕೆಯನ್ನೂ ಹಂಚಿಕೊಂಡಿದ್ದಾಳೆ ಕೂಡಾ.

ಈ ರಚನೆಯನ್ನು ಮೊದಲ ಬಾರಿಗೆ ನೃತ್ಯಕ್ಕೆ ಅಳವಡಿಸಿ ಶತಾವಧಾನಿ ಡಾ.ರಾ.ಗಣೇಶರು ಮೊತಮೊದಲ ಕನ್ನಡ ಶತಾವಧಾನವನ್ನು ಯಶಸ್ವಿಯಾಗಿ ಪೂರೈಸಿದ ಮತ್ತೆರಡು ದಿನದ ಬಳಿಕ ಬಂದ ಅವರ ಐವತ್ತನೇ ಜನ್ಮದಿನಾವಸರದಲ್ಲಿ (೨೦೧೨ ಡಿಸೆಂಬರ್ ೪) ನೂಪುರಭ್ರಮರಿಯ ಸನ್ಮಿತ್ರರೆಲ್ಲಾ ಸೇರಿ ಬಸವನಗುಡಿಯಲ್ಲಿ ಏರ್ಪಡಿಸಿದ್ದ ನೃತ್ಯಸಂಜೆಯಲ್ಲಿ ಮನಮುಟ್ಟುವ ಅಭಿನಯವನ್ನಿತ್ತು ಸಾಧಾರಣಾ ನಾಯಿಕೆಗೆ ಅಸಾಧಾರಣ ಮುನ್ನುಡಿ ಬರೆದವರು ಡಾ.ಶೋಭಾ ಶಶಿಕುಮಾರ್ ಅವರು. ಅದಾಗಿ ಕೆಲವರುಷಗಳಲ್ಲಿ ಏಕವ್ಯಕ್ತಿ ಯಕ್ಷಗಾನದ ಮೂಲಕ ಮತ್ತೊಂದು ಬಗೆಯ ಅಭಿನಯ ವಿಸ್ತಾರವನ್ನು ಪಸರಿಸಿದವರು ಮಂಟಪ ಪ್ರಭಾಕರ ಉಪಾಧ್ಯಾಯರು.

ಸ್ಮೇರಸಾಧಾರಣೆ

ರಾಗ : ಮಾರುಬಿಹಾಗ್ ; ತಾಳ : ಆದಿ

ಇಂತಪ್ಪ ಒಲವೂ ಉಂಟೇ? ಕಾಂತಾಪ್ರಿಯ?

ಚಿಂತಾಚ್ಛಲಗಳೂ ಉಂಟೇ ? ||  ||

 

ಚಣವಾದರೂ ಸತಿಯ ಗುಣ ವಿಸ್ಮರಿಸದಿಹ |

ಪಣಕಾರರೂ ಉಂಟೇ – ನಿನ್ನಂಥ || ಅ.ಪ. ||

 

ಆ ನಿನ್ನ ಮಡದಿಯ ಮಾಹಾತ್ಮ್ಯವನು ಹೇಳೋ !

ಈ ನಿನ್ನ ದಾಸಿಯೂ ಕಲಿತಾಳು ಕೊಂಚ 

ಹಾ! ನಿನ್ನ ನಲ್ಮೆಗೆ ನೂರೆಂಟು ವಂದನೆ !

ಏನೀ! ಸಾತೀವ್ರತ್ಯ ! ಕಾದಿರಲು ಮಂಚ ||೧ ||

 

ಎನ್ನಂತೆ ಅವಳಿರ್ಪಳೇ – ಮನೋಹರ !

ನಿನ್ನಲ್ಲಿ ಬಿಗಿಬಿಡುವಳೇ?

ಚೆನ್ನಾಗಿ ಸರಸದ ಸಂಪನ್ನಸೀಮೆಯ

ಇನ್ನೂ ಮೀರಿಸಿ ಮೆರೆವಳೇ?* ||||

 

ಈ ಪರಿ ನೀನಿಂತು ಸ್ವೀಯಕಾಂತಾಚಿಂತೆ

ರೂಪಿಸಿಕೊಂಡು ಪರಧ್ಯಾನದಲ್ಲಿರಲು |

ಹಾ ! ಪುಣ್ಯವಿದ ಕಂಡು ನನಗೂ ನಿನ್ನಿಂದಲೇ

ಸೈಪಾಗಿ ತಾಳಿ ಕಟ್ಟಿಸಿಕೊಳ್ವ ಕಾಂಕ್ಷೆಯೋ ! ||||

 

(*- ಇಲ್ಲಿ ಮೇಲ್ಕಂಡ ವಿವರಣೆಯಲ್ಲಿರುವ  ಸಂಚಾರಿಗಳು ಬರಬೇಕು.)

 

Leave a Reply

*

code