ಅಂಕಣಗಳು

Subscribe


 

ತಿಕ್ತಹಿತಸಖೀ

Posted On: Wednesday, August 26th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 90ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  : ನಾಯಕನೆಡೆಗೆ ಸಂಧಾನಕ್ಕೆ ಕಳಿಸಬೇಡವೆಂದು ಪ್ರಾರ್ಥಿಸುತ್ತಾ ಕಲಹಾಂತರಿತ ನಾಯಿಕೆಯ ಬಳಿ ಸಖಿಯು ತನ್ನ ದುಮ್ಮಾನವನ್ನು ತೋಡಿಕೊಂಡಿದ್ದಾಳೆ. ನಾಯಿಕೆಯ ಮೂರ್ಖತನದ ಪರಿಣಾಮ ಕಂಡಕಂಡವರ ಮಾತು ಕೇಳಿ, ಅನುಮಾನಿಸಿ ನಾಯಕನನ್ನು ಮತಿಯಿಲ್ಲದೆ ದೂರ ಮಾಡಿಕೊಂಡಾಗಿದೆಯೆಂದೂ, ಜೊತೆಗೆ ತನ್ನನ್ನೂ  ದೂರುತ್ತಾ ಬಂದವಳಿಗೆ ಈಗ ತಾನೇಕೆ ಬೇಕೆಂದು ಜರೆದು ನುಡಿದಿದ್ದಾಳೆ. ನಾಯಿಕೆಯ ಕ್ಷೇಮವನ್ನು ಬಯಸಿದ ನಾಯಕ ಮತ್ತು ತನ್ನಂತಹ ಸಖಿಯೆಡೆಗೆ ತೋರಿದ ನಿರ್ಲಕ್ಷ್ಯ ಭಾವವನ್ನು ನೇರ ಮಾತಿನಿಂದಲೇ ಕಹಿ ನುಡಿಯುತ್ತಿರುವ ಈ ಸಖಿ ಹಿತವನ್ನೇ ಬಯಸುತ್ತಿರುವಳೆಂಬುದನ್ನು ಬೇರೆ ಹೇಳಬೇಕಿಲ್ಲ. 

ತಿಕ್ತಹಿತಸಖೀ

ರಾಗ: ಶಂಕರಾಭರಣ ; ತಾಳ : ಆದಿ

ನಾನಂತೂ ಸಂಧಾನಕೇಗಲಾರೆ – ಸಖೀ!

ನೀನನ್ಯರನ್ನಿದಕೆ ಸಂಯೋಜಿಸೇ || ಪ ||

 

ನಿನಗಾಗದವರೆಲ್ಲ ನಿನ್ನಲ್ಲಿ ಮೈತ್ರಿಯ-

ನನುರಾಗವನು ನಟಿಸಿ ಮನೆಯೊಡೆದರೇ !

ಅನುಕೂಲಕಾಂತನ ನೀನಾಗಿಯೇ ದೂರ-

-ಕನುಮಾನಿಸಿದೆ ನೂಕಿ ಮತಿಯಿಲ್ಲದೆ ||೧ ||

 

ಮದ್ದಿಟ್ಟು ಮಾಯೆಯ ಮಾಡಿದ ಮನ್ನೆಯ-

-ರುದ್ದಾಮಚತುರೆಯರೀಗೇಗಲಿ |

ಶುದ್ಧಮನಸ್ಸಿನ ನನ್ನನ್ನೇ ದೂರುತ್ತ-

-ಬದ್ಧವ ಗೆಯ್ದ ನೀನೇ ಸಾಗೆಲೇ ! || ೨||

 

ನೀನಾಡಿದಾ ಗಡಸು-ದುರುಸು ನುಡಿಗಳಿಗೆ

ಆ ನಾಯಕನು ನೊಂದಿರುವ, ನಿಶ್ಚಯಂ |

ಏನ ನೀಂ ಗೆಯ್ದೀಗಲಾತನನ್ನೊಲಿಸಿಕೊ-

ಳ್ವೇ? ನೀನೆ ! ಎಲ್ಲೆಯ ಮೀರಿದೆಯೌ ||೩ ||

Leave a Reply

*

code