ಅಂಕಣಗಳು

Subscribe


 

ಅಭಿನಯಭಾರತೀ- ಭವದಾಂಪತ್ಯ

Posted On: Thursday, December 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 132ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ, ನಾಯಿಕೆ ಮತ್ತು ನಾಯಕರೀರ್ವರಿಗೂ ಅನ್ವಯವಾಗುವ ಮೂರು ರಚನೆಗಳಿವೆ. ಇವು ದಾಂಪತ್ಯದ ಮೂರು ಪ್ರಧಾನ ನೆಲೆಗಳನ್ನೇ ಪ್ರತಿಪಾದಿಸಿವೆ. ಇವುಗಳೊಂದಿಗೆ ನಾಯಿಕಾ-ನಾಯಕ ಪದ್ಯಗಳ ಕನ್ನಡ ಅವತರಣಿಕೆ ಮುಕ್ತಾಯಗೊಳ್ಳುತ್ತಿದೆ. 

ಇಂದಿನ ದಾಂಪತ್ಯಗೀತ: ನವವಿವಾಹದ ದಿನಗಳು ಕಾಲದ ಓಟದಲ್ಲಿ ಮಾಯವಾಗಿ, ಹೊಸತಿನ ಆಕರ್ಷಣೆಗಳ ನಂಟು ಕ್ಷೀಣವಾಗುತ್ತಾ, ಭವದ ಚರ್ಯೆಗಳು ಪೀಡಿಸುವ ಹೊತ್ತಿನಲ್ಲಿ ಸಂತ್ರಸ್ತೆಯೆನಿಸಿಕೊಳ್ಳುವ ಸತಿಯ ಮಾತುಕತೆಗಳನ್ನಾಶ್ರಯಿಸಿದ ಗೀತೆಯಿದು. ಪರಸ್ಪರ ಆರೋಪ ಪಟ್ಟಿ ಗಂಡ ಹೆಂಡಿರ ನಡುವೆ ದಿನನಿತ್ಯವೂ ಕಲಹದ ಕುಕ್ಕುಟ ಕೂಗುವಂತೆ ಮಾಡುವುದು ದಾಂಪತ್ಯ ಪಥದ ನಿತ್ಯ ರಾಮಾಯಣ. ಇಲ್ಲಿ ಹೆಂಡತಿ ಒಂದಿನಿತು ಹೆಚ್ಚೇ ಗಂಡನನ್ನು ಕುಟುಕಿದ್ದಾಳೆ. ನಾಯಕನ ಚರ್ಯೆಗಳನ್ನು ಮುಕ್ತವಾಗಿ ಮೂದಲಿಸಿದ್ದಾಳೆ. ತನ್ನ ಅನುಮಾನವನ್ನು ಅರುಹಿದ್ದಾಳೆ. ಬೇಸರವನ್ನು ಪ್ರಕಟಿಸುತ್ತಾ ದುಃಖಕ್ಕೆ ಕಂಬನಿಯಾಗುತ್ತಲೂ ಸಂಸಾರದ ಪಥವನ್ನು ಸರಿದೂಗಿಸಿಕೊಳ್ಳುತ್ತಲಿರುವ ಹಂಬಲದಲ್ಲಿದ್ದಾಳೆ. ಭವದ ಬಂಧನವಾಗುವ ದಾಂಪತ್ಯದ, ಮನೆ ಮನೆಯ ರಾಮಾಯಣವನ್ನು ಸೊಗಸಾಗಿ ನಾಯಿಕಾಪದವನ್ನಾಗಿಸಲಾಗಿದೆ. ಒಂದರ್ಥದಲ್ಲಿ ಈಕೆ  ಖಂಡಿತಾ ನಾಯಿಕೆಯೇ ಹೌದು. 

ಭವದಾಂಪತ್ಯ

ರಾಗ: ತೋಡಿ ; ತಾಳ: ಖಂಡಛಾಪು

ಮದುವೆ ತೀರಿದ ಬಳಿಕ ಮಧುವೆ ತೀರುವುದೇನು?

ಪದವೆ ಕುಸಿವುದೆ ಸಪ್ತಪದಿಯ ಬಳಿಕ? ||ಪ||

 

ನಿಮ್ಮ ಗೆಳೆಯರ ಗುಂಪು ಕರಗದಲ್ಲ !

ನಿಮ್ಮ ಹವ್ಯಾಸಗಳು ಸೊರಗವಲ್ಲ !

ಒಳಹೊರಗೆ ದುಡಿವಾಕೆ ; ತಳಮಳಕೆ ತುಡಿವಾಕೆ

ಬಳಸಿಬಿಸುಡುವ ಬಟ್ಟೆಯಾದುದೇಕೆ?     ||೧ ||

 

ನಾ ಮುಡಿವ ಹೂವಿಗೂ ಪಾಲು ಬೇಕೆಂದೆನುತ

ಬೇರೊಂದು ಹೆರಳು ಹೆಡೆಯಾಡಿಸುವುದೇಕೆ?

ಸೀಮೆಗಿಲ್ಲದ ಸತಿಯ ಮುಳ್ಳಿನ ಕಿರೀಟದೀ

ಭಾರವನು ಜಾಣ್ಮೆಯಿಂ ಹೊರಿಸುವುದೇಕೆ? || ೨||

 

ನಿಮ್ಮ ತವರಿನ ಮುರುಕು ತಂಬೂರಿಯ ಶ್ರುತಿಗೆ

ನನ್ನ ಕನಸಿನ ಹಾಡು ಹಾಳಾಗಬೇಕೇ?

ನಿಮ್ಮ ಬೆವರಿನ ಹನಿಯ ಹೊನ್ನ ಜಿಂಕೆಯ ಹಿಂದೆ

ನನ್ನ ಬದುಕಿನ ರಾಮ ಬೆಂಬತ್ತಬೇಕೇ? || ೩||

 

ನಮ್ಮ ನಲ್ಮೆಯ ಬೆಸೆಯೆ ಬಂದ ಹೊಕ್ಕುಳ ಹೂವು

ನಿಮ್ಮ ದುಮ್ಮಾನದೊಳು ಬಾಡಬೇಕೇ?

ಈ ಸುಮದ ಸೌರಭದ ಲಂಗರಿನಲಿ ಸಿಲ್ಕಿ ಪರಿ-

ಹಾಸಕಾಯಿತೆ ನನ್ನತನದ ನೌಕೆ? || ೪||

Leave a Reply

*

code