ಅಂಕಣಗಳು

Subscribe


 

ಅಭಿನಯ ಭಾರತೀ- (ಸಖ್ಯಾಭಿವ್ಯಕ್ತಿ) ವಿಷಾದವಾರ್ತಾಹರೆ

Posted On: Tuesday, November 17th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 106ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ನಾಯಿಕಾ-ನಾಯಕಾವಸ್ಥೆಗೆ ಪೂರಕವೂ, ಪ್ರೇರಕವೂ, ಪೋಷಕವೂ ಆದ ಸಖ್ಯಾಭಿವ್ಯಕ್ತಿಯ ಕೆಲವು ಸಂಚಿಕೆಗಳು ಇಂದಿನಿಂದ. ಈ ಸಂಚಿಕೆಗಳಲ್ಲಿ ಪ್ರಧಾನವಾಗಿ ಸಖಿ/ಗೆಳತಿ/ನೆರೆಮನೆಯಾಕೆ/ಹಿತಚಿಂತಕಿ/ದಾಸಿ ಹೀಗೆ ಅನೇಕರನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಈಕೆಯ ಪಾತ್ರ, ಲಕ್ಷಣದ ಕುರಿತಾಗಿ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು, ಪಂಡರೀಕ ವಿಠಲನ ದೂತೀಕರ್ಮಪ್ರಕಾಶದ ವರೆಗೂ ಸಖಿ/ದೂತಿಯರ ಅನೇಕ ಪ್ರಸ್ತಾಪವಿದೆ. ಜಯದೇವನ ಗೀತಗೋವಿಂದದಲ್ಲಿ ಸಖಿ ಗುರುಸಮಾನಳೆಂಬ ತತ್ತ್ವಾರ್ಥವನ್ನೂ ಕಾಣಬಹುದಾಗಿದೆ. ನಾಯಿಕೆ-ನಾಯಕರ ಸಮಾಗಮ ಮತ್ತು ಬೇರ್ಪಡುವಿಕೆಯ ಹಿನ್ನೆಲೆಯಲ್ಲಿ ಇವಳ ಪಾತ್ರವಿದ್ದು; ಇವಳ ಮಾತುಗಳೇ  ಪದ್ಯಗಳ ರೂಪದಲ್ಲಿ ಹರಿದುಬಂದಿದೆ. 

ಇಂದಿನ ಸಖಿ : ಪ್ರಕೃತ ಪದ್ಯದಲ್ಲಿ ನಾಯಿಕೆಯ ವಿರಹವೇದನೆಯನ್ನು ನಾಯಕನಲ್ಲಿ ಬಿನ್ನವಿಸಿಕೊಳ್ಳುತ್ತಾ ಆಕೆಯನ್ನು ಬದುಕಿಸಿಕೊಳ್ಳಬೇಕೆಂದರೆ ನಾಯಕನ ಆಗಮನವಾಗಬೇಕೆಂದು ಎಚ್ಚರಿಕೆಯನ್ನು ಕೊಡುತ್ತಾ ಆತನ ಕಟುಮನಸ್ಸನ್ನು ಹದವಾಗಿ ಜರಿಯುವ  ಸಖಿಯೀಕೆ. ವಿರಹೋತ್ಕಂಠಿತೆಯಾದ ನಾಯಿಕೆಯ ಪಡಿಪಾಟಲು ಸಖಿಯ ಕಣ್ಣಲ್ಲಿ ಚಿತ್ರಿತವಾಗಿದ್ದು; ತನ್ನ ಒಡತಿಯ ನೋವನ್ನು ಸೈರಿಸಲಾರದೆ ಸಂಕಟದ ಛಾಯೆ ಈ ದೂತಿಯಲ್ಲಿ ಕಾಣಬಹುದಾಗಿದೆ. ಇಲ್ಲಿ ಸಖಿಯ ಅಭಿನಯಕ್ಕೆ  ದೃಷ್ಟಿ ನೀವಾಳಿಸುವುದು, ತಂತ್ರ-ತಾಯಿತ – ಮಂತ್ರ, ಕಾಮೋಪಶಮದ ವಿಧಾನ  ಮೊದಲಾದ ನೃತ್ಯ ಸಂಚಾರಿಗಳನ್ನು ಮಾಡಬಹುದಾಗಿದೆ. 

 ವಿಷಾದವಾರ್ತಾಹರೆ

 

ರಾಗ :ಕೇದಾರಗೌಳ ; ತಾಳ : ತ್ರ್ಯಶ್ರಗತಿ‌ಆದಿ/ತ್ರ್ಯಶ್ರತ್ರಿಪುಟ

ನಿನ್ನ ಚಿಂತೆಯಲ್ಲಿ ಕಾಂತೆ ಸೊನ್ನೆಯಾದಳೋ !

ಇನ್ನು ಸಮಯ ಮೀರ್ವ ಮುನ್ನ ಬಂದು ಕಾಯ್ದುಕೋ    ||  ||

 

ಅನ್ನಪಾನವೆಲ್ಲವನ್ನೂ ವಿಷದ ಹಾಗೆಯೇ

ಖಿನ್ನೆಯಾಕೆ ತೊರೆದಳೀಗ; ಭಿನ್ನವಾಗುತ |

ಕನ್ನೆಯರಿಗೆ ಕಾಮಜ್ವರವನೇತಕೀವನೋ

ಚ್ಛನ್ನಶತ್ರು ಬ್ರಹ್ಮನವನು; ಬಂದು ರಕ್ಷಿಸೋ  ||1 ||

 

ಬಳೆಗಳಿಳಿದು ಹೋದವಾಕೆಯಿಂದ ಬೇಗನೆ

ಕಳೆಯು ಚಂದ್ರನನ್ನು ಸೇರಿ ದೂರವಾಯಿತು |

ಒಲವನಿತ್ತ ಆಕೆ ಮಾತ್ರ ಮೋಸಹೋದಳು;

ಒಲವ ಕೊಂಡ ನೀನು ಮಾತ್ರ ಮೇಟಿಯಾದೆಯೋ || 2||

 

ಹಿರಿಯರೆಲ್ಲ ಆಸೆತೊರೆದು ಕೈಚೆಲ್ಲಿರುವರೋ !

ಗರತಿಯರಿಗೆ ವೇದನೆಯಿದು ತಿಳಿಯದಾಯಿತೋ!

*ಪರಿಪರಿಯಲಿ ವೈದ್ಯ ಮಾಡಿ ಎಲ್ಲ ಸೋತರೋ!

ತರುಣರಸಿಕ ಗುಣಕಂದರ್ಪ ! ಬಂದು ಕರುಣಿಸೋ ! ||3 ||

 

(ತ್ರ್ಯಶ್ರತ್ರಿಪುಟ) ಬೇಡುವುದು ಬಿಗುಮಾನವಾದರು;

ಕಾಡುವುದು ಕಡುನಾಣದಾದರು;

ಬಂದು ಭಾವಿಸಿ ಸಖಿಯ ಬಾಳನು

ತಂದುಕೊಳ್ಳಲು ನಾನು ತವಕಿಪೆ  ||4 ||

 

Leave a Reply

*

code