ಅಂಕಣಗಳು

Subscribe


 

ಅಭಿನಯಭಾರತೀ- ವಿಧಿವಿನಿಂದನೆ ನಾಯಿಕಾ

Posted On: Monday, May 11th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 19ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ.  ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ.

ಇಂದಿನ ನಾಯಿಕೆ-  ನಾಯಕನ ವಂಚನೆಯಿಂದ ತೀವ್ರವಾಗಿ ಘಾತಿಗೊಂಡು ತನ್ನ ಸ್ಥಿತಿಯನ್ನು ಹಳಿದುಕೊಳ್ಳುತ್ತಾ, ತನ್ನನ್ನು ಸಂರಕ್ಷಿಸುತ್ತಿದ್ದನೆಂದೇ  ನಾಯಕನ್ನು ಪರಿಗಣಿಸಿ, ಆತನನ್ನು ಬೈಯುವ ಮನಸ್ಸಿಲ್ಲದೇ ವಿಧಿಯನ್ನು ನಿಂದಿಸುವ ವಿಪ್ರಲಬ್ಧೆ. ನಾಯಕನಿಂದಾಗಿಯೇ ತನ್ನ ಆಪ್ತಸ್ನೇಹಿತೆ ದೂರಾಗುವಂತಾದ್ದಕ್ಕೆ ಬೇಸರ ಮಡುಗಟ್ಟಿದೆ; ಕುಟುಂಬದಲ್ಲಿಯೂ ತಾನು ಅಪರಾಧಿಯಾಗುವ ಮಟ್ಟಿಗೆ ತೋರಿಕೊಂಡ ಖೇದವೂ ತೋರಿಕೊಂಡಿದೆ. 

ವಿಧಿವಿನಿಂದನೆ

ರಾಗ: ಸುರಟಿ ; ತಾಳ: ಮಿಶ್ರ ಛಾಪು

ಇದಕಾಗಿ ಕಾದಿದ್ದನೇ ವಿಧಾತ!

ಇದನೇ ಬರೆಯೆ ಬಾಳ್ವನೇ ! ವಿಘಾತ ! ||ಪ||

ಎನ್ನ ಲಲಾಟಲಿಪಿಯ ನಿಂತು ಲೇಖಿಸಿ

ಇನ್ನು ಸಂತಸಬಟ್ಟನೇನಾ ಪಾಪಿವಿನೀತ || ಅ.ಪ ||

 

ಹಾಲಿನಂತಿರ್ಪೆನ್ನ ಸ್ವಾಮಿಯ ಮನದಲ್ಲಿ

ಲೀಲೆಯಿಂದಲಿ ಹುಳಿ ಹಿಂಡಿದನೇ |

ಕೇಳಿಯೊಳೂ ಸಹ ವಿರಸವನೆಸಗದ

ಪಾಲನು ದೂರಾಗುವಂತಾದನೇ ?    ||೧ ||

 

ಒಂದೇ ಬಳ್ಳಿಯ ಹೂಗಳಂತಿರ್ಪ ಸಖಿಯರು

ನೊಂದು ನೋಯಿಸಿ ನೀಗುವಂತಾಯಿತೇ ?

ಕುಂದುಗಾಣದ ಮೈತ್ರೀ ಮಂದರಶಿಖರಕೆ

ಬಂದಿನ್ನು ಬಡಿಯಿತೇ ಬರಸಿಡಿಲು? || ೨||

 

ಹಿರಿಯರ ಕಣ್ಣಿಗೆ ಹಿರಿಮೆಯ ಚಂದ್ರಿಕೆ-

ಗೊರೆಯೆಂಬ ಪರಿಯೊಳು ನಾನಿರಲು |

ಭರದಿ ಸತ್ಕುಲವನವಾಸಂತ ಶೋಭೆಗೆ

ಮೊರೆಯುವ ಕಾಳ್ಕಿಚ್ಚಿನಂತಾದನೇ ?     ||೩ ||

 

Leave a Reply

*

code