ಅಂಕಣಗಳು

Subscribe


 

ವಿದಾಯವಿಷಾದೆ

Posted On: Sunday, May 31st, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 30ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಪ್ರೇಮೋನ್ಮಾದ ಕಳೆಗಟ್ಟುವ ಕಾಲಕ್ಕೇ ನಾಯಕನು ಕಾರ್ಯಾರ್ಥವಾಗಿ ಪಯಣಕ್ಕೆ ಅಣಿಯಾದದ್ದು ನಾಯಿಕೆಯನ್ನು ಖಿನ್ನಳನ್ನಾಗಿಸಿದೆ. ಆತನ ವಿದಾಯ ಆಕೆಯಲ್ಲಿ ವಿಷಾದವನ್ನು ತಂದಿತ್ತಿದೆ. ಆತನನ್ನು ಹೋಗಬೇಡವೆಂದು ತಡೆದರೆ ಅದು ಕೇಡು, ಒತ್ತಾಯ ಮಾಡಿ ಇರಿಸಿಕೊಂಡರೆ ಅದು ದರ್ಪವೆನಿಸೀತು, ಅವನಿರದಿದ್ದರೆ ತಾನೂ ಇಲ್ಲನೆನ್ನುವುದು ಸಲ್ಲದ ಮಾತು ಎಂಬುದನ್ನೆಲ್ಲವನ್ನೂ ಅರಿತರೂ, ಆತನನ್ನು ಕಳಿಸಿಕೊಡಲು ಮನಸ್ಸಿಲ್ಲದೆ ಬಿಸುಸುಯ್ದಿದ್ದಾಳೆ. ಈ ಪದ್ಯದ ಸಾಲುಗಳು ಲೀಲಾಶುಕನ ಕೃಷ್ಣಕರ್ಣಾಮೃತ ಕಾವ್ಯವನ್ನೇ ನೆನಪಿಗೆ ತರುವಷ್ಟು ಹೃದ್ಯವಾಗಿದೆ. ಕೊನೆಗೆ ಇನಿಯನು ಹೋಗುವ ಪ್ರಾಂತದಲ್ಲೇ ಏನಾದರೂ ಘಟಿಸಿ ಆತನು ತೆರಳುವುದನ್ನು ತಡೆಯಲು ಮನ್ಮಥನೇ ವರ ಕರುಣಿಸಲೆಂದು ಬೇಡಿಕೊಳ್ಳುತ್ತಿರುವ ಮಟ್ಟಿಗೆ ಈಕೆ ಪ್ರವಾಸಪತಿಕೆ, ಪ್ರೋಷಿತ ಭರ್ತೃಕೆ. 

ವಿದಾಯವಿಷಾದೆ

ರಾಗ : ವಸಂತಭೈರವಿ ; ತಾಳ : ಆದಿ/ತ್ರ್ಯಶ್ರತ್ರಿಪುಟ

ಪಯಣಕ್ಕೆ ಅಣಿಯಾದೆಯಾ ಗುಣಾರ್ಣವ !

ಪ್ರಣಯಕ್ಕೆ ಪಣವಾದೆಯಾ? ||ಪ||

 

ಅನುರಾಗಲತೆ ಮೋಹಮಧುಮಾಸದೋಹದ-

ಕನುವಾಗುತಿರುವಾಗ ವೇಗಸಂವೇಗದಿ ||ಅ.ಪ||

 

ಸಲ್ಲದೆನ್ನಲು ಕೇಡು ಪೋಗೆನಲೊಲ್ಮೆಯೆಲ್ಲಿ?

ನಿಲ್ಲೆನೆ ದರ್ಪ ನಿನ್ನಿಚ್ಛೆಯೆನಲೌದಾಸೀನ್ಯ |

ಇಲ್ಲ ನೀನಿಲ್ಲದೆ ನಾನೆನ್ನಲದು ಹೊಲ್ಲ

ನಲ್ಲ ! ಏನೆನ್ನಲಿ? ನೀನೇ ಸಲ್ವುದನುಲಿ || ೧||

 

ಪೋಪೆನೆಂಬುವ ಮಾತು ಪೋಪುದಕಿಂ ಕ್ರೂರ

ಭೂಪತದ್ವಜ್ರಕ್ಕಿಂತದರ ನಿರೀಕ್ಷೆ ಘೋರ |

ಕೋಪತಾಪಂಗಳು ಕಾಪುಗೈದಪವೇನು?

ರೂಪುಗೊಂಡಾಯ್ತಲ ಸ್ತೂಪಿತವಿಪ್ರಲಂಭ !! || ೨||

 

(ತ್ರ್ಯಶ್ರತ್ರಿಪುಟ) ಕಾಂತ ! ನೀನಿನ್ನಾವ ಪ್ರಾಂತ-

ಕ್ಕಾಂತು ಪೋಪೆಯೊ ಅಲ್ಲಿಯೇ ನೆರೆ-

ನೋಂತು ಜನಿಸುವ ಸೊಗವ ನೆನಗಾ

ಕಂತು ಕರುಣಿಸಲೆಂದು ಬೇಡುವೆ ||೩ ||

************************

 

Leave a Reply

*

code