ಅಂಕಣಗಳು

Subscribe


 

ಭೀತಿಭಾವಿತೆ

Posted On: Saturday, June 27th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 48ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ನಾಯಕನು ತನಗೇ ಒಲಿದನೆಂದು ಲೋಕವಿಡೀ ಸಾರಿ ಬಂದ ಬಾಯಾಳಿ ನಾಯಿಕೆಗೆ, ಇದೀಗ ಆತನು ತನ್ನನ್ನು ಕೊಂಚವೂ ಗಣಿಸುತ್ತಿಲ್ಲವೆಂಬುದನ್ನು ತಿಳಿದು ಗರಬಡಿದಂತಾಗಿದೆ, ಭ್ರಮನಿರಸನವಾಗಿದೆ. ಹಾಗೆಂದೇ ನಾಯಕನನ್ನು ಬಗೆಬಗೆಯಾಗಿ ಸಡಗರದಿಂದ ಕೊಂಡಾಡಿದ್ದವಳಿಗೀಗ; ಬೀದಿಬೀದಿಗಳಲ್ಲಿ ಈ ವಿಷಯವು ಗುಲ್ಲಾಗುವ ಸಂಕಟ ಬೆನ್ನುಹತ್ತಿದೆ. ಲೋಕವು ಜರೆದು ಆಡಿಕೊಳ್ಳುವ ಸಂಭವನೀಯತೆಯನ್ನು ನೆನೆದೇ ಭೀತಳಾಗಿದ್ದಾಳೆ. ಅಪಖ್ಯಾತಿಯಿಂದ ತಪ್ಪಿಸಿಕೊಳ್ಳುವ ಬಗೆ ತಿಳಿಯದ ಗೊಂದಲ ಅವಳನ್ನು ಆವರಿಸಿದೆ. ಅವನ ಜಾರತನವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದೇ?; ತನ್ನ ಒಳ್ಳೆಯತನವನ್ನೇ ಹಳಿಯುವುದೇ? ಅಥವಾ ಈ ಬಗೆಯಾದ ಸ್ಥಿತಿಯೊದಗಿದ್ದಕ್ಕೆ ಶಿವನ ವಿಕಟವನ್ನು ಸ್ತುತಿಸುವುದೇ?- ಹೀಗೆ ಮನಸ್ಸು ದಂದ್ವಗಳಲ್ಲಿ ಸುಯ್ಯುತ್ತಿದೆ. ಅವನು ದೂರಾದದ್ದೇ ಆಕೆಗೆ ಸಿಡಿಲಾಘಾತ. ಈಗಂತೂ ಆಕೆಯ ಹೆಚ್ಚಿನ ತಲ್ಲಣ ಮರ್ಯಾದೆಯು ಛಿನ್ನವಾಗುವ ಸಾಧ್ಯತೆಗಳ ಕಡೆಗೆ ನೆಟ್ಟಿದೆ. ಶೃಂಗಾರನಾಯಿಕೆಯು ತನ್ನ ನಾಯಿಕಾವಸ್ಥೆಯಿಂದ ಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ರೂಪಗಳಲ್ಲಿ ಇದನ್ನು ಪರಿಗಣಿಸಬಹುದು.

 

ಭೀತಿಭಾವಿತೆ

ರಾಗ: ಕಾನಡ ; ತಾಳ: ಆದಿ/ಮಿಶ್ರಛಾಪು

ಅವನೊಲ್ದನೆನಗೆಂದು ಜಗವೆಲ್ಲ ಸಾರಿದೆ –

ನವನೀಗ ಮೊಗ ತಿರುಹಲೆನಗೇಂ ಗತಿ!    ||ಪ ||

 

ಕೊಡುಗೈಯ ದೊರೆಯೆಂದು ಕಡುಜಾಣನಿವನೆಂದು

ಬಿಡದೆನ್ನನಂಟಿದನೊಂಟಿದನೆಂದು

ಸಡಗರದಿಂದಲಿ ಸಾಧಿಸಿದವಳಿಗೆ

ಸಿಡಿಲೇ ಬಡಿದುದೆ? ಸಡಿಲಾದೆನೇ?    || ೧ ||

 

ಊರುಕೇರಿಗಳಲ್ಲಿ ಹಾದಿಬೀದಿಗಳಲ್ಲಿ

ನೂರಾರು ಜನರಲ್ಲಿ ಗುಲ್ಲಾಗದೇ?

ಹಾರಾಡಿದವಳಿಗೆ ಹೋರಾಟವಾಯ್ತೆಂದು

ಜಾರಿಸುವರೊಳಾನೇನೆನ್ನಲಿ ? || ೨||

 

(ಮಿಶ್ರಛಾಪು ) ಅವನನೆಳೆವುದೆ ಬೀದಿಗೆ? ಮದ್ಭವಿಕವನ್ನೇ ಹಳಿವುದೇ ?

ಶಿವನ ವಿಕಟವಿನೋದವನ್ನಾಂ ಸ್ತವನಿಸುವುದೇ ಸುಮ್ಮನೆ ?    || ೩||

Leave a Reply

*

code