ಅಂಕಣಗಳು

Subscribe


 

ಜಾರಜಾಗರಣೆ

Posted On: Monday, July 20th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 65ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಲ್ಲನನ್ನು ಮನೆಯಿಂದ ಕಳಿಸುವ ಧಾವಂತದಲ್ಲಿರುವ ಈ ಪರಕೀಯ ನಾಯಿಕೆಗೆ, ಎಲ್ಲಿ ತನ್ನ ಪತಿ ಬಂದುಬಿಡುವನೋ ಎಂಬ ಆತಂಕ. ಹಾಗೆಂದೇ ಆತನನ್ನೂ, ಅವನ ನಡತೆಯನ್ನೂ ಜರಿಯುತ್ತಾ, ಹಿರಿಯರೆನಿಸಿಕೊಂಡವರನ್ನು ದೂರುತ್ತಾ,  ತನ್ನ ಸುಂದರವಾದ  ಈ ಪ್ರಣಯದ ಗುಟ್ಟನ್ನು ಪತಿಯು ಒಡೆದುಬಿಟ್ಟಾನು ಎಂಬ ಭಯದಿಂದ ನಲ್ಲನಿಗೆ ಜಾರಿಕೊಳ್ಳುವ ಉಪಾಯಗಳನ್ನು ಉಪದೇಶಿಸುತ್ತಿದ್ದಾಳೆ. ಆತನ ಬಗೆಗೆ ಕಾಳಜಿಯನ್ನು ತೋರುತ್ತಾ, ನಾಳೆಗೂ ಸಂಧಿಸುವ ಅವಕಾಶವನ್ನು ನೆನಪಿಸುತ್ತಿದ್ದಾಳೆ. ಇಲ್ಲದೇ ಹೋದರೆ ತನ್ನ ಪ್ರಾಣವು ನಿಲ್ಲದೆಂಡು ವಿರಹೋತ್ಕಂಠಿತೆಯಾಗಬಹುದಾದ ಸಾಧ್ಯತೆಗಳನ್ನು ಸೂಚಿಸಿದ್ದಾಳೆ. ಸಂಭೋಗ ಶೃಂಗಾರದ ಬೆನ್ನಿಗೇ ವಿಪ್ರಲಂಭವು ದಾಳಿ ಮಾಡುವ ಅಭಿವ್ಯಕ್ತಿಯ ಪದ್ಯವಿದು.

ಜಾರಜಾಗರಣೆ

ರಾಗ: ಸಾಮ; ತಾಳ: ಆದಿ/ಮಿಶ್ರ ಛಾಪು

ಜಾರಿಕೊಳ್ಳೋ ಬೇಗ ಜಾಣನೆ! ಪತಿ ಪಾಪಿ

ಸಾರುತಲಿರ್ಪನು ಮನೆಯತ್ತ ||ಪ||

ಅವನೋ ಮೊದಲೇ ಸಂದೇಹದ ಪ್ರಾಣಿ

ಸವಿಗುಟ್ಟನ್ನಿದನೊಡೆದಾನು !    ||ಅ.ಪ||

 

ಧಾವಂತದೆ ನೀನೆತ್ತಲೆತ್ತಲೋ ಸಾರಿ

ನೋವಾಗದಿರೋ ನಯಗಾರ !

ಆವೆಡೆಯಡಗೋ ಆವೆಡೆ ಕದವೋ

ಸಾವಧಾನದಿಂದೊರೆಯುವೆನಾಂ || ೧||

 

ಹಿರಿಯರ ಕಣ್ಣಿಗೆ ಬೀಳದಿರೋ – ಆ

ಕಿರಿಯರ ಕೈಗಳಿಗೆರಗದಿರೋ |

ಊಳಿಗದವರಿಗೆ ಸಿಲ್ಕದಿರೋ – ಮತ್ತೆ

ನಾಳೆಯ ನರ್ಮವ ಮರೆಯದಿರೋ ||೨ ||

 

ಮಬ್ಬುಗತ್ತಲೆಯೊಳು ತಬ್ಬಿಬ್ಬಾಗದೆ

ಒಬ್ಬರಿಗೂ ಶಂಕೆಯಾಗಿಸದೆ |

ಹಬ್ಬದ ನಂಟರ ಹಾಗೆ ನೀ ಸಾಗೆಲೋ

ಸಬ್ಬವಕಾರನೆ! ಜೋಪಾನ    || ೩||

 

(ಮಿಶ್ರ ಛಾಪು ) ಅರಸಿಕನು ಪತಿ ಪರಮಪಾತಕಿ| ಹಿರಿಯರೋ ಬರಿ ದುರುಳರು

ದೊರಕದಿರ್ದೊಡನೆನ್ನ ಪಾಲಿಗೆ | ದೊರೆಯೆ! ನೀ, ನಾನುಳಿವೆನೇ? ||೪||

Leave a Reply

*

code