ಅಂಕಣಗಳು

Subscribe


 

ಜೀವಿತವಿವಸಿತೆ

Posted On: Friday, June 12th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 41ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಿಕೆಯ ಆಭೂಷಣಗಳೆಲ್ಲಾ ತಮ್ಮ ಸ್ಥಾನವನ್ನು ಕಳೆದುಕೊಂಡಿವೆ, ಶರೀರಾಂಗಗಳು ತಮ್ಮ ಕಾಂತಿ,ಸೌಂದರ್ಯವನ್ನು ಸವೆದು ಅಗಲಿವೆ ಎಂಬ ಧ್ವನಿಯಲ್ಲಿ ಆಕೆಗೆ ನಾಯಕನು ತನ್ನನ್ನು ಅಗಲಿದ ದುಃಖ, ಅದರೊಂದಿಗೇ ವಿರಹ ಉತ್ಕಂಠಿತವಾದ ಪರಿಣಾಮ ನಿಚ್ಚಳವಾಗಿದೆ.  ಇಷ್ಟೆಲ್ಲಾ ವೈಕಾರ್ಯಗಳು ಘಟಿಸಿದ್ದಾಗ್ಯೂ ತನ್ನೊಳಗಿನ ಚೈತನ್ಯ ಇನ್ನೂ ಇದೆಯೆಂದರೆ ಅದಕ್ಕೆ ಕಾರಣವೇನೆಂದು ಪರಿಕಿಸುವ ವಿವೇಕಿಯಾಗಿದ್ದಾಳೆ. ಫಲವಾಗಿ -ಪ್ರೇಮವೇ ಜೀವಿಗಳ ಪರಮ ಉಸಿರು ಎಂದೇ ಗಣಿಸಿದ್ದು ಅದೇ ಬಗೆಯಾಗಿ ತಾನು ದುಃಖಿಸಿದ್ದೇನಲ್ಲಾ ಇದೇ ಅಲ್ಲವೇ ಜೀವನ, ಇದನ್ನು ಅತಿಯಾಗಿ ಭಾವಿಸಿದ್ದೇನಲ್ಲ ಎಂದು ವಿವೇಚಿಸುತ್ತಾಳೆ.  ನಲ್ಲನು ಇನ್ನೂ ಎದೆಯೊಳಗಿರುವಾಗ ಇಷ್ಟೊಂದು ವಿರಹದಿಂದ ತಪಿಸುವುದು ಸರಿಯೇ ಎಂಬುದಾಗಿ ಆಕೆಗೇ ಬೋಧೆಯಾಗುತ್ತದೆ ! ಹೀಗೆ ಜೀವಭಾವದ ವಿವೇಚನೆಗೆ ಕಾರಣವಾದ ನಾಯಕನ ಅಗಲಿಕೆಯನ್ನು ತಾತ್ಕಾಲಿಕ ಮತ್ತು ಶಾಶ್ವತ ಎಂಬೆರಡು ಅರ್ಥದಲ್ಲಿಯೂ ಈ ಸೀಸಪದ್ಯದಲ್ಲಿ ಪರಿಭಾವಿಸಿಕೊಳ್ಳಬಹುದಾಗಿದೆ. 

 

ಜೀವಿತವಿವಸಿತೆ

ರಾಗ: ರೇವತಿ ; ವಿತಾಳ :

ಬಳೆಗಳಿದೊ ಕಳಚಿಕೊಂಡವುಗಳೇ ಜಾರಿದವು

ಅಂದುಗೆಗಳೆಂದಿಗೋ ಇಳಿದಳಿದವು |

ಚಂದನಾಗುರುಲೇಪವೆಂದೊ ಸುರಿಯಿತು ಕರಗಿ

ಸುಮಮಾಲೆ ಬಾಡಿ ಬಸವಳಿದಳಿಯಿತು || 

 

ಕದಪುಗಳ ಕೆಂಪು-ಪೆಂಪುಳಿಯದಂತೋಡಿತ್ತು

ಕಂಗಳಿಂಗದ ಕಾಂತಿ ಕತ್ತಲಿಸಿತು |

ಅಧರಗಳ ಮಧುರಿಮವು ಮಸಕಾಗಿ ನಿರಸಿಸಿತು

ತನುವಿನುರುಸೌಂದರ್ಯ ಸವೆದಗಲಿತು ||

 

ಇಂತಾದೊಡಿನ್ನುಮೇತಕೆ ಸಾಗದಂತಿರ್ಪುದೀ

ಚೈತನ್ಯಂ? ಇದು ತಾನೆ ಜೀವಿಗಳ ಜೀವಮಪ್ಪ |

ಪರತರಾಕಲ್ಪಮೆಂದೆನುತೆ ನಾಂ ದುಃಖಿಸಿರ್ಪೆಂ

ನಲ್ಲನೆದೆಯೊಳಗಿರಲು ವಿರಹಕಾಂ ತಪಿಪೆನೇಕೆ ! ||

 

Leave a Reply

*

code