ಅಂಕಣಗಳು

Subscribe


 

ಖಿನ್ನಾನ್ಯೆ

Posted On: Tuesday, July 14th, 2020
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 60ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ತನ್ನ ಸಮಸ್ತವೂ ಸೂರೆಯಾದ ಬಳಿಕ ಪತಿಯು, ತೌರು ದೂರ ತಳ್ಳಿ ಇತ್ತ ನಲ್ಲನೂ ದೂರವಾಗಿ ಎಲ್ಲರೂ ಗುಲ್ಲು ಮಾಡುವಂತಾದ ಮೇಲೆ ಇದುವರೆಗಿನ ತನ್ನ ವರ್ತನೆಗೆ ಲಜ್ಜಿತಳಾದ ನಾಯಿಕೆಯಿವಳು. ತನಗೆ ತಡವಾಗಿ ವಿವೇಕ ಬಂದಿದ್ದಕ್ಕೆ ತನ್ನ ಹರೆಯವನ್ನು ಶಪಿಸುತ್ತಾ, ಕೊರಗುತ್ತಾ, ಖಿನ್ನಳಾಗಿ ನಿಡುಸುಯುತ್ತಿದ್ದಾಳೆ. ತನ್ನ ಹರೆಯದ ಬೆಲ್ಲ ತೀರಿದೆ; ಪ್ರೀತಿ ನೀಗಿದೆ, ಹಿಂದೆ ಹೋಗಿ ಕಾಲವನ್ನು ಸರಿಪಡಿಸಿ ಬರಲಾಗದಷ್ಟು ದಾರಿ ಸವೆಸಿದ್ದಾಳೆ, ಮುಂದೆ ದಾರಿಗಾಣದಂತಾಗಿದೆ  ಎಂದು ಗೋಳುಗುಟ್ಟುತ್ತಿದ್ದಾಳೆ. ಇಷ್ಟಾದರೂ ಮನಸ್ಸಿಗೆ ಒದಗಿದ ಖೇದ-ವೈರಾಗ್ಯಗಳು ಕಾಯಕೆ ಒದಗದೆ ಮೋದದ ಅನ್ವೇಷಣೆಯಲ್ಲಿದೆ ಎಂಬುದನ್ನು ಕಂಡುಕೊಂಡಿರುವ ಈ ನಾಯಿಕೆಯು ಪರಕೀಯೆಯ ಅವಸ್ಥೆಯನ್ನು ಕ್ರಮಿಸಿ ಈ ಶೃಂಗಾರ ನಾಯಿಕೆಯಿಂದಾಚೆಗಿನ ಪರಿಧಿಯಲ್ಲಿ ತನ್ನ ಅವಲೋಕನ ಮಾಡಿಕೊಳ್ಳುತ್ತಿದ್ದಾಳೆ. ಪಶ್ಚಾತ್ತಾಪದ ಬೆಂಕಿ ಅವಳನ್ನು ಆಕ್ರಮಿಸಿದ ಬಳಿಕವೂ ಅದರಲ್ಲಿ ಬೆಚ್ಚಗಾಗುವ ದಾರಿ ಹುಡುಕುತ್ತಿದ್ದಾಳೆ.

ಖಿನ್ನಾನ್ಯೆ

ರಾಗ : ಸಾವೇರಿ ; ತಾಳ : ರೂಪಕ

ಹರೆಯ ಕೆಡಿಸಿತು; ಎಲ್ಲ ಹೊಲಬು ಮಾಡಿತು |

ಮರೆಯಿಸುತ್ತ ಮೈಯ ಬಳಿಕ ಕೊರಗ ನೀಡಿತು ||ಪ||

 

ಜಾರಿಬಿದ್ದ ಮನವು, ಸೂರೆಯಾದ ಬಳಿಕವೇ

ತೋರಲೀ ವಿವೇಕವರಿತು ಗೋಳುಗುಟ್ಟಿತು ||ಅ.ಪ||

 

ಬಂದದಾರಿ ಬಹಳದೂರದತ್ತ ತಂದಿತು

ಹಿಂದಿರುಗಲು ಕಾಲವಿಲ್ಲ; ಕಾಲು ಸೋತಿತು |

ಮುಂದೆಗಾಣದಾದುದಯ್ಯೋ ನಚ್ಚು ನೀಗಿತು

ಅಂದಗೇಡಿಯಾಗಿ ಮನವು ಬೆಂದು ಬಾಗಿತು ||೧ ||

 

ಕಲ್ಲನೆಸೆವ ಸಭ್ಯರೆಲ್ಲ ಗುಲ್ಲು ಮಾಳ್ಪರು

ನಲ್ಲನಿಲ್ಲ, ಪತಿಯು ಸಲ್ಲ; ತೌರು ತಳ್ಳಿತು |

ಬೆಲ್ಲವೆಲ್ಲ ತೀರಲಿರುವೆ ಸಾಲು ನಿಲ್ವುದೇ?

ಪಲ್ಲವಿಸದ ಪಾದಪದೊಳು ಪ್ರೀತಿ ಗೆಲ್ವುದೆ? ||೨ ||

 

(ತ್ರ್ಯಶ್ರತ್ರಿಪುಟ) ಆದೊಡೇನು ಮನಕ್ಕೆ ಮೂಡಿದ

ಖೇದ-ವೈರಾಗ್ಯಗಳು ಕಾಯಕೆ

ಸಾದಿಯಾದುವೆ? ಹಾದಿಗಾಣದೆ

ಮೋದದನ್ವೇಷಣೆಯೊಳಿರಲಾಂ || ೩||

********************

 

Leave a Reply

*

code