ಅಂಕಣಗಳು

Subscribe


 

ಮುಗ್ಧಾಭ್ಯರ್ಥನೆ

Posted On: Tuesday, November 10th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 104ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ  :   ನೂತನ ವಧುವಾಗಿಹ ಈ ಸ್ವೀಯಾ ಮುಗ್ಧಾ ನಾಯಿಕೆಯ ಬಾಲ್ಯಸಹಜ ಭಾವಗಳ ಸುತ್ತ ನೇಯ್ದಿರುವ ರಚನೆಯಿದು. ತನ್ನ ಆಟ-ಪಾಟಗಳೊಂದಿಗೆ ಒಡನಾಡುವ ಸಖನಂತೆ ಪತಿಯೊಂದಿಗೆ ಮಾತನಾಡುತ್ತಿರುವ ಈಕೆ ಮದುವೆಯ ಸಂಭ್ರಮವನ್ನು ಮಕ್ಕಳು ಆನಂದಿಸುವಂತೆಯೇ ಕಾಣುತ್ತಿದ್ದಾಳೆ. ತನ್ನ ಆಯ್ಕೆ, ಆದರ, ಅನುಕೂಲ-ಅನಾನುಕೂಲಗಳನ್ನು ಹಂಚಿಕೊಂಡಿರುವುದನ್ನು ಪದ್ಯವನ್ನೋದಿ ಸವಿಯಬೇಕಲ್ಲದೆ ಅದಕ್ಕೆ ವಿವರಣೆ ಅತ್ಯವಶ್ಯವೆನಿಸದು.

ಕೈಗಾರಿಕಾಕ್ರಾಂತಿಗಿಂತಲೂ ಮುಂಚಿನ ಮಕ್ಕಳಮದುವೆಯ ಕಲಾವಸ್ತು ಇಲ್ಲಿನದ್ದು. ಸಾಮಾಜಿಕವಾಗಿ ಬಾಲ್ಯವಿವಾಹವಿನ್ನೂ ಚಾಲ್ತಿಯಲ್ಲಿ ಇದ್ದ ಕಾಲಕ್ಕೆ ; ರತಿಭಾವದ ಕುರಿತು ತಿಳಿವಳಿಕೆ ಬರದ ಮಕ್ಕಳಲ್ಲಿಯೂ ಮೂಡಿದ್ದಿರಬಹುದಾದ ಭಾವಗಳ ಕುರಿತು ಕನ್ನಡಿ ಹಿಡಿದಂತಿದೆ.

ಮುಗ್ಧಾಭ್ಯರ್ಥನೆ

ರಾಗ: ಕುಂತಳವರಾಳಿ ; ತಾಳ: ಆದಿ

ಎನ್ನಯ ಕೈಹಿಡಿಯೋ ಮನೋಹರ |

ಎನ್ನಯ ಪತಿಯೆನಿಸೋ ||ಪ||

 

ನಾನೂ ನೀನೂ ಕೂಡಿ ಪಾಣಿಗ್ರಹಣ ಕೇಳಿ 

ಯಾನಂದವನು ಹೊಂದಿ ಹಾಡೋಣ ||ಅ.ಪ||

 

ಹಸೆಮಣೆಯ ಮೇಲ್ಕುಳಿತು ಹೊಸ ಬಟ್ಟೆಗಳನುಟ್ಟು

ಹಸನಾದ ಉಡುಗೊರೆಗಳನು ಹೊಂದುತ |

ಮಿಸುನಿಪ್ಪ ನಗ-ನಾಣ್ಯಗಳ ತೊಟ್ಟು ಜನರತ್ತ

ನಸುನಗೆಯ ನೋಟಗಳ ಬೀರೋಣ     || ೧||

 

ಭೂಮದೂಟದೆ ಮಾತ್ರ ಎಂಜಲು ತಿನಲಾರೆ

ಓ! ಮಹರಾಯನೆ! ಬೇರೆ ನೀಂ ಕೂರೋ!

ಸಾಮರ್ಥ್ಯಕನುಸಾರ ಉಯ್ಯಾಲೆಯಾಡೋಣ

ಓ! ಮರತೆ! ಮೆರವಣಿಗೆ ಸಾಗೋಣ !    || ೨||

 

ಆರತಿ ತಟ್ಟೆಗೆ ನೀನೇ ಹಣವ ಹಾಕೋ !

ಸೂರೆಯಾಗಲಿ ಚೆನ್ನೆಮಣೆಯಾಟ |

ದೂರಕೆಸೆಯದಿರು ಹೂಚೆಂಡಿನಾಟದಲಿ

ಜಾರಿಬಿದ್ದಳಲಾರೆ ನಾ ಜನರ ಮುಂದೆ || ೩||

 

ಪ್ರಸ್ತದ ಮನೆಯಲಿ ಉಂಡೆ-ಚಕ್ಕುಲಿಗಳ

ಅಸ್ತೋಕರಾಶಿಯ ಮೆಲ್ಲೋಣ |

ವಿಸ್ತರಿಸಿದ ಹೂಹಾಸೊಳು ನಿದ್ರಿಸೆ

ಪ್ರಸ್ತುತೆ ಬರಲೆನ್ನ ತಾಯ್; ಭಯವೆನಗೆ || ೪||

Leave a Reply

*

code