ಅಂಕಣಗಳು

Subscribe


 

ಉಪಾಯಗಾಮಿನಿ

Posted On: Saturday, August 15th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 82ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಸವತಿಯಿಂದ ನಾಯಕನನ್ನು ದೂರ ಮಾಡಿ ತನ್ನತ್ತ ಸೆಳೆದುಕೊಂಡುಬರುವ ಮಂತ್ರಾಲೋಚನೆಯಲ್ಲಿ ಸಖಿಯೊಂದಿಗೆ ಸಂಭಾಷಿಸಿದ್ದಾಳೆ ನಾಯಿಕೆ. ತನ್ನ ಬಲವನ್ನು ಪ್ರದರ್ಶಿಸಿ ಗೆಲುವ ದಾರಿ ತಿಳಿಯದ ನಾಯಿಕೆಯು ತನ್ನ ಕಳವಳವನ್ನು ಹೇಳುತ್ತಲೇ- ಅವನ ಮುಂದೆ ತಾನೇ ಹೋದರೆ? ಅಥವಾ ಸವತಿಯನ್ನು ಎಲ್ಲರೆದುರು ಧಿಕ್ಕರಿಸಿ, ಗೇಲಿ ಮಾಡಿ ಮಾತನಾಡುವುದೇ? ಚತುರೋಪಾಯಗಳನ್ನು ಬಳಸುವುದಾದರೆ ಯಾವುದು ಉತ್ತಮ? ಮದ್ದು ಮಾಟ ಮಂತ್ರಗಳನ್ನು ಮಾಡುವುದೇ? ನೀತಿಯನ್ನು ಮುಂದುಮಾಡಿಯೋ, ಭೀತಿ ಬರಿಸಿಯೋ ಅವನನ್ನು ಸೆಳೆಯಲಾದೀತೇ ಎಂದೆಲ್ಲಾ ಬಗೆಬಗೆಯಾಗಿ ಉಪಾಯದ ಪರಾಮರ್ಶನೆ ಮಾಡಿದ್ದಾಳೆ. ಒಟ್ಟಿನಲ್ಲಿ ಯಾವುದೋ ಒಂದು ದಾರಿ ಆತನನ್ನು ಕರೆದು ತರಲು ಸಾಕು, ಅದಕ್ಕಾಗಿ ತನ್ನ ಹಮ್ಮುಬಿಮ್ಮನ್ನು ಬಿಟ್ಟೇನು ಎಂದು  ಚಿಂತಾಮಗ್ನಳಾಗಿದ್ದಾಳೆ.

ಉಪಾಯಗಾಮಿನಿ

ರಾಗ : ಹಂಸನಾದ ; ತಾಳ : ತ್ರ್ಯಶ್ರಗತಿ‌ಆದಿ

ಅವಳ ಮನೆಯಿನವನನಿತ್ತಲ್ ಅವಿಸಿ ತರಲಿಕಳವೇ? || ||

ಸವತಿಯಿಂದ ಸರಸನನ್ನು ಕವಲಿಸುವುದದೆಂತೇ? || ಅ.ಪ ||

 

ಸುಳಿಯಲೇನೇ ನಾನೆ ಅತ್ತ ಸೊಗಸು ಬೀರುತ ?

ನಲಿಯಲೇನೇ ನಾನೆ ಮುಂದೆ ಮಂದಹಾಸದಿ ?

ತಿಳಿವುದೇನೇ ಮದ್ದು-ಮಾಟ-ಮಂತ್ರ-ತಂತ್ರವ ?

ಬಲವ ತೋರಿ ಗೆಲುವುದೇನೆ ? ತಿಳಿಯದಾಗಿದೆ || ೧||

 

ನಾಲ್ಕು ಹಾದಿ ಕೂಡುವಲ್ಲಿ ಅವಳನಧಟಲೇ ?

ಕುಲ್ಕು ಬೀರುವಾಕೆಯನ್ನು ಗೇಲಿ ಮಾಡಲೇ ?

ನಾಲ್ಕು ತಂತ್ರಗಳೊಳದಾವುದನ್ನು ಬಳಸಲಿ ?

ಸಿಲ್ಕಿ ಸವೆವ ಸ್ವಾಮಿಯನ್ನಿನ್ನೆಂತು ಸೆಳೆಯಲಿ ? ||೨ ||

 

ದೂತಿಯಿಂದಲಪ್ಪುವುದೇನು? ಭೀತಿ ಬರಿಸಲಪ್ಪುದೇನು ?

ನೀತಿಯತ್ತ ಬೆರಳು ತೋರಿ ಬರಿಸಲಪ್ಪುದೇ?

ಏತರದೋ ಒಂದು ದಾರಿ, ಸಾಕು ಕರೆದು ತರಲಿಕೆನ್ನ

ಚೇತನೇಶನನ್ನು; ಹಮ್ಮು-ಬಿಮ್ಮು ಬಿಟ್ಟೆನಾಂ ||೩ ||

 

Leave a Reply

*

code