ಅಂಕಣಗಳು

Subscribe


 

ವಿಳಂಬವಾರ್ತಾಹರೆ

Posted On: Wednesday, June 17th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 44ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ಇನ್ನೂ ನಾಯಕನೆಡೆಗೆ ವಯ್ಯಾರದಿಂದ ಸಮೀಪಿಸುವಷ್ಟರಲ್ಲೇ ಬೆಳಗಾಗಿ ಹೊತ್ತೇರಿತಲ್ಲ, ಪ್ರಣಯಕ್ಕೆ ಸಮಯ ಸಾಲದಾಯಿತಲ್ಲ ಎಂದು ನಾಯಿಕೆಯು ಪರಿತಪಿಸುತ್ತಿದ್ದಾಳೆ. ಮನೆಗೆಲಸ ಮುಗಿಸಿ, ಮಗುವನ್ನು ಮಲಗಿಸಿ, ನಲ್ಲನಿಗೆ ವೀಳ್ಯ ಮಡಿಸಿ ಕೊಟ್ಟು,  ಹುಸಿಕೋಪ ತೋರಿ, ಪಗಡೆಯಾಡಿ, ಅವನಿಂದ ಹೂವನ್ನು ಮುಡಿಸಿಕೊಂಡು, ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡು, ರತಿಪ್ರಕೃತಿಗೆ ಬೇಕಾದ ಸಿದ್ಧತೆ ಮಾಡಿಕೊಂಡು ಇನ್ನೇನು ಪ್ರಣಯಶೃಂಗಕ್ಕೇರುವುದಕ್ಕೆ ಸಾವಕಾಶವೆಂದು ಅನುವಾಗುತ್ತಿರುವಾಗಲೇ ಕೋಳಿ ಕೂಗಿತೆಂಬ ಅರಿವು ಅವಳನ್ನು ಖಿನ್ನಳಾಗಿಸಿದೆ, ಜವಾಬ್ದಾರಿಗಳೆಡೆಗೆ ಧಾವಂತಳನ್ನಾಗಿಸಿದೆ. ಸಂಭೋಗಶೃಂಗಾರಕ್ಕೆಳೆಸಿದ ಸ್ವೀಯೆಯೊಬ್ಬಳ ಆಸೆಗಳು ಕ್ಷಣಮಾತ್ರದಲ್ಲಿ ಒಡೆದು ವಿಪ್ರಲಂಭಕ್ಕೆಳೆಸಿತೋ ಎಂಬಂತೆ ಆಕೆಯನ್ನು ಮ್ಲಾನಳನ್ನಾಗಿಸಿದೆಯೆಂಬ ಸೂಚನೆ ಪಲ್ಲವಿಯಲ್ಲಿದ್ದರೂ, ಚರಣಗಳು ರಮ್ಯಶೃಂಗಾರದ ಬಗೆಬಗೆಯ ಹದಗಳನ್ನು ಸುಂದರವಾಗಿ ವರ್ಣಿಸಿದೆ. ಬೆರೆಯುವ, ಬೇರ್ಪಡುವ- ಎಂಬ ಶೃಂಗಾರರಸದ ಇವೆರಡೂ ಬಿಂದುಗಳ ನಡುವಿನ ಅನಂತರ ಎಷ್ಟು ದೀರ್ಘವೋ ಅಷ್ಟೇ ಅನ್ಯೋನ್ಯವೂ ಕೂಡಾ; ಸಮಯವೇ ಶತ್ರು ಎಂಬುದನ್ನು ಈ ಪದ್ಯವೇ ಸುಮನೋಹರವಾಗಿ ಸಾದರಪಡಿಸಿದೆ.  

ವಿಳಂಬವಾರ್ತಾಹರೆ

ರಾಗ: ನಾದನಾಮಕ್ರಿಯ ತಾಳ: ಮಿಶ್ರಛಾಪು

ಅಯ್ಯೋ ! ಕೋಳಿಯೆ ಕೂಗಿತು ! ಏನೆನ್ನಲಿ !

ಒಯ್ಯನೆ ಹೊತ್ತೇರಿ ಹಾಳಾಗಿ ಹೋಯಿತು || ||

 

ವಯ್ಯಾರದಿಂದಾಣ್ಮಂ ಸಲ್ಲಪಿಸುತ್ತಿರೆ || ಅ.ಪ. ||

 

ಮನೆಗೆಲಸಗಳನ್ನು ಮುಗಿಸಿ ; ಮನದ ಕೋರಿಕೆಯನ್ನು ಮೆರೆಸಿ

ಇನಿಯನು ಮಂಚಕೆ ಬರುವ ತರುಣದೊಳು |

ಅನುವು ಮಾಡಿಕೊಳ್ಳುತ್ತ ಅಡಕೆಲೆ ಕೊಡುವಾಗ || ೧||

 

ಪಗಡೆ ಹಾಸನು ಹಾಸಿ ; ಪಗಡೆ ಹೂಗಳ ಸೂಡಿ

ಸೊಗಸಿನ ಪಣಗಳ ಹೂಡಿ ಬೇಟವನಾಡಿ |

ಮಗುವನು ಮಲಗಿಸಿ ಗೆದ್ದೆನೆಂಬನಿತರೊಳ್ || ೨||

 

ಹುಸಿಬಿಗುಮಾನವ ನಸುನಗೆಯಲಿ ತೋರಿ

ರಸಿಕನ ರುಚಿಯನು ಶ್ರುತಿಮಾಡಿಸಿ |

ಒಸಗೆಯನಿಕ್ಕಿ ಸರಸಕಿಳಿವನಿತರೊಳ್ ||೩ ||

 

Leave a Reply

*

code