ಅಂಕಣಗಳು

Subscribe


 

ದೌತ್ಯದೀಕ್ಷಿತೆ

Posted On: Tuesday, June 2nd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 30ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ದೂರದಲ್ಲಿರುವ ತನ್ನ ಇನಿಯನಿಗೆ ಸಂದೇಶ ಕಳಿಸುವಲ್ಲಿ ಉದ್ಯುಕ್ತಳಾಗಿ ಕೊನೆಗೆ ಅದಾವುದೂ ಸಮಂಜಸವಲ್ಲವೆಂದು ಬಗೆಯುವ ಈಕೆ ಮೊದಲಿಗೆ ವಿರಹಿಯೆ. ಆಕೆಯನ್ನು ಅಭಿಸಾರಿಕೆಯಾಗಿಯೂ ಚಿತ್ರಿಸಿಕೊಳ್ಳುವ ಅಪಾರ ಅವಕಾಶವೂ ಇದೆ. ಪ್ರಕೃತಿಯಲ್ಲೇ ದೊರೆಯಬಹುದಾದ ಅಂದಚೆಂದದ ದೂತ-ದೂತಿಯರನ್ನು ವಿಮರ್ಶಿಸುತ್ತಾ ಅದರ ಗುಣಗಳೇ ತನ್ನ ದೌತ್ಯಕ್ಕೆ ಎರವಾದೀತು ಎಂಬುದನ್ನು ಗಮನಿಸಿದ ನಾಯಿಕೆ ಕೊನೆಗೆ ತನ್ನ ಮನಸ್ಸನ್ನೇ ಕಳಿಸುವೆನೆಂದರೂ ಅದು ಎಂದೋ ತನ್ನ ಪ್ರಿಯನಿಗೆ ಸೇರಿಹೋದುದನ್ನು ನೆನೆಯುತ್ತಾಳೆ. ಇದೇ ರಚನೆಯನ್ನು ನಾಯಕನ ಪರವಾಗಿಯೂ ಚಿತ್ರಿಸಿಕೊಂಡು (bracket ಚಿಹ್ನೆಯೊಳಗಿರುವಂತೆ ಬಳಸಿ ಪದವ್ಯತ್ಯಾಸ ಮಾಡಿಕೊಂಡರೆ) ನಾಯಿಕೆಗೆ ತನ್ನ ಸಂದೇಶವನ್ನು ಕಳಿಸುವಲ್ಲಿ ಉದ್ಯುಕ್ತನಾದವನ ಮನಸ್ಸಿನ ತುಮುಲಗಳಾಗಿಯೂ ರೂಪಿಸಿಕೊಳ್ಳಬಹುದಾಗಿದೆ.

ಈ ಸೊಗಸಾದ ಪದ್ಯವನ್ನು ಪ್ರಪ್ರಥಮವಾಗಿ ಭರತನೃತ್ಯದ ಮೂಲಕ ರಂಗಕ್ಕೆ ಅಳವಡಿಸಿದ್ದು- ದೂತೀಕರ್ಮಪ್ರಕಾಶವೆಂಬ ಪುಂಡರೀಕ ವಿಟ್ಠಲನ  ದೂತೀ ಸಂಬಂಧ ಲಕ್ಷಣಗ್ರಂಥವನ್ನು ನೃತ್ಯಕ್ಕೆ ಅಳವಡಿಸಿಕೊಳ್ಳುವ ಸಂಶೋಧನೆಗೋಸ್ಕರ. ಶಾಲಿನಿ ವಿಠಲ್ ಅವರ ಈ ನೃತ್ಯ ಸಂಶೋಧನೆಯಲ್ಲಿ ಸ್ವಯಂದೂತೀ ಎಂಬ ವಿಭಾಗಕ್ಕೆ ಈ ಪದ್ಯವು ಸಂದಿತ್ತು. ಇದನ್ನು ಮೊದಲು ನರ್ತಿಸಿದವರು ಡಾ. ಶೋಭಾ ಶಶಿಕುಮಾರ್- ಬೆಂಗಳೂರಿನ ’ಕಲಾಗೌರಿ’ಯಲ್ಲಿ.  ಕೊನೆಯ ಚರಣದ ನಂತರ ತಾನೇ ಅಭಿಸಾರಿಕೆಯಂತೆ ಸ್ವಯಂದೂತಿಯಾಗುವ ನಾಯಿಕಾಸಂಧಿ ಮಾಡಿಕೊಳ್ಳುವ ವಿನ್ಯಾಸವು ಈ ಪದ್ಯಕ್ಕೆ ದೊರಕಿತ್ತು. ಅದರ ವಿಡಿಯೋ ಸರಣಿ ಇಲ್ಲಿದೆ.  https://www.facebook.com/shaaledotcom/videos/315175349155926/ 

ದೌತ್ಯದೀಕ್ಷಿತೆ

ರಾಗ: ರತಿಪತಿಪ್ರಿಯ ; ತಾಳ: ಆದಿ

ನಲ್ಲನೆಡೆಗೆ (ನಲ್ಲೆಯೆಡೆಗೆ) ಸಂಫುಲ್ಲಸಂದೇಶವ

ಝಲ್ಲೆನೆ ಕಳುಹುವುದೆಂತು? ಸಿರಿ-

ಮಲ್ಲೆಯ ಮುಗುಳವೊಲಂತು ||ಪ||

 

ಮುಗಿಲನು ಕಳುಹಲೆ? ಕರಗೇ ಹೋಗದೆ

ಸೊಗಸಿನ ಬಣ್ಣದ ಕನಸು!

ಎಲರನು ಕೇಳಲೆ? ವಿಘಟಿತವಾಗದೆ

ಒಲುಮೆಯ ಮಲರಿನ ಗಮಲು! ||೧ ||

 

ಅರಗಿಳಿಯಾಗದೆ? ಬರಿ ಮಾತಾಳಿಗೆ

ಮರೆತೇ ಹೋಗದೆ ಕವಿತೆ!

ಸೋಗೆಯು ಸಾಗದೆ? ಕರ್ಕಶಕಂಠಕೆ

ನೀಗದೆ ನಲವಿನ ಹಾಡು! ||೨ ||

 

ಚಿಗರೆಯ ನೆನೆವುದೆ? ಅಂಜುವ ಕಣ್ಣಿಗೆ

ಸಿಗುವುದೆ ನಂಬುಗೆ ನುಡಿಯು!

ಶಶಿಯನೆ ಬೇಡಲೆ? ಶೀತಲಕರಗಳ

ವಶವೇ ನಸುಬಿಸಿ ಬಯಕೆ!    || ೩||

 

ಎನ್ನೀ ಮನವನು ಎಬ್ಬಿಸಿ ಕಳುಹಲೇ

ಇನ್ನೂ ಅದು ಇಹುದೇನು?

ಎಂದೋ ನಲ್ಲಗೆ( /ನಲ್ಲೆಗೆ) ಸೇರಿಹೋದುದ-

ನ್ನಿಂದೆಲ್ಲಿಂ ತರುವುದು ನಾನು? || ೪||

 

Leave a Reply

*

code