ಅಂಕಣಗಳು

Subscribe


 

ಚಾಟುಚೇಟ

Posted On: Saturday, November 28th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 114ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಕ-ನಾಯಿಕೆಯರು ನವನವೀನವೋ ಎಂಬಂತೆ  ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಪ್ರಕೃತ ನಾಯಿಕೆಯರಿಗೆ ಸಮದಂಡಿಯೋ ಎಂಬಂತೆ ಬರೆಯಲಾದ ನಾಯಕಾವಸ್ಥೆಗಳ ಪದ್ಯಗಳು ಪ್ರಕಟವಾಗುತ್ತಿದೆ. ಅಷ್ಟನಾಯಿಕೆಯರಿಗೆ ಪ್ರತಿಸ್ಪಂದಿಯಾಗುವ ಅಷ್ಟಾವಸ್ಥೆಗಳ ನಾಯಕರ ಶ್ರೇಣಿ ಶ್ರೀಯುತ ಗಣೇಶರದ್ದೇ ಕೊಡುಗೆ. ಆ ಲಕ್ಷಣಗಳ ಜೊತೆಜೊತೆಗೆ ಆ ನಾಯಕರ ಸ್ವಾರಸ್ಯವನ್ನು ಬಣ್ಣಿಸುವಂತೆ ನೃತ್ಯಾನುಕೂಲಿಯಾದ ಅನೇಕ ರಚನೆಗಳನ್ನು ಮಾಡಿದ್ದಾರೆ. 

ಇಂದಿನ ನಾಯಕಾಭಿವ್ಯಕ್ತಿ : ಖಂಡಿತೆಯಾದ ನಾಯಿಕೆಯನ್ನು ಸಂತೈಸುತ್ತಾ ಆಕೆಯ ಕೊಂಕು ಬಿಂಕಗಳನ್ನು ಅಂಕೆಯಲ್ಲಿಡಬೇಕೆಂದು ಇನಿಯನಾದ ತನ್ನಲ್ಲಿ ಶಂಕೆಯನ್ನು ತಾಳಬಾರದೆಂದು ಸಂಯಮದ ಹಿತನುಡಿಗಳನ್ನಾಡ್ಡುತ್ತಿರುವ  ನರ್ಮಪ್ರಸಾದಕ ನಾಯಕನಿವನು.  ಕಹಿಘಟನೆಯನ್ನು ನೆನೆಯದೆ ದುರುಳರ ಚಾಡಿಮಾತನ್ನು ಕೇಳದೆ, ತನ್ನನ್ನು ತೊರೆಯಲೆಳೆಸದೆ ಅನುನಯಿಸುವ ಈ ಹಾರ್ದ ಭಾವಕ್ಕೆ ಬೆಲೆ ನೀಡಬೇಕೆಂದು  ಬಿನ್ನವಿಸುತ್ತಾ ಒಲವ ಮರ್ಮವನ್ನು  ಹದವಾಗಿ ಅರುಹಿದ್ದಾನೆ. ಅಂತ್ಯಕ್ಕೆ ತನ್ನ ಚಾಟೂಕ್ತಿಗಳಿಂದ ಆಕೆಯನ್ನು ಮಾತಿನಲ್ಲೇ ಸಿಕ್ಕಿಹಾಕಿಸುತ್ತಾ, ತಾನು ಪ್ರೇಮದ ವ್ಯಾಪಾರಿ ಎಂದೇ ಅಂದುಕೊಳ್ಳುವುದಿದ್ದರೂ ತಾನು ನೀಡಿದ ಪ್ರೇಮ ಕಾಣಿಕೆಗಳನ್ನು ಚಕ್ರಬಡ್ಡಿ ಸಹಿತ ತೀರಿಸಬೇಕೆಂದೂ ಒಲಿಸುವ ಹಾದಿಯನ್ನೊಂದು ಹುಡುಕಿದ್ದಾನೆ. 

ಚಾಟುಚೇಟ

ರಾಗ : ಆನಂದಭೈರವಿ ; ತಾಳ : ತ್ರ್ಯಶ್ರಗತಿ ಆದಿ/ ತ್ರ್ಯಶ್ರತ್ರಿಪುಟ

ಬಿಂಕವೇಕೆ ಪಂಕಜಾನನೇ!

ಕೊಂಕು ಮಾತಿಗಂಕೆ ಬೇಡವೆ- ನಿಶ್ಶಂಕೆಯ ||ಪ||

 

ಅನುನಯಿಪ್ಪ ನವಿರುನೇಹಕ್ಕನುವು ನೀಡದೇ |

ನೆನೆವುದೇಕೆ ತಿಕ್ತಗತವನ್ನಿನಿತು ನೋಡದೇ? || ಅ.ಪ||

 

ಕರುಬಿನಿಂದ ಪೆರರು ನುಡಿವ ದುರುಳು ನುಡಿಗಳಾ |

ಗರಳವೇರಿ, ದೂರಿ ಎನ್ನ ತೊರೆಯಲೆಳೆಸುವಾ || 1||

 

ಒಲವಿನ ಪರಿಯತುಲಸೂಕ್ಷ್ಮ ಸಲಿಲಪೇಶಲ

ನಲವಿನ ಸೆಲೆ ಸುಳಿವನುಳಿದ ಗೆಲುವೆ ಸೋಲಲಾ || 2||

 

(ತ್ರ್ಯಶ್ರತ್ರಿಪುಟ) ಇರಲಿ; ವರ್ತಕವೃತ್ತಿಯೆನ್ನುದು ಮರಳಿ ಕೊಡು ನಾನಿತ್ತುದೆಲ್ಲವ |

ಸರಳಬಡ್ಡಿಯೊ ಚಕ್ರಬಡ್ಡಿಯೊ ತೆರುತ ಸಾಲದ ಸೊಬಗನೆಲ್ಲವ ||3 ||

Leave a Reply

*

code